ಮಳೆಗೆ ಉತ್ತರ ಕರ್ನಾಟಕ ತತ್ತರ : ಅಪಾರ ಆಸ್ತಿಪಾಸ್ತಿ ನಷ್ಟ
ಕಲಬುರಗಿ, ಸೆಪ್ಟೆಂಬರ್ 26: ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ ಭಾನುವಾರ ತಗ್ಗಿದೆ. ಆದರೆ ನದಿ ಪಾತ್ರಗಳಲ್ಲಿರುವ ಜನರ ಆತಂಕ ಮಾತ್ರ ಮುಂದುವರಿದಿದೆ. ಪ್ರವಾಹ ಸ್ಥಿತಿ ಉಂಟಾಗಿರುವ ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಗಳು ಬಂದಿವೆ.
ಕಾರ್ಯಾಚರಣೆ ಆರಂಭಿಸಿದ ಪಡೆಯು ಚಿತ್ತಾಪುರ ತಾಲೂಕಿನಲ್ಲಿ ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಗೋಳಾ ಗ್ರಾಮದ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ. ಚಿಂಚೋಳಿ ತಾಲ್ಲೂಕಿನ ಕೋಡ್ಲಿ-ಅಲ್ಲಾಪುರದ ಕೆರೆಯಲ್ಲಿ ಶನಿವಾರ ಮುಳುಗಿದ್ದ ಕುರಿಗಾಹಿ ಸಂತೋಷ್ ಶವ ಪತ್ತೆಯಾಗಿದೆ.[ಮಳೆ ಅನಾಹುತ: ಮಳಖೇಡದ ಉತ್ತರಾದಿಮಠದಲ್ಲಿ 60 ಲಕ್ಷದಷ್ಟು ನಷ್ಟ]

ಇನ್ನು ಸೇಡಂ ತಾಲ್ಲೂಕಿನ ಮಳಖೇಡ, ಚಿತ್ತಾಪುರ ತಾಲ್ಲೂಕಿನ ದಂಡೋತಿ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿಲ್ಲ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಮಳಖೇಡ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತವಾಗಿದೆ. ಕಲಬುರಗಿ ಜಿಲ್ಲೆಯೊಂದರಲ್ಲಿ 35 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿ, ಸಾವಿರ ಮುನ್ನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಬೀದರ್ ಜಿಲ್ಲೆಯಲ್ಲೂ ಭಾನುವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಮಹಾರಾಷ್ಟ್ರದ ಧನೇಗಾಂವ್ ಜಲಾಶಯದಿಂದ ನೀರು ಬಿಟ್ಟಿದ್ದು, ಬೀದರ್ ನ ಮಾಂಜರಾ ನದಿಗೆ ಪ್ರವಾಹ ಬಂದಿದೆ. ನದಿ ದಂಡೆಯಲ್ಲಿರುವ ಹೊಳಗಳಿಗೆ ನೀರು ನುಗ್ಗಿ ನಷ್ಟವಾಗಿದೆ. ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ. ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೊಪ್ಪಳ, ರಾಯಚೂರಿನಲ್ಲಿ ವಿವಿಧ ಕಡೆ ತುಂತುರು ಮಳೆಯಾಗಿದೆ.[ಕಲಬುರಗಿಯಲ್ಲಿ ಜಲಪ್ರಳಯ : 5 ಜನ ರೈತರ ಪ್ರಾಣ ರಕ್ಷಣೆ!]

ಸಚಿವ ಶರಣಪ್ರಕಾಶ ಪಾಟೀಲ್ ಸಮೀಕ್ಷೆ
ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿರುವ ಬೆಳೆ ಹಾನಿ, ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿ ಹಾಗೂ ಮೂಲಸೌಕರ್ಯಗಳ ಹಾನಿ ಕುರಿತು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಜಂಟಿ ಸಮೀಕ್ಷೆ ಕೈಗೊಂಡು, ಒಂದು ದಿನದೊಳಗಾಗಿ ನಿಖರವಾದ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಹಾನಿ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹೊಲ ಗದ್ದೆಗಳಲ್ಲಿ ಪ್ರವಾಹದಿಂದ ಮತ್ತು ಹೆಚ್ಚಾಗಿ ನೀರು ನಿಂತಿರುವುದರಿಂದ ಬೆಳೆಗಳು ಹಾನಿಯಾಗುವ ಸಾಧ್ಯತೆಗಳಿವೆ. ಅಂತಹ ಪ್ರದೇಶಗಳಲ್ಲಿ ಪರ್ಯಾಯ ಬೆಳೆಯನ್ನು ಬೆಳೆಯಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಹಿಂಗಾರು ಕ್ಷೇತ್ರಕ್ಕೆ ಬೇಕಾಗುವ ಅವಶ್ಯಕ ಬೀಜ ಮತ್ತು ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.[ಮಳೆಗೆ ಆಂಧ್ರದ ಗುಂಟೂರು ಜಲಾವೃತ: ಪ್ರವಾಹಕ್ಕೆ 8 ಮಂದಿ ಬಲಿ!]
ಪ್ರವಾಹದಿಂದಾಗಿ ಹಲವಾರು ಕಡೆ ವಿದ್ಯುತ್ ಉಪಕೇಂದ್ರಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳು ಮುಳುಗಡೆಯಾಗಿದ್ದು, ಅವುಗಳನ್ನು ಶೀಘ್ರವಾಗಿ ಬದಲಾಯಿಸಬೇಕು. ಎಲ್ಲ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು. ಜೆಸ್ಕಾಂದಿಂದ ಅಳವಡಿಸಲಾದ ಕಬ್ಬಿಣದ ಕಂಬಗಳನ್ನು ತುರ್ತಾಗಿ ಬದಲಾಯಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟು 1331 ಮನೆಗಳು ಹಾನಿಗೀಡಾದ ಕುರಿತು ಪ್ರಾಥಮಿಕ ವರದಿಗಳಿವೆ. ಮನೆಯಲ್ಲಿ ನೀರು ಹೊಕ್ಕಿದರೆ 2000, ಭಾಗಶ: ಹಾನಿಗೊಳಗಾಗಿದರೆ ಕಚ್ಚಾ ಮನೆಗಳಿಗೆ 3200., ಪಕ್ಕಾ ಮನೆಗಳಿಗೆ 5200, ಸಂಪೂರ್ಣ ಹಾನಿಗೊಳಗಾಗಿದ್ದರೆ 1 ಲಕ್ಷ ಪರಿಹಾರವನ್ನು ನೀಡಲಾಗುವುದು. ಇದಕ್ಕಾಗಿ ಪ್ರತಿ ತಹಶೀಲ್ದಾರರಿಗೆ 25 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.[ಕಲಬುರಗಿಯಲ್ಲಿ ಮಳೆರಾಯ ಮೊಕ್ಕಾಂ: ಬೆಳೆ ನಷ್ಟ, ಸೇತುವೆ ಮುಳುಗಡೆ]
ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸಲು 22 ಗಂಜಿ ಕೇಂದ್ರಗಳನ್ನು ಪ್ರಾರಂಭಿಸಿ, 681 ಕುಟುಂಬಗಳ 2718 ಜನರನ್ನು ಸ್ಥಳಾಂತರಿಸಲಾಗಿದೆ. ಸಚಿವರು ಕಲಬುರಗಿ ನಗರದ ಗಂಜ್ ಕಾಲೋನಿ ಮತ್ತು ಆಶ್ರಯ ಕಾಲೋನಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇತ್ತೀಚೆಗೆ ಮೃತಪಟ್ಟ 8 ವರ್ಷದ ಮಗು ಸಚಿನ್ ರಾಥೋಡ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು.
3 ದಿನಗಳಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ
ಬಂಗಾಳ ಕೊಲ್ಲಿಯ ಕೇಂದ್ರ ಭಾಗದಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ಮೂರ್ನಾಲ್ಕು ದಿನದಲ್ಲಿ ಕಲಬುರಗಿ, ಬೀದರ್ ಭಾಗದಲ್ಲಿ ಭಾರಿ ಮಳೆ ಅಗುವಂಥ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಲಬುರಗಿ, ಬೀದರ್ ನಲ್ಲಿ ಈಗಾಗಲೇ ಭಾರಿ ಮಳೆಯಾಗಿದೆ. ಈಗ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದು, ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಮತ್ತೆ ವಾಯುಭಾರ ಕುಸಿತವಾದರೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಕಲಬುರಗಿಯಲ್ಲಿ ಮಳೆ-ಚಳಿಯ ಜುಗಲ್ ಬಂದಿ]
ರಾಜ್ಯದ ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆಯಾಗುತ್ತಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಆ ಸಾಧ್ಯತೆ ತೀರ ಕಡಿಮೆ. ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ಕೋಲಾರ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರೆಯಲಿದೆ ಎಂದಿದ್ದಾರೆ.












Click it and Unblock the Notifications