ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ಸಡನ್ ವಿಸಿಟ್
ಕಲಬುರಗಿ, ಮಾರ್ಚ್.15: ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಗೆ ಕರ್ನಾಟಕದಲ್ಲೇ ಮೊದಲ ವ್ಯಕ್ತಿ ಪ್ರಾಣ ಬಿಟ್ಟಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ವ್ಯಕ್ತಿ ಮಾರಕ ರೋಗಕ್ಕೆ ಬಲಿಯಾಗಿದ್ದು ರಾಜ್ಯದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.
ರಾಜ್ಯ ಸರ್ಕಾರವು ಮಾರಕ ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ಹಾಕುವುದಕ್ಕೆ ಒಂದು ವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಇದರ ನಡುವೆ ಭಾನುವಾರ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ದಿಢೀರ್ ಭೇಟಿ ನೀಡಿದರು.
ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವ ಶಂಕಿತರನ್ನು ಇರಿಸಲು ಪ್ರತ್ಯೇಕ ವಾರ್ಡ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆ ಪ್ರತ್ಯೇಕ ವಾರ್ಡ್ ಗಳಿಗೆ ಭೇಟಿ ನೀಡಿದ ಸಚಿವರು ಪರಿಶೀಲನೆ ನಡೆಸಿದರು.

ಭಾನುವಾರ 500 ಪರ್ಸನಲ್ ಪ್ರಿವೆಂನ್ಷನ್ ಕಿಟ್:
ಕಲಬುರಗಿಯ ಆಸ್ಪತ್ರೆಯಲ್ಲಿ ಸಿದ್ಧಪಡಿಸಿರುವ ಐಸೋಲೇಟೆಡ್ ವಾರ್ಡ್ ಗಳ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಶ್ರೀರಾಮುಲು ವೈದ್ಯರಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಈಗಾಗಲೇ 80 ಪರ್ಸನಲ್ ಪ್ರಿವೆಂನ್ಷನ್ ಕಿಟ್ ಗಳಿವೆ. ಭಾನುವಾರ 500 ಹೊಸ ಕಿಟ್ ಗಳು ಬರಲಿವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸದಾ ಅಲರ್ಟ್ ಆಗಿ ಇರುವಂತೆ ವೈದ್ಯರಿಗೆ ಸಚಿವರು ಸೂಚನೆ ನೀಡಿದ್ದಾರೆ.
ಇನ್ನು, ಸೌದಿ ಅರೇಬಿಯಾದಿಂದ ಕಲಬುರಗಿಗೆ ಆಗಮಿಸಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ಮಹ್ಮದ್ ಹುಸೇನ್ ಸಿದ್ದಿಕ್ ಸಂಬಂಧಿಕರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸಂಬಂಧಿಕರಲ್ಲಿ ಯಾವುದೇ ರೀತಿ ಸೋಂಕಿತ ಲಕ್ಷಣಗಳು ಕಂಡು ಬಂದಿಲ್ಲ ಎಂದು ಶನಿವಾರವಷ್ಟೇ ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದರು.












Click it and Unblock the Notifications