'ಬಿಜೆಪಿ ಸೋಲುವ ಭೀತಿಯಿಂದ ಪದೇಪದೇ ರಾಜ್ಯಕ್ಕೆ ಬರುತ್ತಿರುವ ಅಮಿತ್ ಶಾ'
Recommended Video

ಕಲಬುರಗಿ, ಜನವರಿ 11: ರಾಜ್ಯದಲ್ಲಿ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಆದ್ದರಿಂದಲೇ ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪದೇ ಪದೇ ಇಲ್ಲಿಗೆ ಬರುತ್ತಿದ್ದಾರೆ. ಅವರು ಇಲ್ಲಿಗೆ ಬರೋದು ಹಾಗೂ ಹೋಗೋದು ಬಿಜೆಪಿಗೆ ಬಿಟ್ಟ ವಿಚಾರ. ಇದರಿಂದ ನಮಗೇನೂ ವ್ಯತ್ಯಾಸ ಆಗೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಇಲ್ಲಿ ಹೇಳಿದ್ದಾರೆ.
ಕೋಮುವಾದದ ಟ್ರಂಪ್ ಕಾರ್ಡ್ ಹಿಡಿದು ಬಿಜೆಪಿ ಚುನಾವಣೆಗೆ ಹೋಗುತ್ತದೆ. ಆ ಪಕ್ಷದಿಂದಲೇ ರಾಜ್ಯದಲ್ಲಿ ಕೋಮುವಾದ ಹೆಚ್ಚುತ್ತಿದೆ. ಮಂಗಳೂರು ಗಲಭೆ ಕೂಡ ಆ ಪಕ್ಷದ ಸೃಷ್ಟಿ. ಅಮಿತ್ ಶಾ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಇನ್ನು ಮಹಾದಾಯಿ ವಿಚಾರದಲ್ಲಿ ಅವರು ಡಬಲ್ ಗೇಮ್ ಆಡ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮಹಾದಾಯಿ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಾರೆ. ನೀರು ಬಿಡ್ತಿವಿ ಅಂತ ಗೋವಾ ಸಿಎಂ ಪರಿಕ್ಕರ್ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಹೇಳ್ತಾರೆ. ಆದರೆ ಬೆಳಗಾಗೋದ್ರಲ್ಲಿ ಮತ್ತೆ ನೀರು ಬಿಡೋಕೆ ಆಗಲ್ಲ ಅಂತಾರೆ. ನೀರು ಬಿಡುವುದು ಹೌದಾದರೆ ಅದೇ ಮಾತು ಸಿದ್ದರಾಮಯ್ಯ ಅವರಿಗೆ ಹೇಳಬೇಕು. ಗೋವಾ ಮುಖ್ಯಮಂತ್ರಿಗಳು ಯಡಿಯೂರಪ್ಪಗೆ ಏಕೆ ಹೇಳ್ತಾರೆ ಎಂದು ಪ್ರಶ್ನಿಸಿದರು.

ಮುಂದಿನ ತಿಂಗಳ ಕಾವೇರಿ ತೀರ್ಪು
ಮುಂದಿನ ತಿಂಗಳು ಕಾವೇರಿ ನೀರು ಕುರಿತು ತೀರ್ಪು ಪ್ರಕಟವಾಗಲಿದೆ. ಈ ಬಾರಿ ತೀರ್ಪು ನಮ್ಮ ಪರ ಬರುವ ವಿಶ್ವಾಸವಿದೆ. ಇಲ್ಲಿವರೆಗೆ ನೀರು ಬಿಡಿ, ನೀರು ಬಿಡಿ ಎಂಬ ತೀರ್ಪುಗಳು ಬಂದಿವೆ. ಹಿಂದಿನಿಂದಲೂ ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಬರುತ್ತಿದೆ. ಸಂಕಷ್ಟ ಸನ್ನಿವೇಶಗಳಲ್ಲಿಯೂ ತೀರ್ಪು ನಮ್ಮ ವಿರುದ್ಧ ಬಂದಿದೆ ಎಂದರು.

ಸದ್ಯಕ್ಕೆ ಅವರೇ ಮುಖ್ಯಮಂತ್ರಿ
ಮುಂದಿನ ಮುಖ್ಯಮಂತ್ರಿ ನಾನೇ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಪ್ರಸ್ತುತ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ ಎಂದು ಪರಮೇಶ್ವರ್ ಹೇಳಿದರು.

ಬಿಜೆಪಿ ಆಟ ನಡೆಯಲ್ಲ
ಸರಕಾರದ ಸಾಧನೆಗಳ ಬಗ್ಗೆ ನಮ್ಮ ಬಳಿ ಮಾಹಿತಿ ಇದೆ. ಮನ್ ಕೀ ಬಾತ್, ಕೈ ಮೇಲೆತ್ತಿ ಅಚ್ಛೇ ದಿನ್ ಬರುತ್ತದೆ ಅಂತ ಹೇಳ್ತಾರೆ. ಆದರೆ ಬಿಜೆಪಿಯ ಆಟ ಈ ಚುನಾವಣೆಯಲ್ಲಿ ನಡೆಯಲ್ಲ. ಮುಂದೆ ಕಾಂಗ್ರೆಸ್ ನಿಂದಲೇ ಅಚ್ಛೇ ದಿನ್ ಬರುತ್ತವೆ ಎಂದರು.

ವೈಜನಾಥ್ ಆಕ್ರೋಶಕ್ಕೆ ಪ್ರತಿಕ್ರಿಯೆ
ಮಾಜಿ ಸಚಿವ ವೈಜನಾಥ್ ಪಾಟೀಲ್ ಅಸಮಾಧಾನದ ಬಗ್ಗೆ ಮಾತನಾಡಿ, ಅವರು ಹಿರಿಯರು. ಮಗನಿಗೆ ಟಿಕೆಟ್ ಕೇಳಿದ್ದರು. ಕೊಡಲಿಲ್ಲ ಎಂಬ ಕಾರಣಕ್ಕೆ ನನ್ನ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಕೇಳಿದ ತಕ್ಷಣ ಕೊಡೋಕೆ ಆಗಲ್ಲ. ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪರಮೇಶ್ವರ್ ಉತ್ತರಿಸಿದರು.












Click it and Unblock the Notifications