ನಿಗದಿತ ಅವಧಿಯೊಳಗೆ ಬೆಣ್ಣೆತೊರಾ ಆಧುನೀಕರಣಕ್ಕೆ ಸಚಿವರ ಕಟ್ಟಪ್ಪಣೆ
ನಿಗದಿತ ಅವಧಿಯೊಳಗೆ ಬೆಣ್ಣೆತೊರಾ ಯೋಜನೆಯ ಆಧುನೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟ ಕಾಪಾಡಬೇಕೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಲಬುರಗಿ, ಮೇ 23: ನಿಗದಿತ ಅವಧಿಯೊಳಗೆ ಬೆಣ್ಣೆತೊರಾ ಯೋಜನೆಯ ಆಧುನೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟ ಕಾಪಾಡಬೇಕೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಲಬುರಗಿಯಲ್ಲಿ ಬೆಣ್ಣೆತೊರಾ ಯೋಜನೆ ಅಡಿಯಲ್ಲಿ ಅನುಷ್ಠಾನದಲ್ಲಿರುವ ನೀರು ಬಳಕೆದಾರರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಕರ್ನಾಟಕ ನೀರಾವರಿ ನಿಗಮದ ನೀರಾವರಿ ಯೋಜನೆಗಳ ವಲಯ ಕಚೇರಿಯಲ್ಲಿ ಈ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಅವರು ನೀರಾವರಿ ಯೋಜನೆಯ ಬಲದಂಡೆ/ಎಡದಂಡೆ ಕಾಲುವೆಗಳಲ್ಲಿ ಬರುವ ಹೊಲಗಾಲುವೆಗಳನ್ನು ಹಂತ ಹಂತವಾಗಿ ನಿರ್ಮಿಸಲು ನೀರಾವರಿ ಯೋಜನೆಗಳ ವಲಯ ಕಾಡಾ ಆಡಳಿತಾಧಿಕಾರಿಗೆ ಸೂಚಿಸಿದರು.
ಮೊದಲನೇ ಹಂತವಾಗಿ 5000 ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆಗಳ ಪುನರ್ ನಿರ್ಮಾಣ ಹಾಗೂ ಭೂಮಿ ಸಮತಟ್ಟು ಕಾಮಗಾರಿಯ ಪ್ರಸ್ತಾವನೆಯನ್ನು ತಯಾರಿಸಿ ಸಲ್ಲಿಸಲು ಸೂಚಿಸಿದರು. ಮತ್ತು ಎಲ್ಲಾ ನೀರು ಬಳಕೆದಾರರ ಸಂಘದ ಅಧ್ಯಕ್ಷರನ್ನು ಉದ್ದೇಶಿಸಿ ಆಧುನೀಕರಣ ಕಾಮಗಾರಿಯ ಬಗ್ಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಎಲ್ಲಾ ಅಚ್ಚುಕಟ್ಟು ಭಾಗದ ರೈತರಿಗೂ ನೀರನ್ನು ಉಪಯೋಗಿಸುವಂತೆ ಸಚಿವರು ಇದೇ ಸಂದರ್ಭದಲ್ಲಿ ಕೋರಿದರು.
ಇನ್ನು 2017-18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಣ್ಣೆತೊರಾ ಬಲದಂಡೆ ಕಾಲುವೆಯಿಂದ 45 ಕಿ.ಮೀ. ವರೆಗೆ ಒಳಪಡುವ 9181.69 ಹೆಕ್ಟೇರ್ ಮತ್ತು ಎಡದಂಡೆ ಕಾಲುವೆಯಿಂದ 32 ಕಿ.ಮೀ.ವರೆಗೆ ಒಳಪಡುವ 2127 ಹೆಕ್ಟೇರ್ ನೀರಾವರಿ ಕ್ಷೇತ್ರಕ್ಕೆ ನೀರು ಬಿಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಡಿ.ಪಿ.ಆರ್. ವರದಿ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಬೆಳೆಯಬೇಕಾದ ಬೆಳೆಗಳ ವಿವರ ಇಂತಿದೆ. ತೊಗರಿ-2428 ಹೆಕ್ಟೇರ್, ದ್ವಿದಳ ಧಾನ್ಯ-6880 ಹೆಕ್ಟೇರ್, ಶೇಂಗಾ-1619 ಹೆಕ್ಟೇರ್, ಮೆಕ್ಕೆಜೋಳ-405 ಹೆಕ್ಟೇರ್ ಮತ್ತು ಜೋಳ-809 ಹೆಕ್ಟೇರ್.












Click it and Unblock the Notifications