ರಾವೂರ್ ಗ್ರಾಮದಲ್ಲಿ ಲಾಕ್ಡೌನ್ ಉಲ್ಲಂಘಿಸಿ ರಥೋತ್ಸವ, ಪಿಎಸ್ಐ ಅಮಾನತು
ಕಲಬುರಗಿ, ಏಪ್ರಿಲ್ 16: ರಾವೂರ್ ಗ್ರಾಮದಲ್ಲಿ ಲಾಕ್ಡೌನ್ ಮಧ್ಯೆಯೂ ಸಿದ್ದಲಿಂಗೇಶ್ವರ ರಥೋತ್ಸವ ಕಾರ್ಯಕ್ರಮ ನಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ವಾಡಿ ಠಾಣೆ ಪಿಎಸ್ಐ ಅಮಾನತುಗೊಳಿಸಲಾಗಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಪ್ರತಿ ವರ್ಷ ಈ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಜಾತ್ರೆ ಮಾಡಲಾಗುತ್ತಿತ್ತು. ಈ ವರ್ಷ ಕೊರೊನಾ ಭೀತಿ ಇದ್ದರೂ, ಜನ ಜಾತ್ರೆ ಮಾಡುವುದನ್ನು ಬಿಟ್ಟಿಲ್ಲ. ಬೆಳ್ಳಗೆ ಆರು ಗಂಟೆಗೆ ರಾವೂರ ಊರಿನ ಜನ ರಥೋತ್ಸವ ಮಾಡಿದ್ದಾರೆ. ಮಾಸ್ಕ್ ಬಳಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರೂ ಸಂಖ್ಯೆಯ ಜನರು ಇದರಲ್ಲಿ ಭಾಗಿಯಾಗಿದ್ದಾರೆ.
ಜಾತ್ರೆಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕಾಗಿ ವಾಡಿ ಠಾಣೆ ಪಿಎಸ್ಐ ವಿಜಯಕುಮಾರ ಬಾವಗಿ ಹಾಗೂ ಚಿತ್ತಾಪುರ ಸಿಡಿಪಿಒ ರಾಜಕುಮಾರ ರಾಠೋಡ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಪಿಎಸ್ಐ ಅಮಾನತುಗೊಳಿಸಿ ಎಸ್ಪಿ ಯಡಾ ಮಾರ್ಟಿನ್ ಹಾಗೂ ಸಿಡಿಪಿಒ ಅಮಾನತುಗೊಳಿಸಿ ಡಿಸಿ ಶರತ್ ಬಿ ಆದೇಶ ಹೊರಡಿಸಿದ್ದಾರೆ. ಸಿಡಿಪಿಒ ಆಡಳಿತ ವೈಫಲ್ಯ ಹಾಗೂ ಪಿಎಸ್ಐ ಭದ್ರತಾ ಲೋಪ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇದರ ಜೊತೆ ರಥೋತ್ಸವ ಮಾಡಿರುವ ದೇವಸ್ಥಾನದ ಕಮಿಟಿಯ 20 ಜನರ ವಿರುದ್ಧ ಸುಮೋಟ ಪ್ರಕರಣ ದಾಖಲು ಮಾಡಲಾಗಿದೆ. ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.
ಅಂದ್ಹಾಗೆ, ಕಲಬುರಗಿ ಜಿಲ್ಲೆಯಲ್ಲಿ 3 ಜನ ಕೊರೊನಾಗೆ ಬಲಿಯಾಗಿದ್ದಾರೆ. 18 ಜನರಿಗೆ ಸೋಂಕಿದೆ. ಜಿಲ್ಲೆಯನ್ನು ರೆಡ್ ಜೋನ್ ಅಂತ ಘೋಷಿಸಲಾಗಿದೆ. ಆದರೂ ಜಾತ್ರೆ ಹಾಗೂ ರಥೋತ್ಸವ ಮಾಡಿರುವುದು ಆತಂಕ ಹೆಚ್ಚಿಸಿದೆ.












Click it and Unblock the Notifications