ವಿವಾದಕ್ಕೆ ಕಾರಣವಾದ 'ಬಹಮನಿ ಉತ್ಸವ' ಆಚರಣೆ
ಕಲಬುರಗಿ, ಫೆಬ್ರವರಿ 14 : ಕರ್ನಾಟಕ ಸರ್ಕಾರ ಮಾರ್ಚ್ 6ರಂದು 'ಬಹಮನಿ ಸುಲ್ತಾನ ಉತ್ಸವ' ಆಚರಣೆ ಮಾಡಲು ಮುಂದಾಗಿದೆ. ಸರ್ಕಾರದ ಈ ನಡೆ ವಿರೋಧಕ್ಕೆ ಕಾರಣವಾಗಿದ್ದು, ಉತ್ಸವ ಆಚರಣೆ ಮಾಡಬಾರದು ಎಂಬ ಒತ್ತಾಯ ಕೇಳಿಬಂದಿದೆ.
'ಕಬಲುರಗಿಯಲ್ಲಿ ಬಹಮನಿ ಉತ್ಸವ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಬಹಮನಿ ಸುಲ್ತಾನರ ಆಳ್ವಿಕೆ ಗತಕಾಲದ ವೈಭವ ಬಿಂಬಿಸುವ ಉತ್ಸವವಿದಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ನವ ನಿರ್ಮಾಣ ಸೇನೆ ಮತ್ತು ವಿವಿಧ ಸಂಘಟನೆಗಳು ಉತ್ಸವ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಬಹಮನಿ ಉತ್ಸವ ಆಚರಣೆ ಮಾಡಬಾರದು ಎಂದು ಒತ್ತಾಯಿಸಿವೆ.
ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಮಾತನಾಡಿ, 'ಕರ್ನಾಟಕ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಮುಳ್ಳಾಗಿ, ಕನ್ನಡಿಗರನ್ನು ಗುಲಾಮರಂತೆ ಕಂಡ ಬಹಮನಿ ಸುಲ್ತಾನರ ಉತ್ಸವವನ್ನು ಮಾಡಬಾರದು' ಎಂದು ಆಗ್ರಹಿಸಿದರು.
'ಕಲಬುರಗಿ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ರಾಷ್ಟ್ರಕೂಟರು ಇಲ್ಲಿ ಆಳ್ವಿಕೆ ಮಾಡಿದ್ದಾರೆ. ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಸಾಹಿತ್ಯ, ಕಲೆ ನಾಶ ಮಾಡಿದ್ದ ಬಹಮನಿ ಸುಲ್ತಾನರ ಉತ್ಸವ ಮಾಡುವುದು ಎಷ್ಟು ಸರಿ?' ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.