ಅಕ್ಟೋಬರ್ನಲ್ಲಿ ಕಲಬುರಗಿಯಲ್ಲಿ ವಿಮಾನ ಹಾರಾಟ
ಕಲಬುರಗಿ, ಜುಲೈ 15 : 'ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಂಡು ವಿಮಾನ ಹಾರಾಟ ಆರಂಭವಾಗಲಿದೆ' ಎಂದು ಹಿರಿಯ ಕಾಂಗ್ರೆಸ್ ನಾಯಕ, ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ವೀಕ್ಷಿಸಿದರು. ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಕಲಬುರಗಿಯಿಂದ ಎರಡು ತಿಂಗಳಲ್ಲಿ ವಿಮಾನ ಹಾರಾಟ
'ವಿಮಾನ ನಿಲ್ದಾಣದ ಎಲ್ಲ ಕಟ್ಟಡ ಕಾಮಗಾರಿಗಳು ಹಾಗೂ ರನ್ ವೇ ನಿರ್ಮಾಣ ಪೂರ್ಣಗೊಂಡಿದೆ. ಕೇವಲ ವಿದ್ಯುತ್ ಕಾಮಗಾರಿ ಮಾತ್ರ ಬಾಕಿ ಇದೆ. ಈಗಾಗಲೇ ಒಟ್ಟು 96.90 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ' ಎಂದು ತಿಳಿಸಿದರು.
ಹುಬ್ಬಳ್ಳಿ : ಬೆಂಗಳೂರು, ಚೆನ್ನೈ, ಅಹಮದಾಬಾದ್ಗೆ ವಿಮಾನ ಸೇವೆ ಆರಂಭ
'ಸದ್ಯ ವಿಮಾನ ನಿಲ್ದಾಣದಲ್ಲಿರುವ ಸವಲತ್ತುಗಳಿಂದ ಹಗಲು ಹೊತ್ತು ವಿಮಾನ ಸಂಚಾರ ಪ್ರಾರಂಭಿಸಬಹುದಾಗಿದೆ. ರಾತ್ರಿ ಹೊತ್ತು ವಿಮಾನ ಸೇವೆ ಪ್ರಾರಂಭಿಸಲು ವಿದ್ಯುತ್ ವ್ಯವಸ್ಥೆ ಕಡ್ಡಾಯವಾಗಿ ಅವಶ್ಯಕವಿರುವ ಕಾರಣ ವಿದ್ಯುತ್ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ವಿಮಾನ ಸಂಚಾರ ಪ್ರಾರಂಭಿಸುವುದು ಸೂಕ್ತ' ಎಂದರು.
78 ಕೋಟಿ ರೂ. ಅಗತ್ಯವಿದೆ
'ವಿದ್ಯುತ್ ಕಾಮಗಾರಿ ಸೇರಿದಂತೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಒಟ್ಟು 78 ಕೋಟಿ ರೂ.ಗಳ ಅವಶ್ಯಕತೆಯಿದ್ದು, ಈ ಬಾರಿಯ ಆಯವ್ಯಯದಲ್ಲಿ 65 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ' ಎಂದು ಖರ್ಗೆ ಹೇಳಿದರು.
'ಹೆಚ್ಚಿನ ಅನುದಾ ಬೇಕಾದಲ್ಲಿ ಹೆಚ್.ಕೆ.ಆರ್.ಡಿ.ಬಿ.ಯಿಂದ ನೀಡಲಾಗುವುದು. ಈಗಾಗಲೇ ವಿದ್ಯುತ್ ಗುತ್ತಿಗೆದಾರರು ವಿದ್ಯುತ್ ಉಪಕರಣಗಳನ್ನು ಖರೀದಿಸಲು ಕ್ರಮ ಕೈಗೊಂಡಿರುವುದಾಗಿ' ಮಲ್ಲಿಕಾರ್ಜುನ ಖರ್ಗೆ ವಿವರಣೆ ನೀಡಿದರು.
ಅನುದಾದ ಕೊರತೆ ಇಲ್ಲ
ಕಲಬುರಗಿ ವಿಮಾನ ನಿಲ್ದಾಣದ ಕಾಮಗಗಾರಿಯನ್ನು ಪೂರ್ಣಗೊಳಿಸಲು ಅನುದಾನದ ಕೊರತೆ ಇರುವುದಿಲ್ಲ. ವಿಮಾನ ನಿಲ್ದಾಣ ಕಾಮಗಾರಿಗೆ ಅವಶ್ಯಕವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. ಶುಕ್ರವಾರ 7.5 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ.
'ಪ್ರಾಯೋಗಿಕವಾಗಿ ವಿಮಾನ ಹಾರಾಟಕ್ಕೆ ವಿಮಾನ ನಿಲ್ದಾಣ ಸಿದ್ದವಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ದಿನಾಂಕ ಪಡೆದು ಪ್ರಾಯೋಗಿಕ ವಿಮಾನ ಹಾರಾಟ ಪ್ರಾರಂಭಿಸಲಾಗುವುದು' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಉಡಾನ್ ಯೋಜನೆ
ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ಹೈದ್ರಾಬಾದ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ. ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಯಡಿ ತರಲು ಪ್ರಯತ್ನವೂ ನಡೆದಿದೆ. ಉಡಾನ್ ಯೋಜನೆಗೆ ಸೇರಿದರೆ ವಿಮಾನ ಪ್ರಯಾಣ ದುಬಾರಿಯಾಗದೇ ಎಲ್ಲರಿಗೂ ಅನುಕೂಲವಾಗಲಿದೆ.
ರೈಲ್ವೇ ಯೋಜನೆ
'ಕಲಬುರಗಿ ವಿಭಾಗದಲ್ಲಿ ಅನುಮೋದನೆಯಾಗಿರುವ ಓವರ್ ಬಿಡ್ಜ್, ಅಂಡರ್ ಬಿಡ್ಜ್, ರೈಲು ಮಾರ್ಗ ವಿದ್ಯುದ್ದೀಕರಣ, ದ್ವೀಪಥ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇವುಗಳನ್ನು ಪೂರ್ಣಗೊಳಿಸಲು ಒತ್ತು ನೀಡುವಂತೆ ರೈಲ್ವೇ ಸಚಿವರೊಂದಿಗೆ ಚರ್ಚಿಸಲಾಗಿದೆ. ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಥಮಾಧ್ಯತೆ ನೀಡಲಾಗುತ್ತಿದೆ. ಕಲಬುರಗಿ ರೈಲ್ವೇ ವಿಭಾಗ ಸೇರಿದಂತೆ ದೇಶದಲ್ಲಿ ಅಸ್ಸಾಂ ಹಾಗೂ ಜಮ್ಮು ಮತ್ತು ಕಾಶ್ಮೀರಗಳನ್ನು ರೈಲ್ವೇ ವಿಭಾಗಗಳನ್ನಾಗಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿದೆ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.