ದಲಿತರು ಹಿಂದುಳಿದವರು ಭಿಕ್ಷುಕರೇ?: ಮೀಸಲಾತಿ ಜಾರಿಯಿಂದ ಕಾಂಗ್ರೆಸ್ಗೆ ಭಯ ಕಾಡುತ್ತಿದೆ: ಬೊಮ್ಮಾಯಿ ತಿರುಗೇಟು
ಕಲಬುರಗಿ, ಏಪ್ರಿಲ್ 28: ಅನೇಕ ವರ್ಷದಿಂದ ದಲಿತರನ್ನು ಬಾವಿಯಲ್ಲಿ ಬಿಟ್ಟು ಮತ ಹಾಕಿಸಿಕೊಂಡು ಮತ್ತೆ ಬಾವಿಗೆ ಬಿಡುವ ಕೆಲಸ ವಾಗುತ್ತಿತ್ತು. ಆದರೆ ಮೀಸಲಾತಿ ನೀಡಲು ನಾನು ಸಿಎಂ ಆಗಿ ಬರಬಹುದೆಂದು ಅವರು ಅಂದುಕೊಂಡಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಕಲಬುರಗಿ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ಸೇಡಂ ಅವರ ಪರವಾಗಿ ರೋಡ್ ಶೊ ನಡೆಸಿ ಬಳಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಹಿಂದುಳಿದವರು, ದಲಿತರು ಭಿಕ್ಷುಕರೇ ಎಂದು ಪ್ರಶ್ನಿಸಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಮುಖ್ಯಮಂತ್ರಿ ಈ ರೀತಿ ಪ್ರತಿಕ್ರಿಯಿಸಿದರು.

ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ವರ್ಷಗಳಿಂದಲು ದಲಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿಕೊಂಡು ಬಂದಿದೆ. ಇದೀಗ ನಾನು ಮುಖ್ಯಮಂತ್ರಿ ಆದ ಮೇಲೆ ಅವರಿಗೆಲ್ಲ ಮೀಸಲಾತಿ ಕಲ್ಪಿಸಿದ್ದೇನೆ. ಬಿಜೆಪಿ ಸರ್ಕಾರ ಜಾರಿಗೆ ಮೀಸಲಾತಿ ತಂದ ಮೇಲೆ ಕಾಂಗ್ರೆಸ್ನವರಿಗೆ ಭಯ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡಿದ್ದಾರೆ. ಎಲ್ಲ ಟೀಕೆಗಳನ್ನು ನುಂಗಿ ಮೋದಿಯವರು ನಂಜುಂಡ ಆಗಿದ್ದಾರೆ ಎಂದರು.
ಬೇರೆ ರಾಜ್ಯಗಳಂತೆ ಇಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ
ಸೇಡಂನಲ್ಲಿ ಬಿಜೆಪಿ ಅಭ್ಯರ್ಥಿ ತೇಲ್ಕೂರು ಗೆದ್ದರೆ ರಾಜ್ಯದಲ್ಲಿ ಬಿಜೆಪಿ ಜನಪರ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅವರು ಎಲ್ಲಿ ಹೋಗಿದ್ದಾರೆ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಗುಜರಾತ್, ಉತ್ತರ ಪ್ರದೇಶ, ಉತ್ತರಾಖಾಂಡ್ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ. ಹೀಗಾಗಿ ಮೋದಿಯವರ ವಿರುದ್ಧ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಉಚಿತ ಬಸ್ ವ್ಯವಸ್ಥೆಯನ್ನು ಈಗಾಗಲೇ ಘೋಷಿಸಿದೆ
ಕಾಂಗ್ರೆಸ್ ನವರು ಚುನಾವಣೆ ಹೊತ್ತಲ್ಲಿ ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡುವುದಾಗಿ ಅವರು ಹೇಳಿದ್ದಾರೆ. ಬಿಜೆಪಿ ಸರ್ಕಾರ ಈಗಾಗಲೇ ಆ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಕಾಂಗ್ರೆಸ್ ರಾಹುಲ್ ಗಾಂಧಿಗೆ ಇವರು ಹೇಳುವುದು ಅರ್ಥವಾಗುವುದಿಲ್ಲ. ಅವರು ಘೋಷಣೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ನಮ್ಮದು ಡಬಲ್ ಎಂಜಿನ್ ಸರ್ಕಾರ, ಕಲ್ಯಾಣ ಕರ್ನಾಟಕದ ಕಲ್ಯಾಣ ಮಾಡುತ್ತೇವೆ. ಮುಂದಿನ ಬಾರಿಯ ಅಧಿಕಾರಕ್ಕೆ ರುವ ಮೂಲಕ ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಬೊಮ್ಮಾಯಿ ಭರವಸೆ ನೀಡಿದರು.
ರಾಜಕುಮಾರ್ ಪಾಟೀಲ್ ತೇಲ್ಕೂರು ಅವರು ಹಠ ಹಿಡಿದು ಕೆಲಸ ಮಾಡುತ್ತಾರೆ. ಅವರು ಕಲಬುರಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಪಡೆದು 4 ಲಕ್ಷ ರೈತರಿಗೆ 1100 ಕೋಟಿ ಸಾಲ ನೀಡಿದ್ದಾರೆ. ನೀವು ಅವರನ್ನು ಗೆಲ್ಲಿಸಿ ಸುಭದ್ರ ಸರ್ಕಾರ ರಚನೆಗೆ ಆಶೀರ್ವದಿಸಿ ಎಂದು ಅವರು ಮನವಿ ಮಾಡಿದರು.












Click it and Unblock the Notifications