ಮುನೆಕ್ಕನನ್ನು ಅಪ್ಪಿ ಕೆನ್ನೆಗೆ ಮುತ್ತು ಕೊಟ್ಟುಬಿಟ್ಟ ನರಸಿಂಗರಾಯ
ಮಾಡಬೇಕಿದ್ದ ಕೆಲಸಗಳನ್ನು ಮುಗಿಸಿ, ಅಂಗಳದ ಜಗುಲಿಯ ಮೇಲೆ ಕುಳಿತ ನರಸಿಂಗರಾಯ, ಅಂದು ದನಗಳನ್ನು ಮೇಯಲು ಬಿಟ್ಟು, ತಾನು ಓದಿದ ಶಂಕರ ಮೊಕಾಶಿ ಪುಣೇಕರರ 'ನಟನಾರಾಯಣಿ' ಕಾದಂಬರಿಯನ್ನು ನೆನಪಿಗೆ ತಂದುಕೊಂಡ. ಅದನ್ನು ಕುರಿತು ಬಂದಿರಬಹುದಾದ ವಿಮರ್ಶೆ ಸಿಕ್ಕರೆ ಓದಬೇಕೆಂದುಕೊಂಡ.
ಅದರಲ್ಲಿ ಬರುವ ಶೀನಪ್ಪ, ಝುಬೇದಾರು ಅವನ ಮನಸ್ಸು ಸೆಳೆದಿದ್ದರು. ಶೀನಪ್ಪನ ವ್ಯಕ್ತಿತ್ವದ ಬಗ್ಗೆ ಯೋಚಿಸುತ್ತಿರುವಾಗ ಅವನ ಮುಂದಿನಿಂದ ಹಾದು ಹೋಗುತ್ತಾ ಅಂಗಡಿ ಮುನೆಕ್ಕ, 'ಏನು ನರಸಿಂಗ ಒಬ್ಬನೆ ಸುಮ್ಮನೆ ಕುಂತುಬಿಟ್ಟಿ' ಎಂದು ತನ್ನತ್ತ ಗಮನ ಸೆಳೆದಳು. ಸಂಜೆಯ ಹೊಂಬಣ್ಣ ಅವಳನ್ನು ಆವರಿಸಿತ್ತು. ಮುಖ ನೋಡಿದ. ಎಲ್ಲೋ ಚಿನ್ನಕ್ಕನ ಹೋಲಿಕೆ ಇದೆ ಎನ್ನಿಸಿತು. ಸುಮ್ಮನೆ ಅಂದ. ಯಾವಾಗಾದರೂ ಬಾ ಅಂಗಡಿ ಕಡೆಗೆ ಎಂದಳು. 'ಹೂಂ' ಅಂದ.
ಎಂಟು ಗಂಟೆ. ಮುನೆಕ್ಕ ಕರೆದುದು ಚಿನ್ನಕ್ಕನೇ ಕರೆದುದು ಅನ್ನಿಸಿತು. ಅವಳ ಅಂಗಡಿಯತ್ತ ಹೊರಟ. ಮುನೆಕ್ಕ ಅಂದಿನ ಅಂಗಡಿ ವ್ಯವಹಾರ ಬಂದ್ ಮಾಡಿದ್ದಳು. ಅವನನ್ನು ಕಂಡು ಅಂಗಡಿ ಮುಚ್ಚಿಯಾಗಿದೆ. ಏನು ಬೇಕಿತ್ತು? ಬಾ ಒಳಿಕೆ ಎಂದು ಕರೆದಳು. ಅವಳು ಏನೇನೋ ಕೇಳುತ್ತಿದ್ದಳು. ಇವನು ಅವಳ ಮುಖವನ್ನೇ ನೋಡುತ್ತ ಆಂ, ಹೂಂ ಅನ್ನುತ್ತಿದ್ದ.

ಏನಾಗಿದೆ ನಿಂಗಿವತ್ತು ಅಂದಳು. ಏನಿಲ್ಲ ಚಿನ್ನಕ್ಕ ಅಂದ. ಲೇ ನಾನು ಚಿನ್ನಕ್ಕನಲ್ಲ, ಮುನೆಕ್ಕ. ಅವಳಾವಳೋ ಅಂದಳು. ಹಾಂ ಅಂದ. ನೀಯೇನೋ ನೆಟ್ಟಗಿಲ್ಲ ಇವತ್ತು. ಉಂಡಾಗಿದ್ರೆ ಹೋಗಿ ಪಚ್ಚೊ ಅಂದಳು. ಹಾಂ ಎಂದು ಎದ್ದ. ಬಾಗಿಲು ಹಾಕಿಕೊಳ್ಳಲು ಅವಳೂ ಎದ್ದು ಅವನ ಹಿಂದೆ ಹೆಜ್ಜೆ ಹಾಕಿದಳು.
ಗಕ್ಕನೆ ಹಿಂದಕ್ಕೆ ತಿರುಗಿದ ನರಸಿಂಗರಾಯ, ಅವಳನ್ನು ಅಪ್ಪಿ ಕೆನ್ನೆಗೆ ಮುತ್ತು ಕೊಟ್ಟುಬಿಟ್ಟ. ಮುನೆಕ್ಕ ತಬ್ಬಿಬ್ಬಾದಳು. ಎಂದೂ ಇಲ್ಲದ್ದು ನಿಂಗೇನು ಬಂತು ರೋಗ ಇವತ್ತು ಎಂದು ಬಿಡಿಸಿಕೊಂಡು, ಕೈ ಹಿಡಿದು ಎಳೆದು ಚಾಪೆಯ ಮೇಲೆ ದೂಡಿದಳು. ಕೆಳಗೆ ಬಿದ್ದ ನರಸಿಂಗರಾಯ ಎದ್ದು ಕುಳಿತ.
ಪಕ್ಕ ಕುಳಿತು ತಲೆ ನೇವರಿಸಿ, 'ಗೌರಿಯಂಥ ರಸಬಾಳೆ ಕೈಗೆ ಸಿಕ್ಕಿಸಿದಾಗ ಬಿಟ್ಟು ಓಡಿ ಹೋದೋನು ಈ ವಯಸಾದೋಳನ ಹಿಡಕೊಳ್ಳಾಕ ಬಂದೀಯಲ್ಲೋ ಬೇವರ್ಸಿ' ಎಂದು ಬೈದು, ಇದು ತರವಲ್ಲೋ ಮಗನೆ. ಮುಂದೆ ಹಿಂಗೆ ಮಾಡಬಾರ್ದು. ತಗೋ ವನಿಕೆ. ಈ ಸೇರು ಹಸಿ ಧನಿಯಾನ ಕುಟ್ಟು. ಆಗಲ್ಲ ಅಂದ್ರೆ ನಿನ್ನಮ್ಮನಿಗೆ ಹೇಳ್ತೀನಿ ಎಂದು ಬೆದರಿಸಿದಳು.
ಗೌರಿಯ ಪ್ರಸಂಗ ಇವಳಿಗೆ ತಿಳಿದುದು ಹೇಗೆಂಬ ಪ್ರಶ್ನೆಯೊಂದಿಗೆ ನರಸಿಂಗರಾಯ, ಹುರಿಯದೆ ನುರಿಯದ ಆ ಹಸಿ ಧನಿಯಾವನ್ನು ಹನ್ನೊಂದು ಗಂಟೆ ರಾತ್ರಿಯವರೆಗೆ ಕುಟ್ಟಿ- ಕುಟ್ಟಿ ದಣಿದು ಹೋದ. ಒನಕೆಯ ಏಟು ಏಟಿಗೂ ಅವಮಾನದಿಂದ ಕುಗ್ಗಿದ.
ಎರಡು ದಿನ ಅವನು ಹಾಸಿಗೆ ಬಿಟ್ಟೇಳಲಿಲ್ಲ. ರೆಟ್ಟೆಗಳಲ್ಲಿ ವಿಪರೀತ ನೋವು. ನರಳಿದ. ವಿಷಯ ತಿಳಿದ ಮುನೆಕ್ಕ ತನ್ನ ಅಂಗಡಿಯಲ್ಲಿದ್ದ ನೋವಿನೆಣ್ಣೆ ತಂದು ಖುದ್ದು ಹಚ್ಚಿ, ತಾನೇ ನಿಂತು ಬಿಸಿಬಿಸಿ ನೀರೆರೆಯುತ್ತ, ಮೆಲು ಧ್ವನಿಯಲ್ಲಿ, ಕಂಡಕಂಡ ಹೆಣ್ಣುಗಳ ಹಿಂದೆ ಬಿದ್ದೋರಾರೂ ಘನವಾಗಿ ಬದುಕಿದ್ದಿಲ್ಲ. ಈ ವಯಸ್ಸಗೇ ಕಚ್ಚೆ ಹರಕೋಬೇಡ ಎಂದು ಬೋಧಿಸಿ, ಬೇಡಬೇಡವೆಂದರೂ ಮೈಯೊರೆಸಿ, ಹುಚ್ಚು ಮುಂಡೇದೆ ಎಂದು, ನೊಂದೂ ನೋಯದಂತೆ ಅವನ ಮುಂಗುರುಳೆಳೆದು ಕಿಲಕಿಲ ನಕ್ಕಳು.












Click it and Unblock the Notifications