ಕನ್ನಡಕ್ಕೆ ಅವಕಾಶವಿಲ್ಲ; ಹಿಂದಿ-ಇಂಗ್ಲಿಷ್ನಲ್ಲಿ ಮಾತ್ರ ಭಾಷಣ: ಸರ್ಕಾರಿ ಕಾಲೇಜಿನ ವಿವಾದ
ಜೇವರ್ಗಿ, ಅಕ್ಟೋಬರ್ 22: ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿರುವ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಭಾಷಣ ಸ್ಪರ್ಧೆ ವಿವಾದ ಸೃಷ್ಟಿಸಿದೆ.
ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರು ಯುವ ಕೇಂದ್ರವು ಮಂಗಳವಾರ 'ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣ' ಕುರಿತ ವಿಚಾರದ ಮೇಲೆ ತಾಲ್ಲೂಕು ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿತ್ತು. ಆದರೆ ಈ ಭಾಷಣವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಆಯೋಜಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಕುತೂಹಲದ ಸಂಗತಿಯೆಂದರೆ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೇ ಭಾಷಣ ಮಾಡಬೇಕೆಂದು ಸೂಚನೆ ಹೊರಡಿಸಿರುವುದು ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು.
ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕರೂ ಆಗಿರುವ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕ ಭೀಮಣ್ಣ ಅವರ ಬಳಿ ಆಸಕ್ತ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳುವಂತೆ ಅ. 21ರಂದು ಸೂಚನೆ ಹೊರಡಿಸಲಾಗಿದೆ. ಇದಕ್ಕೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಭೀಮಣ್ಣ ಅವರ ಸಹಿ ಇದೆ.
ಈ ಸೂಚನಾ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾಲೇಜಿನ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ, ಕರ್ನಾಟಕದ ಸರ್ಕಾರಿ ಕಾಲೇಜೊಂದರಲ್ಲಿ ಕನ್ನಡವನ್ನು ಕಡೆಗಣಿಸಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಭಾಷಣ ಸ್ಪರ್ಧೆ ಆಯೋಜಿಸಿರುವುದು ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ನಾವು ಉತ್ತರ ಭಾರತದಲ್ಲಿ ಇದ್ದೀವಾ?
ಇದು ಕರ್ನಾಟಕದ ಸರ್ಕಾರಿ ಕಾಲೇಜು.. ಆದರೆ ಭಾಷಣ ಸ್ಪರ್ಧೆ ಇರೋದು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ. ನಾವೇನು ಉತ್ತರ ಭಾರತದಲ್ಲಿ ಇದ್ದೀವ? ಅಥವಾ ಇಂಗ್ಲೆಂಡ್ನಲ್ಲ? ನಾಚಿಕೆ ಇಲ್ಲದ ಸರ್ಕಾರ ಮತ್ತು ಪ್ರಜಾಪ್ರತಿನಿಧಿಗಳು. ಎಲ್ಲರೂ ಉಗಿದ ಮೇಲೆ ಕಾರ್ಯಕ್ರಮ ರದ್ದುಗೊಳಿಸಿದ್ದಾರಂತೆ- ಕನ್ನಡಿಗ ಮಂಜುನಾಥ್ ಸಿರಗುಪ್ಪ

ದೇಶಭಕ್ತಿ ಕಡಿಮೆ ಆಗುತ್ತದಾ?
ದೇಶಭಕ್ತಿಯ ಬಗ್ಗೆ ಹಿಂದಿ/ಇಂಗ್ಲಿಷ್ ಅಲ್ಲಿ ಭಾಷಣ ಮಾಡುತ್ತೇನೆ ಅಂತ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರ ಬಳಿ ನೊಂದಾಯಿಸಿಕೊಳ್ಳಬೇಕಂತೆ. ಕನ್ನಡದಲ್ಲಿ ಭಾಷಣ ಮಾಡಿದ್ರೆ ದೇಶಭಕ್ತಿ ಕಡಿಮೆಯಾಗುತ್ತಾ? - ವಸಂತಶೆಟ್ಟಿ

ರಾಜ್ಯಭಾಷೆಗೆ ಮಾಡುತ್ತಿರುವ ದ್ರೋಹ
ರಾಜ್ಯದಲ್ಲಿ ನೆಹರು ಯುವ ಕೇಂದ್ರದ ಮೂಲಕ ಭಾಷಣ ಸ್ಪರ್ಧೆ ಆಯೋಜಿಸುತ್ತಿರುವ ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆ ಸ್ಪರ್ಧಾಳುಗಳು ಕಡ್ಡಾಯವಾಗಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿಯೇ ತಮ್ಮ ಭಾಷಣ ಪ್ರಸ್ತುತ ಪಡಿಸಬೇಕು ಎಂದು ಸುತ್ತೋಲೆ ಹೊರಡಿಸುತ್ತಿದೆ.ಇದು ನಿಜಕ್ಕೂ ರಾಜ್ಯ ಭಾಷೆಗೆ ಮಾಡುತ್ತಿರುವ ದ್ರೋಹ. ಇದನ್ನು ನಾನು ಖಂಡಿಸುತ್ತೇನೆ- ಭೀಮಾಶಂಕರ ಪಾಟೀಲ

ರಾಜ್ಯ ಸರ್ಕಾರವೇ ಕಡೆಗಣಿಸಿದರೆ ಹೇಗೆ?
ನೆಹರು ಯುವ ಕೇಂದ್ರ ವತಿಯಿಂದ ಏರ್ಪಡಿಸಿರುವ Ek Bharat Shreshta Bharat ವಿಷಯದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಭಾಷಣ ಮಾಡುವ ಅವಕಾಶ ನೀಡಲಾಗಿದೆ. ಏಕೆ? ದೇಶಭಕ್ತಿಯ ಬಗ್ಗೆ ಮಾತನಾಡಲು ಕನ್ನಡ ಭಾಷೆಗೆ ಅರ್ಹತೆ ಇಲ್ಲವೇ? ಕನ್ನಡ ಬೆಳೆಸಬೇಕಾದ ರಾಜ್ಯ ಸರ್ಕಾರವೇ ಕನ್ನಡವನ್ನು ಈ ರೀತಿ ಕಡೆಗಣಿಸಿದರೆ ಹೇಗೆ?-ಜೆಡಿಎಸ್












Click it and Unblock the Notifications