ಕಲಬುರಗಿ; ಪಂಢರಪುರಕ್ಕೆ ಭಕ್ತರ ಭೇಟಿಗೆ ನಿಷೇಧ
ಕಲಬುರಗಿ, ನವೆಂಬರ್ 23 : ಮಹಾರಾಷ್ಟ್ರದ ಸೊಲ್ಹಾಪುರದಲ್ಲಿನ ಪಂಢರಪುರ ಕ್ಷೇತ್ರಕ್ಕೆ ಭಕ್ತರು ಭೇಟಿ ನೀಡುವುದಕ್ಕೆ ಕಲಬುರಗಿ ಜಿಲ್ಲಾಡಳಿತ ನಿಷೇಧ ಹೇರಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪಂಢರಾಪುರದಲ್ಲಿ ನಡೆಯಲಿರುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಅದರಲ್ಲೂ ಕಲಬುರಗಿ ಜಿಲ್ಲೆಯಿಂದ ಭಕ್ತರು ದಿಂಡಿಸ ಮತ್ತು ಪಲ್ಲಕ್ಕಿಯೊಂದಿಗೆ ತೆರಳುವುದಕ್ಕೆ ನಿಷೇಧ ಹೇರಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ವಿ. ವಿ. ಜೋತ್ನ್ಸಾ ಈ ಕುರಿತು ಆದೇಶ ಹೊರಡಿಸಿದ್ದಾರೆ. ಪ್ರತಿ ವರ್ಷ ಪಂಢರಪುರದಲ್ಲಿ ನಡೆಯುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ರಾಜ್ಯಗಳಿಂದ ಸುಮಾರು 5 ರಿಂದ 6 ಲಕ್ಷ ಭಕ್ತಾದಿಗಳು ಆಗಮಿಸುವುದು ವಾಡಿಕೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸೊಲ್ಹಾಪುರ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್ಪಿಸಿ ಕಲಂ 144ರನ್ವಯ ನವೆಂಬರ್ 24 ರಿಂದ 26ರವರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ.
ಬಾಂಬೆ ಪೊಲೀಸ್ ಕಾಯ್ದೆ 37ರ ಅನ್ವಯ 5 ಜನಕ್ಕಿಂತ ಹೆಚ್ಚಿಗೆ ಜನರು ಸೇರುವುದು ನಿಷೇಧಿಸಿದೆ. ಆದ್ದರಿಂದ, ಕರ್ನಾಟಕದಿಂದ ಪಂಢರಾಪುರಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ.
ಭಾರತದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 17,80,208. ಸಕ್ರಿಯ ಪ್ರಕರಣಗಳ ಸಂಖ್ಯೆ 81,512. ಇದುವರೆಗೂ 46,623 ಜನರು ಮೃತಪಟ್ಟಿದ್ದಾರೆ.












Click it and Unblock the Notifications