ರೋಗಿಗಳು ಮಾಡಿದ ಆ ಎಡವಟ್ಟಿನಿಂದ ಬಂದ್ ಆಯಿತು ಜಯದೇವ ಆಸ್ಪತ್ರೆ
ಕಲಬುರಗಿ, ಜುಲೈ 15: ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು ರೋಗಿಗಳು ಮಾಡಿದ ಎಡವಟ್ಟು ಈಗ ಜಯದೇವ ಹೃದ್ರೋಗ ಸಂಸ್ಥೆಗೇ ಆಪತ್ತು ತಂದಿದೆ. ಜಯದೇವ ಸಂಸ್ಥೆಯ 21 ಸಿಬ್ಬಂದಿಗೆ ಈ ರೋಗಿಗಳಿಂದ ಕೊರೊನಾ ಸೋಂಕು ತಗುಲಿದ್ದು, ಕಲ್ಯಾಣ ಕರ್ನಾಟಕದಲ್ಲಿರುವ ಏಕೈಕ ಜಯದೇವ ಶಾಖೆಯನ್ನು ಬಂದ್ ಮಾಡಲಾಗಿದೆ.
ವ್ಯಕ್ತಿಗಳಿಬ್ಬರಿಗೆ ಕೊರೊನಾ ಶಂಕೆ ವ್ಯಕ್ತಗೊಂಡಿದ್ದು, ಗಂಟಲ ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಕೊಟ್ಟಿದ್ದಾರೆ. ಆದರೆ ಆ ವರದಿ ಬರುವ ಮುನ್ನವೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರೀಕ್ಷೆಗೆ ಗಂಟಲ ದ್ರವ ಕೊಟ್ಟಿರುವ ವಿಷಯವನ್ನೂ ಮುಚ್ಚಿಟ್ಟಿದ್ದಾರೆ.
ಎದೆ ನೋವಿನ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಈ ಸಂಸ್ಥೆಯಲ್ಲಿ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಆತನಿಗೆ ಸೋಂಕು ದೃಢಪಟ್ಟಿತ್ತು. ಮತ್ತೊರ್ವ ರೋಗಿ ನೇರವಾಗಿ ಜಯದೇವ ಸಂಸ್ಥೆಗೆ ಬಂದಿದ್ದು, ಆತನಿಗೂ ಸೋಂಕು ದೃಢವಾಗಿದೆ. ಇದರಿಂದಾಗಿ ಸಂಸ್ಥೆಯ 21 ಸಿಬ್ಬಂದಿಗೆ ಸೋಂಕು ತಗುಲಿದ್ದು, ಜಯದೇವ ಹೃದ್ರೋಗ ಸಂಸ್ಥೆಯನ್ನು ಸೀಲ್ ಡೌನ್ ಮಾಡಲಾಗಿದೆ.

21 ಸಿಬ್ಬಂದಿ ಪೈಕಿ ಐವರು ವೈದ್ಯರಿದ್ದಾರೆ. ಮತ್ತಷ್ಟು ಸಿಬ್ಬಂದಿಗೆ ಸೋಂಕು ಬರುವ ಸಾಧ್ಯತೆ ಇದೆ. ವೈದ್ಯರು ಸೇರಿ ಆಸ್ಪತ್ರೆ ಸಿಬ್ಬಂದಿಯೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಾಬುರಾವ್ ಹುಡಗೀಕರ್ ಮಾಹಿತಿ ನೀಡಿದ್ದಾರೆ.












Click it and Unblock the Notifications