Gruha Jyothi; 10 ಜನರಿಗೆ ಶೂನ್ಯ ಬಿಲ್ ಕೊಡಲಿದ್ದಾರೆ ಸಿದ್ದರಾಮಯ್ಯ
ಕಲಬುರಗಿ, ಆಗಸ್ಟ್ 03; ಕರ್ನಾಟಕ ಕಾಂಗ್ರೆಸ್ ಘೋಷಣೆ ಮಾಡಿದ್ದ 'ಗೃಹಜ್ಯೋತಿ' ಯೋಜನೆಯು ಜಾರಿಗೆ ಬಂದಿದೆ. ಯೋಜನೆ ಫಲಾನುಭವಿಗಳಿಗೆ ಆಗಸ್ಟ್ನಲ್ಲಿ ಶೂನ್ಯ ಪಾವತಿಯ ಬಿಲ್ ಕೈ ಸೇರುತ್ತಿದೆ. ಅಧಿಕೃತವಾಗಿ ಯೋಜನೆಯನ್ನು ಆಗಸ್ಟ್ 5ರಂದು ಉದ್ಘಾಟನೆ ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರ 'ಗೃಹಜ್ಯೋತಿ' ಯೋಜನೆಯನ್ನು ಕಲಬುರಗಿಯಲ್ಲಿ ಉದ್ಘಾಟನೆ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಸಚಿವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 'ಗೃಹಜ್ಯೋತಿ' ಯೋಜನೆಗೆ ಚಾಲನೆ ನೀಡಲಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
10 ಫಲಾನುಭವಿಗಳಿಗೆ ಬಿಲ್; ಆಗಸ್ಟ್ 5ರಂದು ಅಂದು ಕಲಬುರಗಿ ನಗರದ ಎನ್. ವಿ. ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ದರದ ವಿದ್ಯುತ್ ಬಿಲ್ ನೀಡುವ ಮೂಲಕ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್ ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯನ್ನು ನಡೆಸಿದರು. ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 10 ರಿಂದ 12 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಈ ಕಾರ್ಯಕ್ರಮದ ಯಶಸ್ಸಿಗೆ ಅಧಿಕಾರಿಗನ್ನೊಳಗೊಂಡ 14 ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ಸದಸ್ಯರಿಗೆ ನೀಡಲಾದ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರು ಕುಳಿತುಕೊಳ್ಳಲು ಆಸನ, ಊಟ ಹಾಗೂ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ಈ ಸಂಬಂಧ ನೇಮಿಸಲಾದ ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮಕ್ಕಾಗಿ ವೇದಿಕೆಯನ್ನು ಆಕರ್ಷಕವಾಗಿ ನಿರ್ಮಿಸಬೇಕು. ಸಾರ್ವಜನಿಕರು, ಗಣ್ಯರು ಮುಂತಾದವರು ಕಾರ್ಯಕ್ರಮದ ಸ್ಥಳ ಪ್ರವೇಶಿಸುವುದಕ್ಕೆ ಪ್ರತ್ಯೇಕ ಪ್ರವೇಶ ಕಲ್ಪಿಸಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಮುನ್ನೆಚ್ಚರಿಕೆಯಾಗಿ ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಿರಬೇಕು ಎಂದು ನಿರ್ದೇಶನ ನೀಡಲಾಗಿದೆ.
ಪೊಲೀಸರು ಕಾರ್ಯಕ್ರಮದ ಅಗತ್ಯ ಭದ್ರತೆ ಕೈಗೊಳ್ಳಬೇಕು. ಯಾವುದೇ ಸಮಸ್ಯೆ ಇಲ್ಲದಂತೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮತ್ತು ಡಿಸಿಪಿ ಅಡ್ಡೂರು ಶ್ರೀನಿವಾಸಲು ಸಹ ಪಾಲ್ಗೊಂಡಿದ್ದರು.
ಈ ಸಮಾರಂಭದಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಇಂಧನ ಸಚಿವ ಕೆ. ಜೆ. ಜಾರ್ಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ & ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ. ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಸರ್ಕಾರದ ಆದೇಶದಂತೆ 'ಗೃಹಜ್ಯೋತಿ' ಯೋಜನೆ ಜುಲೈ 2023ರ ತಿಂಗಳ ವಿದ್ಯುತ್ ಬಿಲ್ ಬಳಕೆಗೆ ಆಗಸ್ಟ್ 2023ರ ತಿಂಗಳು ನೀಡುವ ಬಿಲ್ಗೆ ಅನ್ವಯವಾಗಿದೆ. ಜುಲೈ 27ರೊಳಗೆ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳು ಆಗಸ್ಟ್ನಲ್ಲಿ ಶೂನ್ಯ ಬಳಕೆಯ ಗೃಹ ಬಳಕೆ ಬಿಲ್ ಪಡೆಯುತ್ತಿದ್ದಾರೆ.
ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಲು ಅಂತಿಮ ಗಡುವು ನೀಡಿಲ್ಲ. ಜುಲೈ 27ರ ಬಳಿಕ ನೋಂದಣಿ ಮಾಡಿದವರು. ಆಗಸ್ಟ್ ತಿಂಗಳ ಬಳಕೆಯ ಶೂನ್ಯ ಬಿಲ್ ಅನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಪಡೆಯಲಿದ್ದಾರೆ ಎಂದು ಸ್ಪಷಟಪಡಿಸಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆಗೂ ಮೊದಲು ರಾಜ್ಯದ ಜನರಿಗೆ ನೀಡಿದ್ದ 5 ಗ್ಯಾರಂಟಿಗಳಲ್ಲಿ 'ಗೃಹಜ್ಯೋತಿ' ಸಹ ಒಂದು. ಯೋಜನೆ ಅನ್ವಯ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಒಪ್ಪಿಗೆ ನೀಡಲಾಗಿದೆ. ಷರತ್ತುಗಳ ಜೊತೆ ಯೋಜನೆ ಜಾರಿಗೆ ಬಂದಿದೆ.
ಯೋಜನೆ ಫಲಾನುಭವಿಗಳಾಗಲು ಗ್ರಾಹಕರು ಜುಲೈ 2023ರ ವರೆಗಿನ ಪೂರ್ಣ ವಿದ್ಯುತ್ ಬಾಕಿಯನ್ನು ಪಾವತಿಸಬೇಕು. ಯೋಜನೆ ಹಿಂದಿನ ತಿಂಗಳಿನಿಂದ ಅನ್ವಯ ಆಗುವುದಿಲ್ಲ. ಅಲ್ಲದೇ ಬಿಲ್ ಕಟ್ಟಿದ್ದರೆ ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ಸಹ ವಾಪಸ್ ನೀಡುವುದಿಲ್ಲ. ಬಾಕಿ ಉಳಿಸಿಕೊಂಡಿರುವವರು ಅತೀ ಶೀಘ್ರವಾಗಿ ಬಾಕಿ ಪಾವತಿಸಿ 'ಗೃಹಜ್ಯೋತಿ' ಯೋಜನೆಗೆ ಅರ್ಹ ಫಲಾನುಭವಿಗಳಾಗಿ ಎಂದು ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ.












Click it and Unblock the Notifications