ಕಲಬುರಗಿಯಲ್ಲಿ ಜಲಪ್ರಳಯ : 5 ಜನ ರೈತರ ಪ್ರಾಣ ರಕ್ಷಣೆ!
ಕಲಬುರಗಿ,ಸೆ.24 : ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆಯ ಅಬ್ಬರಕ್ಕೆ ಜಲಪ್ರಳಯ ಉಂಟಾಗಿದೆ. ಬೀದರ್, ಕಲಬುರಗಿ, ರಾಯಚೂರಿನಲ್ಲಿ ಪ್ರವಾಹದಿಂದ ಜನಜೀವನ ತತ್ತರಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಕಲಬುರಗಿಯಲ್ಲಿ ಕಳೆದ 50 ವರ್ಷದ ನಂತರ ದಾಖಲೆಯ 164 ಮಿಲಿ ಮೀಟರ್ ಮಳೆಯಾಗಿದ್ದು, ಚಿತ್ತಾಪುರ ತಾಲೂಕಿನ ಚಿಂಚೋಳಿ ಹೆಚ್. ಗ್ರಾಮದ ಬಳಿಯ ಬೆಣ್ಣೆತೋರಾ ನದಿ ಪ್ರವಾಹದಲ್ಲಿ ಸಿಲುಕಿಕೊಂಡ ಐದು ಜನರ ಪ್ರಾಣ ರಕ್ಷಣೆ ಮಾಡಲಾಗಿದೆ.
ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮಲ್ಲಿಕಾರ್ಜುನ ತೇಲಿ(32) , ಹಣಮಂತ ತೇಲಿ(38) , ಮಂಜುನಾಥ ಕವನಳ್ಳಿ[23] , ಅನೀಲ ಜಮಾದಾರ[18] ಹಾಗೂ ರತ್ನಪ್ಪ ಅಡಗೊಂಡ(42) ಎನ್ನುವರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನೇತೃತ್ವದ ವಿಪತ್ತು ನಿರ್ವಹಣಾ ರಕ್ಷಣಾ ಕಾರ್ಯಾಚರಣೆ ತಂಡ ಬೋಟ್ ಮುಖಾಂತರ ತೆರಳಿ ಐದು ಜನ ಮತ್ತು ಪ್ರವಾಹದಲ್ಲಿ ಸಿಲುಕಿರುವ ಎರಡು ಎತ್ತುಗಳ ಪ್ರಾಣ ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ತಿಳಿಸಿದ್ದಾರೆ.
ಬೀದರ್ ನ ಬಹುತೇಕ ಸೇತುವೆಗಳು ಮುಳುಗಿದ್ದು, 4 ಕೋಟಿ ರುಗಳ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದ್ದ ಔರಾದ್ ನ ಆಲೂರು ಬೇಲೂರು ಕೆರೆ ಸೇರಿದಂತೆ 4 ಕೆರೆಗಳು ಒಡೆದು ಹೋಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.
ಸೆ.24 ರಂದು ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನುರಾಗ ತಿವಾರಿ ತಿಳಿಸಿದ್ದಾರೆ.
ಆಂಬುಲೆನ್ಸ್ ನಲ್ಲಿಯೇ ಹೆರಿಗೆ
ಡ್ಯಾಂಗಳೆಲ್ಲಾ ಭರ್ತಿಯಾಗಿ ಹಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಇನ್ನು ಕಲಬುರಗಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಸೇಡಂನ ಗರ್ಭಿಣಿ ರಾಧಿಕಾ ಎಂಬಾಕೆ ತ್ರಿವಳಿ ಮಕ್ಕಳಿಗೆ ಅಂಬುಲೆನ್ಸ್ ನಲ್ಲಿಯೇ ಜನ್ಮ ನೀಡಿದ್ದಾರೆ.
ರಾಯಚೂರಿನಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣ ನದಿ
ನಾರಾಯಣಪುರ ಡ್ಯಾಂನಿಂದ ನೀರು ಬಿಟ್ಟಿರುವುದರಿಂದ ರಾಯಚೂರಿನಲ್ಲಿ ಕೃಷ್ಣಾ ನದಿ ಉಕ್ಕಿ ಹರೀತಿದ್ದು, ಲಿಂಗಸೂರಿನ ನಡುಗುಡ್ಡೆಯಲ್ಲಿ ನೂರಕ್ಕೂ ಹೆಚ್ಚು ಮೇಕೆಗಳು ನೀರಲ್ಲಿ ಕೊಚ್ಚಿಹೋಗಿವೆ. ಹಲವು ಸೇತುಗಳ ಜಖಂಗೊಂಡಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.
ಎರಡು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ಬೀದರ್ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದರಿಂದ ಗ್ರಾಮೀಣ ಪ್ರದೇಶಗಳ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಹೈ ಅಲರ್ಟ್ ಘೋಷಣೆ
ಜಿಲ್ಲೆಯ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ. ಮೆಹಬೂಬ್ ನಗರ-ಸೇಡಂ ಕಲಬುರಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.
ಕಳೆದ 50 ವರ್ಷಗಳ ನಂತರ ದಾಖಲೆ ಮಳೆ
ಕಲಬುರಗಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಕಳೆದ 50 ವರ್ಷದ ನಂತರ ದಾಖಲೆಯ 164 ಮಿಲಿ ಮೀಟರ್ ಮಳೆಯಾಗಿದೆ.