ಕಲಬುರಗಿಗೆ ಸೈಬರ್ ಕ್ರೈಂ ಲ್ಯಾಬ್ ಮಂಜೂರು, ವಿಶೇಷತೆಗಳು ಏನು?
ಕಲಬುರಗಿ, ನವೆಂಬರ್ 17: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿಯಲ್ಲಿ ಸೈಬರ್ ಕ್ರೈಮ್ ಲ್ಯಾಬ್ ನಿರ್ಮಾಣ ಮಾಡಲು ಅನುಮೋದನೆ ನೀಡಿದೆ. 2024-25ನೇ ಸಾಲಿನ ಮಂಡಳಿಯ ಪ್ರಾದೇಶಿಕ ನಿಧಿ ಅಡಿಯಲ್ಲಿ ಈ ಲ್ಯಾಬ್ ಸ್ಥಾಪನೆ ಮಾಡಲು ಮಂಜೂರಾತಿ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಮಾದರಿಯ ಮೊದಲ ಲ್ಯಾಬ್ ಇದಾಗಿದೆ ಎಂದು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಕಾರ್ಯದರ್ಶಿಗಳು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ 2024-25ನೇ ಸಾಲಿನ ಕ.ಕ.ಪ್ರ.ಅ.ಮಂಡಳಿಯ ಪ್ರಾದೇಶಿಕ ನಿಧಿ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಕಾಮಗಾರಿಗೆ ಮಂಜೂರಾತಿ ನೀಡುವ ಕುರಿತು ಎಂಬ ವಿಷಯ ಒಳಗೊಂಡಿದೆ.

ಆದೇಶದ ಅನ್ವಯ ಪೊಲೀಸ್ ಟ್ರೈನಿಂಗ್ ಮಹಾವಿದ್ಯಾಲಯ ಕಲಬುರಗಿಯಲ್ಲಿ ಸೈಬರ್ ಕ್ರೈಮ್ ಲ್ಯಾಬ್ ನಿರ್ಮಾಣ ಕಾಮಗಾರಿಗೆ 16.70 ಲಕ್ಷ ರೂ. ಅನುದಾನ ನೀಡಲಾಗಿದೆ. ಅಲ್ಲದೇ ಕಲಬುರಗಿಯಲ್ಲಿ ಸ್ಥಾಪನೆಯಾಗುತ್ತಿರುವ ಸೈಬರ್ ಕ್ರೈಂ ಲ್ಯಾಬ್ಗೆ ಉಪಕರಣ ಮತ್ತು ಸಾಫ್ಟ್ವೇರ್ ಸರಬರಾಜು ಮಾಡಲು ಸಹ 42.15 ಲಕ್ಷ ರೂ. ಅನುದಾನವನ್ನು ನೀಡಲಾಗುತ್ತಿದೆ.
ಪ್ರಸ್ತಾವನೆ ಏನಿತ್ತು?: ಸರ್ಕಾರದ ಆದೇಶದಂತೆ 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಒದಗಿಸಲಾಗಿರುವ ರೂ. 5000 ಕೋಟಿಗಳ ಅನುದಾನದಲ್ಲಿ ಜಿಲ್ಲಾ ಹಾಗೂ ತಾಲ್ಲೂಕುಗಳಿಗೆ ಡಾ. ಡಿ. ಎಂ. ನಂಜುಂಡಪ್ಪ ವರದಿಯನ್ವಯ CDI-Index ಆಧರಿಸಿ ಅನುದಾನ ಹಂಚಿಕೆ ಮಾಡಿ, ಕ್ರಿಯಾಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸಲು ಸರ್ಕಾರದಿಂದ ಆದೇಶಿಸಲಾಗಿರುತ್ತದೆ. ಅದರಲ್ಲಿ ಪ್ರಾದೇಶಿಕ ನಿಧಿಗೆ ರೂ.150 ಕೋಟಿಗಳ ಅನುದಾನವನ್ನು ನಿಗದಿಪಡಿಸಲಾಗಿರುತ್ತದೆ.
ಪೊಲೀಸ್ ಅಧೀಕ್ಷಕರು ಮತ್ತು ಪ್ರಾಂಶುಪಾಲರು, ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿ ಅವರು ಸೈಬರ್ ಅಪರಾಧಿಗಳ ತನಿಖೆ ಮತ್ತು ಸಾಕ್ಷ್ಯ ಸಂಗ್ರಹಣೆ ಬಗ್ಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲು ಮತ್ತು ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳು ಸಂಭವಿಸದಂತೆ ಜಾಗೃತಿ ಮೂಡಿಸಲು ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿಯಲ್ಲಿ ಒಂದು ಸೈಬರ್ ಲ್ಯಾಬ್ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ರೂ. 58,84,161ಗಳ ಅನುದಾನ ಬಿಡುಗಡೆ ಮಾಡಲು ಕೋರಿದ್ದರು.
2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ನಿಧಿ ಯೋಜನೆ ಅಡಿಯಲ್ಲಿ ಪೊಲೀಸ್ ಟ್ರೈನಿಂಗ್ ಮಹಾವಿದ್ಯಾಲಯ, ಕಲಬುರಗಿಯಲ್ಲಿ ಸೈಬರ್ ಕ್ರೈಂ ಲ್ಯಾಬ್ ಸ್ಥಾಪಿಸಲು ಕಾಮಗಾರಿಗಳಿಗೆ ಮಂಜೂರಾತಿ ನೀಡಲು ಮಾನ್ಯ ಅಧ್ಯಕ್ಷರು, ಕ.ಕ.ಪ್ರ.ಅ.ಮಂಡಳಿ, ಕಲಬುರಗಿ ಕೋರಿದ್ದರು.
ಒಟ್ಟು 58.85 ಲಕ್ಷ ರೂ.ಗಳ ಮೊತ್ತಕ್ಕೆ ಮಂಜೂರಾತಿಯನ್ನು ನೀಡಲಾಗಿದೆ. ಅಲ್ಲದೇ ಮುಂದೆ ನಡೆಯುವ ಮಂಡಳಿಯ ಸಭೆಯಲ್ಲಿ ಘಟನೋತ್ತರ ಮಂಜೂರಾತಿ ಪಡೆಯುವ ಷರತ್ತಿಗೊಳಪಟ್ಟು ಹಾಗೂ ಈ ಷರತ್ತುಗಳಿಗೆ ಒಳಪಟ್ಟು ಮಂಜುರಾತಿ ನೀಡಿ, ಅನುಷ್ಠಾನಕ್ಕಾಗಿ ಪ್ರಾಂಶುಪಾಲರು, ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿ ಅವರಿಗೆ ವಹಿಸಿ ಆದೇಶಿಸಲಾಗಿದೆ ಎಂದು ತಿಳಿಸಿದೆ.
ಷರತ್ತುಗಳು
* ಜಿಲ್ಲಾಧಿಕಾರಿಗಳು/ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಅವರು ನಿರ್ಮಿತಿ ಕೇಂದ್ರ, ಕೆ.ಆರ್.ಐ.ಡಿ.ಎಲ್ ಹಾಗೂ ಕೆ.ಎಸ್.ಎಚ್.ಸಿ. ಅನುಷ್ಠಾನ ಇಲಾಖೆಗಳಗೆ ಕಾಮಗಾರಿಗಳನ್ನು ವಹಿಸುವಾಗ ವಿನಾಯಿತಿ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳತಕ್ಕದ್ದು.
* ನಿರ್ಮಿತಿ ಕೇಂದ್ರ, ಕೆ.ಆರ್.ಐ.ಡಿ.ಎಲ್ ಹಾಗೂ ಕೆ.ಎಸ್.ಎಚ್.ಸಿ ಇಲಾಖೆಗಳಿಗೆ ಸರ್ಕಾರದಿಂದ ನೀಡಿದ 4(ಜಿ) ವಿನಾಯಿತಿ ಮೀತಿ ಮೀರದಂತೆ ಕಾಮಗಾರಿಗಳನ್ನು ವಹಿಸಲು ಕ್ರಮ ಕೈಗೊಳ್ಳುವುದು.
* ನಿರ್ಮಿತಿ ಕೇಂದ್ರ, ಕೆ.ಆರ್.ಐ.ಡಿ.ಎಲ್. ಹಾಗೂ ಕೆ.ಎಸ್.ಎಚ್.ಸಿ ಅನುಷ್ಠಾನ ಇಲಾಖೆಗಳು 4(ಜಿ) ವಿನಾಯಿತಿ ಇರುವಂತಹ ಕಾಮಗಾರಿಗಳನ್ನು ಮಾತ್ರ ತೆಗೆದುಕೊಳ್ಳತಕ್ಕದ್ದು. ಒಂದು ವೇಳೆ 4(ಜಿ) ವಿನಾಯಿತಿ ಇಲ್ಲವಾದ್ದಲ್ಲಿ ಅಂತಹ ಕಾಮಗಾರಿಗಳನ್ನು ತೆಗೆದುಕೊಂಡು ನಿರ್ವಹಿಸಿದರೇ ಅನುಷ್ಠಾನ ಇಲಾಖೆಯವರೇ ನೇರ ಹೊಣೆಗಾರರು.
* ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಮಂಜೂರಾತಿ ನೀಡಿದ ಕಾಮಗಾರಿಗಳು ಈ ಹಿಂದೆ ಕೆ.ಕೆ.ಆರ್.ಡಿ.ಬಿ. ಅಡಿಯಲ್ಲಿ ಹಾಗೂ ಇತರೆ ಯಾವುದೇ ಇಲಾಖೆಯ ಯೋಜನೆ ಅಡಿಯಲ್ಲಿ ತೆಗೆದುಕೊಂಡಿರುವುದಿಲ್ಲ ಮತ್ತು ಪ್ರಸ್ತುತ ವರ್ಷದಲ್ಲಿ ಯಾವುದೇ ಯೋಜನೆಯಡಿಯಲ್ಲಿ ಪ್ರಸ್ತಾಪಿಸಿರುವುದಿಲ್ಲ ಎಂಬುವುದರ ಕುರಿತು ಪರಿಶೀಲಿಸಿ ಖಚಿತ ಪಡಿಸಿಕೊಂಡ ನಂತರವೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳುವುದು.
* ಕರ್ನಾಟಕ ಸರ್ಕಾರ/ ಭಾರತ ಸರ್ಕಾರದಿಂದ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ವಿನ್ಯಾಸದಂತೆ ಸದರಿ ಕಾಮಗಾರಿಗಳು ಇರುವುದನ್ನು ಖಚಿತಪಡಿಸಿಕೊಂಡು ಅನುಷ್ಠಾನಗೊಳಿಸುವುದು. ಇತರೆ ಬೇರೆ ಕಾಮಗಾರಿಗಳು/ ಕಾರ್ಯಕ್ರಮಗಳು ಪ್ರಸ್ತಾಪಿಸಬೇಕಾಗಿದ್ದಲ್ಲ. ಅವುಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳು/ ವಿನ್ಯಾಸವನ್ನು ಸಂಬಂಧಪಟ್ಟ ಅಡಳಿತಾತ್ಮಕ ಇಲಾಖೆಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದು ಅನುಷ್ಠಾನಗೊಳಿಸುವುದು.
* ಉಪಕರಣಗಳು/ ಪೀಠೋಪಕರಣಗಳಿಗೆ ಸಂಬಂಧಿಸಿದಂತೆ, ಘಟಕದರ, ಅನುಷ್ಠಾನಗೊಳಿಸಬೇಕಾದ ಸ್ಥಳದಲ್ಲಿ ಸ್ಥಳ ಲಭ್ಯತೆ, ವಿದ್ಯುತ್ತೀಕರಣ, ಯಾವ ಉಪಕರಣ/ ಪೀಠೋಪಕರಣಗಳು ಎಷ್ಟು ಸಂಖ್ಯೆಗಳೆಂದು ಕಡ್ಡಾಯವಾಗಿ ನಮೂದಿಸಿ, ಸಿಬ್ಬಂದಿಯವರ ಲಭ್ಯತೆಯನ್ನು ಖಾತ್ರಿ ಪಡಿಸಿಕೊಂಡು, ನಿರ್ವಹಣಿ ಮತ್ತು ವಾರ್ಷಿಕ ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆಯವರು ಮಾಡತಕ್ಕದ್ದು. ನಿರ್ವಹಣೆ ವೈಫಲ್ಯದಿಂದ ಉಪಕರಣಗಳು ಕಾರ್ಯನಿರ್ವಹಿಸದೇ ಇದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಜವಾಬ್ದಾರರು ಹಾಗೂ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತಿನ ಕ್ರಮ ಜರುಗಿಸಲಾಗುವುದು.
* ಕಾಮಗಾರಿಗಳ ಗುತ್ತಿಗೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಅನುದಾನದ ಮೀತಿಯಲ್ಲಿ ಚಾಲ್ತಿ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.












Click it and Unblock the Notifications