ನರೇಂದ್ರ ಮೋದಿಗೆ ಹೆದರುವ ನಾಯಕ ನಾನಲ್ಲ : ಖರ್ಗೆ
ಕಲಬುರಗಿ, ಏಪ್ರಿಲ್ 16 : 'ನರೇಂದ್ರ ಮೋದಿ ಎಂದ ಕೂಡಲೇ ಹೆದರುವ ನಾಯಕ ನಾನಲ್ಲ. ಹಿಂದೆಯೂ ಯಾರಿಗೂ ಹೆದರಿಲ್ಲ. ಮುಂದೇಯೂ ಹೆದರುವ ಪ್ರಶ್ನೆ ಇಲ್ಲ' ಎಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮಂಗಳವಾರ ಕಲಬುರಗಿಯ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಚಾರ ನಡೆಸಿದರು. ಕಾಲೇಜಿನ ವಿದ್ಯಾರ್ಥಿಗಳ ಜೊತೆ ಅವರು ಸಂವಾದವನ್ನು ನಡೆಸಿದರು.
ಸಂವಾದ ಕಾರ್ಯಕ್ರಮದಲ್ಲಿ ಸ್ವಾಗತ ಕೋರುವ ವೇಳೆ ಕೆಲವು ವಿದ್ಯಾರ್ಥಿಗಳು ಮೋದಿ ಪರ ಘೋಷಣೆ ಕೂಗಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ನಿಮಗೆ ಕೆಲ ನೈಜ ಸ್ಥಿತಿಯ ಬಗ್ಗೆ ಅರಿವು ಮೂಡಿಸುತ್ತೇನೆ. ನಿಮಗೆ ಸರಿ ಎನಿಸಿದರೆ ಅದನ್ನು ಸ್ವೀಕರಿಸಿ, ಇಲ್ಲವಾದರೆ ನಿರ್ಣಯವನ್ನು ತೆಗೆದುಕೊಳ್ಳಲು ಸಂವಿಧಾನ ನಿಮಗೆ ಸ್ವಾತಂತ್ರ್ಯವನ್ನು ನೀಡಿದೆ' ಎಂದರು.
ಏಪ್ರಿಲ್ 23ರಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ್ ಅವರು ಕಣದಲ್ಲಿದ್ದಾರೆ....

ನರೇಂದ್ರ ಮೋದಿಗೆ ಪ್ರಶ್ನಿಸುತ್ತೇನೆ
'ನರೇಂದ್ರ ಮೋದಿ ಅವರನ್ನು ಸಮೀಪದಿಂದ ನೋಡಿದ್ದೇನೆ. ಪ್ರತಿ ಅಧಿವೇಶನ ನಡೆಯುವಾಗ ನಾನು ನೇರವಾಗಿ ಮೋದಿಗೆ ಪ್ರಶ್ನಿಸುತ್ತೇನೆ. ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ಹಕ್ಕನ್ನು ಕಲಬುರಗಿಯ ಜನರು ನನಗೆ ನೀಡಿದ್ದಾರೆ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಎಂದೂ ಹೆದರಿಲ್ಲ, ಹೆದರುವುದಿಲ್ಲ
'ನರೇಂದ್ರ ಮೋದಿ ಎಂದ ಕೂಡಲೇ ಹೆದುರುವ ನಾಯಕ ನಾನಲ್ಲ, ಹಿಂದೆಯೂ ಹೆದರಿಲ್ಲ. ಮುಂದೇಯೂ ಹೆದರುವ ಪ್ರಶ್ನೆ ಇಲ್ಲ. ವಿದ್ಯಾರ್ಥಿಗಳಾದ ನೀವುಗಳು ಪ್ರಜ್ಞಾವಂತರು, ವಿದ್ಯಾವಂತರು ಭಾವುಕರಾಗಬೇಡಿ. ಕಲಬುರಗಿ ಜಿಲ್ಲೆಗೆ ಬಿಜೆಪಿ ಅಥವಾ ಮೋದಿಯ ಕೊಡುಗೆ ಏನಿದೆ ಎಂಬುವುದನ್ನು ಹೇಳಿ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅಭಿವೃದ್ಧಿ ಕಾರ್ಯ ನೋಡಿ ಮತ ನೀಡಿ
'ನಮಗೆ ಕೈಯಲ್ಲಿ ಅಧಿಕಾರ ಸಿಕ್ಕಾಗ ನರೇಂದ್ರ ಮೋದಿ ರಾಜ್ಯದಲ್ಲಿಯೂ ನಾನು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೆ, ಅವರ ಅಧಿಕಾರದ ಅವಧಿಯಲ್ಲಿ ನಮ್ಮ ಕಲಬುರಗಿಗೆ ಅವರ ಕೊಡುಗೆ ಏನು?. ಸುಮ್ಮನ್ನೆ ನಿಮ್ಮನ್ನ ತಪ್ಪು ದಾರಿಗೆ ಕೊಂಡೊಯ್ಯುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ನಂತರ ಮತನೀಡಿ' ಎಂದು ಖರ್ಗೆ ಮನವಿ ಮಾಡಿದರು.

ಮತ ಅಭಿವೃದ್ಧಿ ಪರವಾಗಿರಲಿ
'371 ಜೆ ಕಲಂ ಜಾರಿಯಾದ ಮೇಲೆ 31000 ಉದ್ಯೋಗಗಳು ಸೃಷ್ಟಿಯಾಗಿವೆ, ಮೀಸಲು ಬಜೆಟ್ ಬಂದಿದೆ. ಅಭಿವೃದ್ಧಿ ಕಾಮಗಾರಿಗಳು ಆಗಿವೆ. ಮಾಹಿತಿ ಹಕ್ಕಿನ ಮೂಲಕ ರಿಪೋರ್ಟ್ ಕಾರ್ಡ್ ನೋಡಿ ಮತ ಚಲಾಯಿಸಿ, ನಿಮ್ಮ ಮತ ಅಭಿವೃದ್ಧಿಯ ಪರ ಇರಲಿ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.












Click it and Unblock the Notifications