ಕಲಬುರಗಿ : ಸಾವಿನಲ್ಲೂ ಒಂದಾದ ತಾಯಿ, ಮಗ
ಕಲಬುರಗಿ, ಅಕ್ಟೋಬರ್ 13 : ತಾಯಿ ಪ್ರೀತಿಯೆ ಹಾಗೇ. ತನ್ನ ಕರುಳ ಬಳ್ಳಿಗೆ ಏನಾದರೂ ಆದರೆ ಆ ಹೃದಯ ಮಿಡಿಯುತ್ತದೆ. ಇಲ್ಲಿ ಆಗಿರುವುದೂ ಅದೇ. ದುಷ್ಕರ್ಮಿಗಳು ಹಣಕ್ಕಾಗಿ ಪುತ್ರನನ್ನು ಅಪಹರಿಸಿದ್ದರು. ಹಣ ನೀಡಿದರೂ ಅವರು ಪುತ್ರನನ್ನು ಕೊಂದು ಹಾಕಿದ್ದಾರೆ. ಪುತ್ರನ ಸಾವಿನ ಸುದ್ದಿ ಕೇಳಿ ತಾಯಿಯೂ ಬಾರದ ಲೋಕಕ್ಕೆ ಹೆಜ್ಜೆ ಹಾಕಿದ್ದಾರೆ.
ಒಂದು ಕಡೆ ಅನಾಥವಾಗಿ ಬಿದ್ದಿರುವ ಶವ. ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿರುವ ತಾಯಿ. ಮುಗಿಲು ಮುಟ್ಟಿರುವ ಸಂಬಂಧಿಕರ ಆಕ್ರಂದನ. ಇಂತಹ ಮನಕಲಕುವ ಘಟನೆ ನಡೆದಿರುವುದು ಕಲಬುರಗಿ ಹೊರವಲಯದ ತಾಜ್ ಸುಲ್ತಾನ್ ಪುರ್ ಗ್ರಾಮದಲ್ಲಿ.

ದುಷ್ಕರ್ಮಿಗಳಿಂದ ಹತ್ಯೆಯಾಗಿರುವುದು ಮೌನೇಶ್. 15 ವರ್ಷಗಳಿಂದ ಜೆಸ್ಕಾಂನಲ್ಲಿ ಗುತ್ತಿಗೆದಾರನಾಗಿ ಮೌನೇಶ್ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 7ರಂದು ಕೆಲಸಕ್ಕೆ ಹೋದವರು. ಮಧ್ಯಾಹ್ನ ತಮ್ಮ ಗುರುನಾಥ್ಗೆ ಕರೆ ಮಾಡಿ, ಸರ್ಗೆ ಹಣ ಬೇಕಾಗಿದೆ. ಮನೆಯಲ್ಲಿ 6 ಲಕ್ಷ ರೂ. ಇದೆ ತಂದುಕೊಡು ಎಂದು ಹೇಳಿದ್ದಾರೆ.
ಅಣ್ಣನ ಮಾತಿನಂತೆ ಮೌನೇಶ್ ಬೈಕ್ ತೆಗೆದುಕೊಂಡು ಬಂದಿದ್ದ ವ್ಯಕ್ತಿಗೆ ಗುರುನಾಥ್ ಹಣ ಕೊಟ್ಟಿದ್ದಾರೆ. ನಂತರ ಮೌನೇಶ್ ಮೊಬೈಲ್ ಆಫ್ ಆಗಿದೆ. ರಾತ್ರಿ 10.30ಕ್ಕೆ ಪೋನ್ ಮಾಡಿ ಬಸವಕಲ್ಯಾಣದಲ್ಲಿದ್ದೇನೆ. 2 ಗಂಟೆಯಲ್ಲಿ ಬರುವೆ ಎಂದು ಹೇಳಿದ್ದಾರೆ ಮೌನೇಶ್. ನಂತರ ಮೊಬೈಲ್ ಆಫ್ ಆಗಿದೆ.
ಮೌನೇಶ್ಗೆ ಕಾದು-ಕಾದು ಸುಸ್ತಾದ ಮನೆಯವರು ಗ್ರಾಮೀಣ ಠಾಣೆಗೆ ದೂರು ಕೊಟ್ಟಿದ್ದಾರೆ. ಐದು ದಿನಗಳ ಬಳಿಕ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನರೋಣಾ ಬಳಿ ಅಪರಿಚಿತ ಶವ ಸಿಕ್ಕಿದೆ. ಶವದ ವಿವರ ಸಂಗ್ರಹಿಸಿದಾಗ ಮೌನೇಶ್ ಹತ್ಯೆಯಾಗಿರುವುದು ತಿಳಿದುಬಂದಿದೆ. ಮೌನೇಶ್ ಅಪಹರಣವಾಗಿದ್ದಾನೆ, ಹಣ ಕೊಟ್ಟಿದ್ದು ಅಪಹರಣ ಮಾಡಿದವರಿಗೆ ಎಂಬದು ನಂತರ ತಿಳಿದಿದೆ.
ಕಳೆದ ವರ್ಷ ಮೌನೇಶ್ ತಂದೆ ತೀರಿಕೊಂಡಿದ್ದರು. ಅದಾದ ಬಳಿಕ ಆರು ತಿಂಗಳ ಹಿಂದೆ ಕಿರಿಯ ಸಹೋದರ ಗುಂಡಪ್ಪ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮನೆಗೆ ಆಸರೆಯಾಗಿದ್ದ ಮೌನೇಶ್ ಕೊಲೆಯಾಗಿ ಹೋಗಿದ್ದಾರೆ. ಮೌನೇಶ್ ತಾಯಿ ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕುಟುಂಬದವರು, ಸಂಬಂಧಿಕರು ತೀವ್ರ ಶೋಕದಲ್ಲಿದ್ದಾರೆ.
ವಿಶೇಷ ತಂಡ ರಚನೆ : 'ಮೌನೇಶ್ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದರು. ಈಗ ಹತ್ಯೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಪಹರಣ ಮತ್ತು ಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಹಂತಕರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಲಾಗಿದೆ' ಎಂದು ಎಸ್ಪಿ ಎನ್ ಶಶಿಕುಮಾರ್ ಹೇಳಿದ್ದಾರೆ.
ಸಾವಿನಲ್ಲೂ ಒಂದಾಗಿರುವ ತಾಯಿ ಮತ್ತು ಮಗನ ಕಳೆಬರಹವನ್ನ ಕಂಡು ಇಡೀ ಗ್ರಾಮವೇ ಕಣ್ಣಿರು ಹಾಕುತ್ತಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಹರಣ, ಹತ್ಯೆ ಮಾಡಿದವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ.












Click it and Unblock the Notifications