ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್ಸ್ಪೆಕ್ಟರ್ಗೆ 4 ವರ್ಷ ಜೈಲು ಶಿಕ್ಷೆ
ಕಲಬುರಗಿ, ಡಿಸೆಂಬರ್ 9: ವಾಹನ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್ಸ್ಪೆಕ್ಟರ್ಗೆ 4 ವರ್ಷ ಜೈಲು ಶಿಕ್ಷೆ ನೀಡಿ ಕಲಬುರಗಿ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
2015 ರಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಅಂದಿನ ಶಹಾಬಾದ್ ಸಿಪಿಐ ವಿಜಯಲಕ್ಷ್ಮಿ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
2015 ರಲ್ಲಿ ಡೀಸೆಲ್ ತುಂಬಿಸುವ ವಿಚಾರಕ್ಕೆ ಗಲಾಟೆ ಪ್ರಕರಣ ನಡೆದಿತ್ತು. ಆ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಟಾಟಾ ಸುಮೋ ವಾಹನ ಬಿಡುಗಡೆಗೆ 25 ಸಾವಿರ ಲಂಚಕ್ಕೆ ಅಂದಿನ ಸಿಪಿಐ ವಿಜಯಲಕ್ಷ್ಮಿ ಬೇಡಿಕೆ ಇಟ್ಟಿದ್ದರು.

ಟಾಟಾ ಸುಮೋ ವಾಹನ ಮಾಲೀಕ ರಾಜು ಎಂಬಾತನ ಬಳಿ ಸಿಪಿಐ ವಿಜಯಲಕ್ಷ್ಮಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಲಂಚ ರೂಪದಲ್ಲಿ 25 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ವಿಜಯಲಕ್ಷ್ಮಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸರು, ಪ್ರಕರಣದಲ್ಲಿ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಅಂದಿನ ಸಿಪಿಐ ಆಗಿದ್ದ, ಇಂದಿನ ಡಿವೈಎಸ್ಪಿ ವಿಜಯಲಕ್ಷ್ಮಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರುಪಾಯಿ ದಂಡ ವಿಧಿಸಲಾಗಿದೆ.
ಕಲಬುರಗಿ ಜಿಲ್ಲಾ ಸತ್ರ ವಿಶೇಷ ನ್ಯಾಯಲಯದ ನ್ಯಾಯಮೂರ್ತಿ ಸತೀಶ್ ಸಿಂಗ್ ಅವರಿಂದ ಜೈಲು ಶಿಕ್ಷೆ ಆದೇಶ ನೀಡಲಾಗಿದೆ.












Click it and Unblock the Notifications