ಕಲಬುರಗಿ ಪ್ರವಾಹ ಇಳಿಮುಖ; 27,809 ಜನರ ರಕ್ಷಣೆ
ಕಲಬುರಗಿ, ಅಕ್ಟೋಬರ್ 23 : ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿಯ ಪ್ರವಾಹ ಇಳಿಮುಖವಾಗುತ್ತಿದೆ. ಇದುವರೆಗೂ ಪ್ರವಾಹದಲ್ಲಿ ಸಿಲುಕಿದ್ದ 92 ಗ್ರಾಮಗಳ 27,809 ಜನರನ್ನು ರಕ್ಷಣೆ ಮಾಡಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜೋತ್ಸ್ನಾ ಈ ಕುರಿತು ಮಾತನಾಡಿದ್ದಾರೆ. "ಜಿಲ್ಲೆಯಲ್ಲಿ ಅಕ್ಟೋಬರ್ 22ರ ವರೆಗೆ 160 ಕಾಳಜಿ ಕೇಂದ್ರಗಳನ್ನು ತೆರೆದು ನಿರಾಶ್ರಿತರಿಗೆ ಆಶ್ರಯ ನೀಡಲಾಗಿತ್ತು" ಎಂದು ಹೇಳಿದ್ದಾರೆ.
"ಪ್ರಸ್ತುತ ಭೀಮಾ ನದಿಯಲ್ಲಿನ ಪ್ರವಾಹ ತಗ್ಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಂದು ಜಿಲ್ಲೆಯಾದ್ಯಂತ 19 ಕಾಳಜಿ ಕೇಂದ್ರಗಳು ಚಾಲ್ತಿಯಲ್ಲಿದ್ದು, ಇಲ್ಲಿ 2,357 ಜನರಿಗೆ ಆಶ್ರಯ ಕಲ್ಪಿಸಿ ಅವರಿಗೆ ಊಟೋಪಚಾರದ ಜೊತೆಗೆ ಅಗತ್ಯ ಸೌಕರ್ಯಗಳನ್ನು ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಪ್ರವಾಹದಿಂದಾಗಿ ಇದುವರೆಗೆ 542 ದೊಡ್ಡ ಜಾನುವಾರು ಮತ್ತು 373 ಚಿಕ್ಕ ಜಾನುವಾರಗಳ ಜೀವಹಾನಿಯಾಗಿದೆ. ಯಾವುದೇ ಜನರು ಪ್ರಾಣ ಕಳೆದುಕೊಂಡಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಪ್ರವಾಹದಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.
ಪ್ರಾಥಮಿಕ ವರದಿ ಪ್ರಕಾರ ಇದುವರೆಗೂ 3,628 ಮನೆಗಳು ಭಾಗಶ: ಹಾನಿಗೆ ಒಳಗಾದರೆ 65 ಮನೆಗಳು ಸಂಪೂರ್ಣ ಹಾನಿಯಾಗಿವೆ. ಉಳಿದಂತೆ 10796 ಮನೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಬಟ್ಟೆ ಮತ್ತು ಪಾತ್ರೆಗಳಿಗೆ ಹಾನಿಯಾಗಿದೆ.
ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಇಳಿಮುಖವಾಗಿದೆ. ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿನಿಂದ ಹೊರ ಹರಿವು ಭಾರಿ ಇಳಿಕೆ ಕಂಡುಬಂದಿದ್ದು, ಶುಕ್ರವಾರ ಸಂಜೆ ಒಳಹರಿವು 42,200 ಕ್ಯುಸೆಕ್ ಇದ್ದರೆ, ಹೊರ ಹರಿವು 25,000 ಕ್ಯುಸೆಕ್ ಇದೆ.












Click it and Unblock the Notifications