ಬೆಂಗಳೂರು, ಹುಬ್ಬಳ್ಳಿ- ಧಾರವಾಡ ನಂತರ ಶೀಘ್ರದಲ್ಲೇ ಕಲಬುರಗಿಯಲ್ಲಿ ಬಸ್ ಆದ್ಯತಾ ಪಥ ನಿರ್ಮಾಣ
ಕಲಬುರಗಿ, ಸೆಪ್ಟೆಂಬರ್ 16: ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳ ನಂತರ ಮೀಸಲಾದ ಬಸ್ ಆದ್ಯತಾ ಪಥಗಳನ್ನು (ಬಿಪಿಎಲ್) ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಶೀಘ್ರದಲ್ಲೇ ಉತ್ತರ ಕರ್ನಾಟಕದ ಕಲಬುರಗಿ ನಗರದಲ್ಲಿ ಬಸ್ ಆದ್ಯತಾ ಪಥ ಯೋಜನೆಯನ್ನು ಜಾರಿಗೊಳಿಸಲಿದೆ.
ನಗರ ಭೂ ಸಾರಿಗೆ ನಿರ್ದೇಶನಾಲಯ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ) ಮತ್ತು ನಗರ ಸ್ಥಳೀಯ ಸಂಸ್ಥೆ ಸಹಯೋಗದೊಂದಿಗೆ ಕಲಬುರಗಿ ನಗರದಲ್ಲಿ ಸುಸ್ಥಿರ ಸಾರಿಗೆ ಕ್ರಮವನ್ನು ಒದಗಿಸಲು ಲೇನ್ ರಚಿಸಲು ನಿರ್ಧರಿಸಿದೆ ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆ ಇಂಡಿಯನ್ ಎಕ್ಸ್ಪ್ರೆಸ್ಗೆ ಮಾಹಿತಿ ನೀಡಿದ ನಗರ ಭೂ ಸಾರಿಗೆ ನಿರ್ದೇಶನಾಲಯ ಆಯುಕ್ತರಾದ ವಿ. ಮಂಜುಳಾ, "ನಗರಗಳು ಚಲನೆಯಲ್ಲಿವೆ' ಎಂಬ ವಿಶಿಷ್ಟ ಸವಾಲನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ ಕೈಗೆತ್ತಿಕೊಂಡಿದೆ ಮತ್ತು ಅದರ ಒಂದು ಭಾಗವಾಗಿ ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕೆಕೆಆರ್ಟಿಸಿ ಬಸ್ ಆದ್ಯತಾ ಪಥ ಅನುಷ್ಠಾನದಲ್ಲಿ ಆಸಕ್ತಿ ತೋರಿಸಿವೆ," ಎಂದರು.
"ನಗರ ಭೂ ಸಾರಿಗೆ ನಿರ್ದೇಶನಾಲಯ ಅಧಿಕಾರಿಗಳ ಪ್ರಕಾರ ಕಲಬುರಗಿ ಕರ್ನಾಟಕ ರಾಜ್ಯದ ಈಶಾನ್ಯ ಭಾಗದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇತ್ತೀಚೆಗೆ ನಡೆಸಿದ ಕಲಬುರಗಿ ನಗರದ ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆ (ಸಿಟಿಟಿಪಿ) ವರದಿಯಲ್ಲಿ, ಶೇಕಡಾ 25ರಷ್ಟು ಜನರು ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸುತ್ತಾರೆ. ಇದನ್ನು ದಿನಕ್ಕೆ 1200 ಸಂಚಾರಗಳ 22 ಮಾರ್ಗಗಳಲ್ಲಿ ಸಮೀಕ್ಷೆ ನಡೆಸಲಾಗಿದೆ."
"ಬೆಂಗಳೂರು ಮತ್ತು ಹುಬ್ಬಳ್ಳಿ- ಧಾರವಾಡದಲ್ಲಿ ಬಸ್ ಆದ್ಯತಾ ಪಥ ಯೋಜನೆಯನ್ನು ವಿನ್ಯಾಸಗೊಳಿಸುವ ಮತ್ತು ಅನುಷ್ಠಾನಗೊಳಿಸಿದ ಅನುಭವದೊಂದಿಗೆ, ನಾವು ಕಲಬುರಗಿ ನಗರಕ್ಕೆ ಮೀಸಲಾದ ಬಸ್ ಆದ್ಯತಾ ಪಥವನ್ನು ಪರಿಕಲ್ಪನೆ ಮಾಡಿ ವಿನ್ಯಾಸಗೊಳಿಸಿದ್ದೇವೆ. ಈ ಬಸ್ ಆದ್ಯತಾ ಪಥ (ಬಿಪಿಎಲ್) ಯೋಜನೆಯನ್ನು ಕಲಬುರಗಿ ನಗರದಲ್ಲಿ 'ಕಲ್ಯಾಣ ಮಾರ್ಗ' ಎಂದು ಕರೆಯಲಾಗುವುದು,'' ಎಂದು ಆಯುಕ್ತರಾದ ವಿ. ಮಂಜುಳಾ ಹೇಳಿದರು.
"ಕಲಬುರಗಿ ನಗರದಲ್ಲಿ ಬಸ್ ಆದ್ಯತಾ ಪಥ ನೆಟ್ವರ್ಕ್ 10 ಕಿ.ಮೀ. ಇರಲಿದ್ದು, ಮಾರ್ಗಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವಿಕೆಗಾಗಿ ನಗರದ ವಿವಿಧ ಮಧ್ಯಸ್ಥಗಾರರನ್ನು ಸಂಪರ್ಕಿಸಿದೆ ಮತ್ತು ಬಸ್ ಆದ್ಯತಾ ಪಥ ಯೋಜನೆಯನ್ನು ಅಂತಿಮಗೊಳಿಸುವ ಮೊದಲು ಸರಣಿ ಸಭೆಗಳನ್ನು ನಡೆಸಲಾಗಿದೆ," ಎಂದು ತಿಳಿಸಿದರು.
''ಕಲ್ಯಾಣ ಮಾರ್ಗ ಕಲಬುರಗಿ ನಗರದ ಹಿರಾಪುರ ವೃತ್ತದಿಂದ ನಗರ ಕೇಂದ್ರ, ಬಸ್ ನಿಲ್ದಾಣಗಳು, ಮಿನಿ ವಿಧಾನ ಸೌಧದಂತಹ ಪ್ರಮುಖ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಮಾಲ್ಗಳು, ಸಾರ್ವಜನಿಕ ಉದ್ಯಾನಗಳು, ಆಸ್ಪತ್ರೆಗಳು ಮತ್ತು ವಸತಿ ಪ್ರದೇಶಗಳ ಜೊತೆಗೆ ವಿಮಾನ ನಿಲ್ದಾಣವನ್ನು ಸಂಪರ್ಕಿಸಲಾಗುತ್ತದೆ,'' ಎಂದು ಆಯುಕ್ತೆ ವಿ. ಮಂಜುಳಾ ಮಾಹಿತಿ ನೀಡಿದರು.
"ನಗರ ಭೂ ಸಾರಿಗೆ ನಿರ್ದೇಶನಾಲಯ ಅಧಿಕಾರಿಗಳ ಪ್ರಕಾರ ಈ ಯೋಜನೆಯು ಕಲಬುರಗಿ ನಗರದ ಜೀವನಾಡಿಯಾಗಲಿದ್ದು, ಬಸ್ ಆದ್ಯತಾ ಪಥ ಹೊರತಾಗಿ, ಬಸ್ಸಿನ ಲೇನ್ಗೆ ಹೊಂದಿಕೊಂಡಂತೆ ಮೀಸಲು ಸೈಕಲ್ ಟ್ರ್ಯಾಕ್ ಅನ್ನು ನಿರ್ಮಿಸಲು ಯೋಜಿಸುತ್ತಿದೆ. ಇದು ಸೈಕ್ಲಿಸ್ಟ್ಗಳನ್ನು ರಕ್ಷಿಸಲು ಆರ್ಸಿಸಿ ಕರ್ಬ್ ಮತ್ತು ವೇವ್ ವಾಲ್ನಿಂದ ಬೇರ್ಪಡಿಸಲಾಗುತ್ತದೆ. ಈ ಯೋಜನೆಯು ಬಸ್ ನಿಲ್ದಾಣಗಳು ಮತ್ತು ಬೈಸಿಕಲ್ ಪಾರ್ಕಿಂಗ್ ಸ್ಥಳಗಳನ್ನು ಒಳಗೊಂಡಿರುತ್ತದೆ."
"ಆಂಬುಲೆನ್ಸ್ಗಳು ಮತ್ತು ತುರ್ತು ವಾಹನಗಳು ಆಸ್ಪತ್ರೆಗಳ ಬಳಿಯ ಬಸ್ ಲೇನ್ ಕಾರಿಡಾರ್ಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುಕೂಲವಾಗುತ್ತದೆ," ಎಂದು ಹೇಳಿದರು.
ಈ ಯೋಜನೆಯ ಅಂದಾಜು ವೆಚ್ಚವು 19 ಕೋಟಿ ರೂಪಾಯಿಗಳಾಗಿದ್ದು, ಇದನ್ನು ರಾಜ್ಯ ನಗರ ಸಾರಿಗೆ ನಿಧಿಯ ಅಡಿಯಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಧನಸಹಾಯ ಮಾಡಲಾಗುವುದು. ಈ ಯೋಜನೆಯನ್ನು ಟೆಂಡರ್ ಮಾಡಲಾಗಿದೆ. ಇದನ್ನು ಕಲಬುರಗಿ ಮಹಾನಗರ ಪಾಲಿಕೆ ಅನುಷ್ಠಾನಗೊಳಿಸಲಿದೆ ಮತ್ತು ನಗರದ ಇತರ ಸಂಸ್ಥೆಗಳಾದ ಕೆಕೆಆರ್ಟಿಸಿ, ಕಲಬುರಗಿಯ ನಗರ ಸಂಚಾರ ಪೊಲೀಸರಿಂದ ಸಹಕಾರ ಇರಲಿದೆ.
2019ರಲ್ಲಿ ಟ್ರಾಫಿಕ್ ನಿಯಂತ್ರಣಗೊಳಿಸಲು ಮತ್ತು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಬೆಂಗಳೂರು ತನ್ನ ಮೊದಲ ಬಸ್ ಆದ್ಯತಾ ಪಥವನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಬೆಂಗಳೂರು ನಗರ ಸಂಚಾರ ಪೊಲೀಸ್ (ಬಿಟಿಪಿ) ಜಾರಿಗೆ ತಂದಿತು.
ಈ ಪಥ ಹೊರ ವರ್ತುಲ ರಸ್ತೆಯ (ORR) ಉದ್ದಕ್ಕೂ ಹಾದುಹೋಗುತ್ತದೆ, ಸ್ವಾಮಿ ವಿವೇಕಾನಂದ ರಸ್ತೆಯಿಂದ ರೇಷ್ಮೆ ಮಂಡಳಿಯವರೆಗೆ, ಹೊರ ವರ್ತುಲ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಹಳೆಯ ಮದ್ರಾಸ್ ರಸ್ತೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಮಾಗಡಿ ರಸ್ತೆ ಮತ್ತು ಬಳ್ಳಾರಿ ರಸ್ತೆ ಸೇರಿದಂತೆ 12 ಅಧಿಕ ಸಾಂದ್ರತೆಯ ಇತರೆ ಕಾರಿಡಾರ್ಗಳನ್ನು ಒಳಗೊಂಡಿದೆ.
Recommended Video
ನಂತರ 2020 ರಲ್ಲಿ ಹುಬ್ಬಳ್ಳಿ- ಧಾರವಾಡ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಎಚ್ಡಿ-ಬಿಆರ್ಟಿಎಸ್) ದಕ್ಷಿಣ ಭಾರತದ ಏಕೈಕ ಸಾರ್ವಜನಿಕ ಸಾರಿಗೆ ಕಾರಿಡಾರ್ ಅನ್ನು ರಾಜ್ಯ ಸರ್ಕಾರವು 970.87 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ 22.3 ಕಿ.ಮೀ. ಮೀಸಲಾದ ಬಸ್ ಕಾರಿಡಾರ್ ಅಭಿವೃದ್ಧಿಪಡಿಸಿತು. ಯೋಜನೆಯು ಚಿಗರಿ ಬಸ್ಗಳು, 32 ಮಧ್ಯಮ ಬಸ್ ನಿಲ್ದಾಣಗಳು, ಬಸ್ ನಿಲ್ದಾಣಗಳು, ಡಿಪೋಗಳನ್ನು ಒಳಗೊಂಡಿದ್ದು, ಒಂದು ಪ್ರಯಾಣವನ್ನು ಪೂರ್ಣಗೊಳಿಸಲು ಚಿಗರಿ ಬಸ್ಸುಗಳು ಸುಮಾರು 35 ನಿಮಿಷಗಳನ್ನು ತೆಗೆದುಕೊಳ್ಳುತ್ತವೆ.