Breaking; ಪಿಎಸ್ಐ ಹಗರಣ; ದಿವ್ಯಾ ಹಾಗರಗಿ 11 ದಿನ ಸಿಐಡಿ ವಶಕ್ಕೆ
ಕಲಬುರಗಿ, ಏಪ್ರಿಲ್ 29 ; ಪಿಎಸ್ಐ ನೇಮಕಾತಿ ಹಗರಣದ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು 11 ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸರು ದಿವ್ಯಾ ಹಾಗರಗಿ ಬಂಧಿಸಿದ್ದರು.
ಶುಕ್ರವಾರ ಕಲಬುರಗಿಯ 3ನೇ ಜೆಎಂಎಫ್ಸಿ ಕೋರ್ಟ್ ಪಿಎಸ್ಐ ನೇಮಕಾತಿ ಹಗರಣದ ಆರೋಪಿಗಳಾದ ದಿವ್ಯಾ ಹಾಗರಗಿ ಸೇರಿದಂತೆ ಇತರ 6 ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಿದೆ. ಹಗರಣದ ಆರೋಪಿಗಳಾದ ಸುನಂದಾ, ಶಾಂತಿಬಾಯಿ ಇನ್ನೂ ತಲೆಮರೆಸಿಕೊಂಡಿದ್ದಾರೆ.

ಪುಣೆಯಲ್ಲಿ ಬುಧವಾರ ರಾತ್ರಿ ಕರ್ನಾಟಕದ ಸಿಐಡಿ ಪೊಲೀಸರು ದಿವ್ಯಾ ಹಾಗರಗಿ ಸೇರಿದಂತೆ 5 ಆರೋಪಿಗಳನ್ನು ಬಂಧಿಸಿದ್ದರು. ಶುಕ್ರವಾರ ಕಲಬುರಗಿಗೆ ಕರೆತಂದು ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ದಿವ್ಯಾ ಹಾಗರಗಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲೀಶ್ ಮಾಧ್ಯಮ ಶಾಲೆಯ ಮುಖ್ಯಸ್ಥೆ. ದಿವ್ಯಾ ಹಾಗರಗಿ ಪತಿಯನ್ನು ಸಿಐಡಿ ಪೊಲೀಸರು ಈಗಾಗಲೇ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ದಿವ್ಯಾ ಜೊತೆಗೆ ಆರೋಪಿಗಳಾದ ಅರ್ಚನಾ, ಸುನೀತಾ, ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದ ಸೊಲ್ಹಾಪುರ ಮರಳು ವ್ಯಾಪಾರಿ ಸುರೇಶ್ ಕಾಟೇಗಾಂವ, ಕಾಳಿದಾಸ ಅವರನ್ನು ಸಹ ಸಿಐಡಿ ವಶಕ್ಕೆ ನೀಡಲಾಗಿದೆ.
ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಜ್ಯೋತಿ ಪಾಟೀಲ ಎಂಬ ಆರೋಪಿ ಬಂಧಿಸಿದ್ದರು. ಅವರ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದಾಗ ಆರೋಪಿಗಳು ಮಹಾರಾಷ್ಟ್ರದಲ್ಲಿ ಇರುವ ಮಾಹಿತಿ ಸಿಕ್ಕಿತ್ತು.
ಮೊಬೈಲ್ ಲೋಕೇಷನ್ ಪತ್ತೆ ಹಚ್ಚಿದ ಪೊಲೀಸರು ಮಹಾರಾಷ್ಟ್ರ ಪೊಲೀಸರ ನೆರವಿನೊಂದಿಗೆ ಪುಣೆಯಲ್ಲಿ ದಿವ್ಯಾ ಹಾಗರಗಿ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿದ್ದರು.












Click it and Unblock the Notifications