ಕಲಬುರಗಿ : ಉಪವಾಸ ಮಾಡಿ ಶೌಚಾಲಯ ಕಟ್ಟಿಕೊಂಡ ವಿದ್ಯಾರ್ಥಿನಿ
ಕಲಬುರಗಿ, ಸೆಪ್ಟೆಂಬರ್ 27 : ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರೇಣುಕಾ ಉಪವಾಸ ಮಾಡಿ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತರೆ ವಿದ್ಯಾರ್ಥಿಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮಾಡಿ ಶಾಲೆಗೆ ಮಾದರಿಯಾಗಿದ್ದಾರೆ.
'ಗ್ರಾಮ ಪಂಚಾಯಿತಿ ವತಿಯಿಂದ ಸೌಲಭ್ಯ ಒದಗಿಸಿದ್ದರಿಂದ ಹಾಗೂ ಶಾಲೆಗಳಲ್ಲಿ ಶೌಚಾಲಯದ ಕುರಿತಾದ ಬೋಧನೆಗೆ ಆದ್ಯತೆ ನೀಡಿದ್ದರಿಂದ ಶೌಚಾಲಯ ನಿರ್ಮಿಸಿಕೊಳ್ಳಲು ಮನೆಯಲ್ಲಿ ಒತ್ತಡ ತಂದೆ' ಎನ್ನುತ್ತಾರೆ ರೇಣುಕಾ.

ರೇಣುಕಾ ಅವರ ಮನೆ ಗ್ರಾಮದ ಮಧ್ಯ ಭಾಗದಲ್ಲಿದ್ದು, ಊರಿಗೆ ಹೊಂದಿಕೊಂಡು ಸಿಮೆಂಟ್ ಕಾರ್ಖಾನೆ ಇದೆ. ಇದರಿಂದ ಸದಾ ವಾಹನಗಳ ಸಂಚಾರ ಮತ್ತು ಜನರ ಓಡಾಟ ಇರುತ್ತಿತ್ತು. ಆದ್ದರಿಂದ, ಬಯಲು ಶೌಚಕ್ಕೆ ಹೋಗಲು ರೇಣುಕಾ ಮತ್ತು ಅವರ ಕುಟುಂಬದವರು ಬಹಳ ತೊಂದರೆ ಅನುಭವಿಸುತ್ತಿದ್ದರು.
ರಾತ್ರಿ, ಮುಂಜಾನೆಯ ವೇಳೆ ಸುಮಾರು 1 ಕಿ.ಮೀ ದೂರ ಕ್ರಮಿಸಬೇಕಾಗುತ್ತಿತ್ತು. ಒಬ್ಬರೇ ಹೋಗಲು ಭಯವಾಗುತ್ತಿದ್ದರಿಂದ ಅಕ್ಕ ಅಥವ ಅಮ್ಮನನ್ನು ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಅವರ ಸಮಯವೂ ಹಾಳಾಗುತ್ತಿತ್ತು. ಮನೆಯಲ್ಲಿ ಶೌಚಾಲಯ ಕಟ್ಟಿಸಿದ್ದರಿಂದ ರೇಣುಕಾರ ವಿದ್ಯಭ್ಯಾಸಕ್ಕೆ ಸುಮಾರು 2 ಗಂಟೆಗಳ ಸಮಯ ದೊರೆಯುತ್ತಿದೆ.
ಶಾಲೆಯಲ್ಲಿ ಶೌಚಾಲಯದ ಕುರಿತಾಗಿ ಶಿಕ್ಷಕರು ತಿಳುವಳಿಕೆ ನೀಡಿದ್ದ ಕಾರಣ, ರೇಣುಕಾ ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ಒತ್ತಡ ಹಾಕಿದರು. ಆದರೆ, ಅವರು ಒಪ್ಪದೇ ಇದ್ದಾಗ ಉಪವಾಸ ಮಾಡುವ ಬೆದರಿಕೆ ಒಡ್ಡಿದರು. ನಂತರ ಶೌಚಾಲಯ ನಿರ್ಮಿಸಲು ಒಪ್ಪಿಗೆ ಸಿಕ್ಕಿತು.
ರೇಣುಕಾಳ ಸ್ನೇಹಿತೆಯರಾದ ಸಂಜನಾ, ನಾಗರತ್ನ, ಪೂಜಾ, ಐಶ್ವರ್ಯ ಅವರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಶಾಲೆಯ ಇತರ ವಿದ್ಯಾರ್ಥಿಗಳಿಗೆ ರೇಣುಕಾ ಮಾದರಿಯಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ' ಸರ್ಕಾರವು ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಶೌಚಾಲಯ ಜಾಗೃತಿ ಕಾರ್ಯಕ್ರಮಗಳ ಮುಖಾಂತರ ಗ್ರಾಪಂ ಹಾಗೂ ಶಾಲೆಗಳಲ್ಲಿ ಶೌಚಾಲಯದ ಪ್ರಮುಖ್ಯತೆ ಕುರಿತು ಅರಿವು ಮೂಡಿಸುವ ಮತ್ತು ಅದರಿಂದ ಅಗುವ ಉಪಯೊಗದ ಕುರಿತು ಮಾಹಿತಿ ನೀಡಲಾಗುತ್ತಿದೆ' ಎಂದು ಹೇಳಿದ್ದಾರೆ.












Click it and Unblock the Notifications