ಕಲಬುರಗಿ; ಸಿದ್ದರಾಮಯ್ಯ ಸಭೆ ವೇಳೆ ಕಂಪಿಸಿದ ಭೂಮಿ!
ಕಲಬುರಗಿ, ಅಕ್ಟೋಬರ್ 12; ಕಲಬುರಗಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಭೂಕಂಪನದ ಅನುಭವಾಗುತ್ತಿದೆ. ಎಷ್ಟು ತೀವ್ರತೆಯ ಕಂಪನ ಉಂಟಾಗುತ್ತಿದೆ ಎಂಬುದು ಸಹ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಭೆ ನಡೆಸುವಾಗಲೇ ಮಂಗಳವಾರ ಭೂಮಿ ಕಂಪಿಸಿದೆ.
ಮಂಗಳವಾರ ಸಿದ್ದರಾಮಯ್ಯ ಭೂಕಂಪ ಪೀಡಿತ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಸಿದ್ದರಾಮಯ್ಯ ಸಭೆ ನಡೆಸುವಾಗಲೇ ಭೂಮಿ ಕಂಪಿಸಿದ್ದು ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರದ ಕುರಿತು ಸಭೆಯನ್ನು ನಡೆಸಿದ್ದಾರೆ.
"ಭೂಕಂಪ ಪೀಡಿತ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದೆ. ನಾನು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದ ಸಂದರ್ಭದಲ್ಲಿಯೇ ಭೂಮಿ ಕಂಪಿಸಿದ ಅನುಭವವಾಗಿ ನಾನೇ ಆತಂಕಕ್ಕೀಡಾದೆ. ಇನ್ನು ಜನರೆಷ್ಟು ಭೀತಿಗೊಳಗಾಗಿರಬಹುದು?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಗಡಿಕೇಶ್ವರ, ಹೊಸಳ್ಳಿ ಎಚ್, ತೇಗಲತಿಪ್ಪಿ, ಕೆರೂರು ಸೇರಿದಂತೆ 10 ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಲಘು ಭೂಕಂಪನದ ಅನುಭವವಾಗುತ್ತಿದೆ. ಸೋಮವಾರ ಸಹ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಕಂಪನ ದಾಖಲಾಗಿತ್ತು. ಸತತವಾಗಿ ಭೂಮಿ ಕಂಪಿಸುತ್ತಿದ್ದು, ಜನರು ಆತಂಕಗೊಂಡಿದ್ದಾರೆ.
|
ಭೂಕಂಪದ ಬಗ್ಗೆ ಸಿದ್ದರಾಮಯ್ಯ ಟ್ವೀಟ್
"ಕಳೆದ ಒಂದು ವಾರದಿಂದ ಇಲ್ಲಿ ಭೂಕಂಪನವಾಗುತ್ತಿದೆ ಎಂದು ಗ್ರಾಮದ ಜನರು ಅಳಲು ತೋಡಿಕೊಂಡರು. ಈಗಾಗಲೇ ಭೂಕಂಪದಿಂದ ಅನೇಕ ಮನೆಗಳು ಕುಸಿದಿವೆ. ಜೀವಭಯದಿಂದ ಗ್ರಾಮಸ್ಥರು ಊರು ತೊರೆದು ನಿರಾಶ್ರಿತರಾಗಿದ್ದಾರೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಭೆಯ ವೇಳೆ ಕಂಪಿಸಿದ ಭೂಮಿ
"ಭೂಕಂಪ ಪೀಡಿತ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದೆ. ನಾನು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದ ಸಂದರ್ಭದಲ್ಲಿಯೇ ಭೂಮಿ ಕಂಪಿಸಿದ ಅನುಭವವಾಗಿ ನಾನೇ ಆತಂಕಕ್ಕೀಡಾದೆ. ಇನ್ನು ಜನರೆಷ್ಟು ಭೀತಿಗೊಳಗಾಗಿರಬಹುದು?" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
|
ಮುಖ್ಯಂತ್ರಿಗಳಿಗೆ ಕರೆ
"ಭೂಕಂಪ ಪೀಡಿತ ಪ್ರದೇಶದಲ್ಲಿ ನಿರಾಶ್ರಿತರಾದವರಿಗೆ ವಾಸಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಬೇಕು, ಜೊತೆಗೆ ಊಟ, ಹೊದಿಕೆಯ ಅಗತ್ಯವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ ಅವರಿಗೆ ಕರೆ ಮಾಡಿ ಅಗತ್ಯ ಪರಿಹಾರಕಾರ್ಯವನ್ನು ತುರ್ತಾಗಿ ಕೈಗೊಳ್ಳುವಂತೆ ಹೇಳಿದ್ದೇನೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಮುಖ್ಯಮಂತ್ರಿಗಳ ಸಭೆ
ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಮ್ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತ ಎರಡು ದಿನಗಳಿಂದ ಸಂಭವಿಸುತ್ತಿರುವ ಲಘು ಭೂಕಂಪದ ಕುರಿತು ಇಂದು ಬೆಂಗಳೂರಿನಲ್ಲಿ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಘಟಕ ಎಸ್ ಡಿ ಆರ್ ಎಫ್ ಹಾಗೂ ಕಲಬುರಗಿ ಜಿಲ್ಲಾಡಳಿತ ದೊಂದಿಗೆ ಜೊತೆ ಸಭೆ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಸಂಸದ ಉಮೇಶ್ ಜಾಧವ್ ಹೇಳಿಕೆ
ಕಲಬುರಗಿ ಜಿಲ್ಲೆಯ ಹಲವು ಪ್ರದೇಶದಲ್ಲಿ ಭೂಮಿ ಕಂಪಿಸುತ್ತಿರುವ ಬಗ್ಗೆ ಸಂಸದ ಉಮೇಶ್ ಜಾಧವ್ ಮಾತನಾಡಿದ್ದಾರೆ, "ಮೂರು-ನಾಲ್ಕು ವರ್ಷಗಳಲ್ಲಿಯೇ ಸೋಮವಾರ ಹೆಚ್ಚು ತೀವ್ರತೆಯ ಕಂಪನ ದಾಖಲಾಗಿದೆ. ಅಧಿಕಾರಿಗಳು ಕಂಪನ ಉಂಟಾದ ಸ್ಥಳದಲ್ಲಿಯೇ ಇದ್ದಾರೆ. ಭೂಕಂಪನ ಹೆಚ್ಚಾದರೆ ಪುನರ್ವಸತಿ ವ್ಯವಸ್ಥೆಗೆ ಕಲಬುರಗಿ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಜನರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇವೆ" ಎಂದು ಹೇಳಿದ್ದಾರೆ.












Click it and Unblock the Notifications