ಚಿಂಚೋಳಿ ಉಪ ಚುನಾವಣೆ : ಪ್ರಿಯಾಂಕ್ ಖರ್ಗೆ v/s ಡಾ.ಉಮೇಶ್ ಜಾಧವ್
Recommended Video
ಕಲಬುರಗಿ, ಏಪ್ರಿಲ್ 28 : ಚಿಂಚೋಳಿ ಕ್ಷೇತ್ರದ ಉಪ ಚುನಾವಣಾ ಕಣ ಅಂತಿಮಗೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದೆ. ಆದರೆ, ಈ ಉಪ ಚುನಾವಣೆ ಪ್ರಿಯಾಂಕ್ ಖರ್ಗೆ ಮತ್ತು ಡಾ.ಉಮೇಶ್ ಜಾಧವ್ ನಡುವಿನ ನೇರ ಪೈಪೋಟಿಯಾಗಿದೆ.
ಮೇ 19ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ಸುಭಾಷ್ ರಾಥೋಡ್, ಬಿಜೆಪಿಯಿಂದ ಡಾ.ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಅಭ್ಯರ್ಥಿಗಳು.
ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯಲು 3 ಕಾರಣಗಳು
2018ರ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಾ.ಉಮೇಶ್ ಜಾಧವ್ ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ, 2019ರ ಮಾರ್ಚ್ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.
ಚಿಂಚೋಳಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ
ಡಾ.ಉಮೇಶ್ ಜಾಧವ್ ಅವರು ಪಕ್ಷವನ್ನು ಬಿಡಲು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ ಕಾರಣ ಎಂಬುದು ಆರೋಪ. ಆದ್ದರಿಂದ ಉಮೇಶ್ ಜಾಧವ್ ಅವರು ಲೋಕಸಭಾ ಚುನಾವಣೆಯಲ್ಲಿ ಗುಲ್ಬರ್ಗ ಕ್ಷೇತ್ರದಲ್ಲಿ ಮಲ್ಲಿಕಾರ್ಜು ಖರ್ಗೆ ಅವರ ವಿರುದ್ಧ ಕಣಕ್ಕಿಳಿದಿದ್ದಾರೆ.
ಡಾ.ಉಮೇಶ್ ಜಾಧವ್ ರಾಜೀನಾಮೆ : ಯಾರು, ಏನು ಹೇಳಿದರು?
ಪ್ರಿಯಾಂಕ್ ಖರ್ಗೆ ವಿರುದ್ಧ ಗರಂ
ಡಾ.ಉಮೇಶ್ ಜಾಧವ್ ಅವರು ಕಾಂಗ್ರೆಸ್ ತೊರೆಯಲು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರು ಕಾರಣ ಎಂದು ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ಬಿಟ್ಟ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಡಾ.ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆ ಪುತ್ರ ವ್ಯಾಮೋಹದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಿಯಾಂಕ್ ಖರ್ಗೆ ಅವರ ಮೇಲೆ ಅವರಿಗೆ ಅಸಮಾಧಾನವಿದೆ.
ಪ್ರಿಯಾಂಕ್ ಖರ್ಗೆಗೆ ಸವಾಲು
ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲಾಗಿದೆ. ಆದ್ದರಿಂದ, ಲಂಬಾಣಿ ಸಮುದಾಯಕ್ಕೆ ಸೇರಿದ ತಮ್ಮ ಆಪ್ತರಾದ ಸುಭಾಷ್ ರಾಥೋಡ್ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಅವರನ್ನು ಗೆಲ್ಲಿಸುಕೊಂಡು ಬರುವ ಹೊಣೆಯನ್ನು ಅವರು ಹೊತ್ತುಕೊಂಡಿದ್ದಾರೆ.
ಆಪರೇಷನ್ ಕಮಲದ ವಿಚಾರ
ರಾಜ್ಯದಲ್ಲಿ ಆಪರೇಷನ್ ಕಮಲದ ಚರ್ಚೆಗಳು ನಡೆಯುತ್ತಿದ್ದಾಗ ಡಾ.ಉಮೇಶ್ ಜಾಧವ್ ನಾಪತ್ತೆಯಾಗಿದ್ದರು. ಆಗ ಅವರ ಮನೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರಿಯಾಂಕ್ ಖರ್ಗೆ ಅವರೇ ಪ್ರತಿಭಟನೆ ಮಾಡಿಸಿದ್ದಾರೆ ಎಂಬುದು ಡಾ.ಉಮೇಶ್ ಜಾಧವ್ ಅವರ ಆರೋಪವಾಗಿದೆ.
ಪಕ್ಷದಲ್ಲಿ ಕಡೆಗಣಿಸಿದರು
ಅತಿಯಾದ ಪುತ್ರ ಪ್ರೇಮದಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಡಾ.ಉಮೇಶ್ ಜಾಧವ್ ಅವರನ್ನು ಕಡೆಗಣಿಸಿದರು ಎಂಬುದು ಆರೋಪವಾಗಿದೆ. ಉಮೇಶ್ ಜಾಧವ್ ಪಕ್ಷ ತೊರೆಯುವ ಬಗ್ಗೆ ಸುದ್ದಿಗಳು ಹಬ್ಬಿದ್ದಾಗಲೂ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರು ಕರೆದು ಮಾತನಾಡಲಿಲ್ಲ ಎಂದು ಉಮೇಶ್ ಜಾಧವ್ ಆರೋಪ ಮಾಡುತ್ತಿದ್ದಾರೆ.