ಕನ್ನಡ ಹಬ್ಬದ ದಿನ ಕಲಬುರಗಿಯಲ್ಲಿ ಪ್ರತ್ಯೇಕತೆಯ ಕೂಗು
ಕಲಬುರಗಿ, ನವೆಂಬರ್ 01: ನಾಡಿನಾದ್ಯಂತ ಕನ್ನಡ ಹಬ್ಬದ ಸಂತಸ ಸಡಗರ ಮನೆ ಮಾಡಿರುವಾಗ ಕರಾವಳಿಯಲ್ಲಿ ಕೆಲವೆಡೆ ಅಪಸ್ವರ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಕಲಬುರಗಿಯಲ್ಲಿ ಈ ವರ್ಷ ಕೂಡಾ ಪ್ರತ್ಯೇಕತೆಯ ಕೂಗು ಎದ್ದಿದೆ.
ಕಲಬುರಗಿಯಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಪ್ರಾರಂಭವಾಗಿದೆ.ಕೆಲ ಸಂಘಟನೆಗಳು ಸಂಘ-ಸಂಸ್ಥೆಗಳು ಸರ್ದಾರ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲು ಮುಂದಾದ ಘಟನೆ ನಡೆಯಿತು.
ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ನಿರ್ಲಕ್ಷ್ಯ ಮತ್ತು ಅಭಿವೃದ್ಧಿಗೆ ರಾಜಕೀಯ ಪಕ್ಷಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಹೈದರಾಬಾದ್ ರ್ನಾಟಕ ಪ್ರತೇಕ ಧ್ವಜದ ಬೇಡಿಕೆ ಇಟ್ಟು ಎಸ್.ವಿ.ವೃತದಲ್ಲಿ ಸತ್ಯಾಗ್ರಹ ಮಾಡಲು ಮುಂದಾದರು. ಹೈದರಾಬಾದ್ ಕರ್ನಾಟಕವನ್ನು 371(ಜೆ) ಕಲಂ ಜಾರಿ ಮಾಡಿದ್ದರು ಇಲ್ಲಿನ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಹೈದರಾಬಾದ್ ಕರ್ನಾಟಕದ ಪಂಚ ಜಿಲ್ಲಾ ಸಮೀತಿಯ ಅದ್ಯಕ್ಷರು ಸದ್ಯಸರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತ್ಯೇಕ ಧ್ವಜ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯು ಉಗ್ರ ರೂಪ ತಾಳಿದ ನಂತರ ಎಮ್.ಎಸ್.ಪಾಟೀಲ್ ನರಿಬೋಳ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದರು. ಇದಕ್ಕೂ ಮುನ್ನ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಉದಯಕುಮಾರ್ ಖೇಳಗಿಕರ್, ಮುಖಂಡ ಉಮೇಶ ಕುಲಕರ್ಣಿ ನೇತೃತ್ವದಲ್ಲಿ ಕಲಬುರಗಿಯ ಜಗತ್ ವೃತ್ತದಿಂದ ಸರ್ದಾರ್ ಪಟೇಲ ವೃತ್ತ ಮಾರ್ಗವಾಗಿ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಯಿತು.
ಕೆಲವು ಮನಸ್ಸುಗಳು ಪ್ರತ್ಯೇಕ ರಾಜ್ಯದ ದನಿಯೆತ್ತಿವೆ ಇದಕ್ಕೆ ಅರ್ಥವೇ ಇಲ್ಲ. ನಾಡಿನ ಕಲೆ, ನೆಲ, ಜಲದ ರಕ್ಷಣೆ ಎಲ್ಲರ ಮೇಲಿದೆ. ಕುಸಿಯುತ್ತಿರುವ ಜೀವನಮಟ್ಟ, ನೈತಿಕ ಮೌಲ್ಯ, ಮಾನವ ಸಂಪನ್ಮೂಲದ ಅಭಿವೃದ್ಧಿಗಾಗಿ ಶ್ರಮಿಸಲು ಕಂಕಣ ಬದ್ಧರಾಗಬೇಕು ಎಂಬುದು ಕರ್ನಾಟಕ ಸರ್ಕಾರದ ಕಡೆಯಿಂದ ಕಲಬುರಗಿಯ ಪ್ರತ್ಯೇಕತಾವಾದಿಗಳಿಗೆ ಸಿಕ್ಕಿರುವ ಪ್ರತಿಕ್ರಿಯೆ.