ಪ್ರವಾಹ ಭೀತಿಯಲ್ಲಿ ಮರ ಏರಿದ್ದ ಯಾದಗಿರಿ ತಹಶೀಲ್ದಾರ್ ರಕ್ಷಣೆ
ಕಲಬುರಗಿ, ಸಪ್ಟೆಂಬರ್.16: ವರುಣನ ಅಬ್ಬರಕ್ಕೆ ಉತ್ತರ ಕರ್ನಾಟಕದ ಬಹುಪಾಲಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಣಾಪುರ ಗ್ರಾಮದ ಸೇತುವೆ ಬಳಿ ಸಿಲುಕಿದ್ದ ಯಾದಗಿರಿ ತಹಶೀಲ್ದಾರ್ ಪಂಡಿತ್ ಬಿರಾದಾರ್ ರನ್ನು ರಕ್ಷಿಸಲಾಗಿದೆ.
ಬುಧವಾರ ಯಾದಗಿರಿಯಿಂದ ಬೀದರ್ ಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯೆ ಪ್ರವಾಹದಲ್ಲಿ ಸಿಲುಕಿದ್ದ ಪಂಡಿತ್ ಬಿರಾದಾರ್ ಅವರು ಸಹಾಯಕ್ಕಾಗಿ ಗೊಗರೆದ ಘಟನೆ ನಡೆಯಿತು.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಾದಗಿರಿ ತಹಶೀಲ್ದಾರ್ ಪಂಡಿತ್ ಬಿರಾದಾರ್ ಅವರು ಮೊದಲು ಸೇತುವೆಯನ್ನು ದಾಟಿದ್ದಾರೆ. ನಂತರದಲ್ಲಿ ಕಾರು ಪ್ರವಾಹದಲ್ಲಿ ಸಿಲುಕಿದ್ದು, ತಕ್ಷಣ ಕಾರಿನಿಂದ ಇಳಿದ ತಹಶೀಲ್ದಾರ್ ಅಲ್ಲೇ ಇದ್ದ ಮರವೊಂದನ್ನು ಏರಿ ಕುಳಿತಿದ್ದಾರೆ.

ಮರದ ಮೇಲೆ ಕುಳಿತು ಸಹಾಯಕ್ಕಾಗಿ ಮನವಿ:
ಮಳೆಯ ಹೊಡೆತದಿಂದ ಸೃಷ್ಟಿಯಾದ ಪ್ರವಾಹದ ಮಧ್ಯೆ ಮರದ ಮೇಲೇರಿ ಕುಳಿತ ಯಾದಗಿರಿ ತಹಶೀಲ್ದಾರ್ ಪಂಡಿತ್ ಬಿರಾದಾರ್ ಅವರು ತಮ್ಮ ಸಹಾಯಕ್ಕಾಗಿ ಗೊಗರೆದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ತಹಶೀಲ್ದಾರ್ ಅರುಣ್ ಕುಮಾರ್ ಕುಲಕರ್ಣಿ, ಡಿವೈಎಸ್ಪಿ ವೀರಭದ್ರಯ್ಯ, ಸಿಪಿಐ ಮಹಾಂತೇಶ ಪಾಟೀಲ್, ಪಿಎಸ್ಐ ಸಂತೋಷ್ ರಾಥೋಡ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ತಹಶೀಲ್ದಾರ್ ಪಂಡಿತ್ ಬಿರಾದಾರ್ ರನ್ನು ರಕ್ಷಿಸಿದ್ದಾರೆ.












Click it and Unblock the Notifications