85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮೀಸಲಾತಿ ಬಿಡಿ, ಶಕ್ತರಾಗಿದ್ದೇವೆ ಎನ್ನಿ; ಡಾ. ಬಿ.ಟಿ. ಲಲಿತಾ ನಾಯಕ್
ಕಲಬುರಗಿ, ಫೆಬ್ರವರಿ 06: ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ಆಲೋಚನೆಗಳನ್ನೇ ಮಹಿಳಾ ಆಲೋಚನೆಗಳು ಎಂದು ಬಿಂಬಿಸುವ ಕೆಲಸ ದೇಶದಲ್ಲಿ ಆಗುತ್ತಿದೆ. ಆದರೆ 12ನೇ ಶತಮಾನದಲ್ಲಿಯೇ ಶರಣರ ಸರಿಸಮನಾಗಿ ವಚನಗಳನ್ನು ರಚಿಸಿದ್ದಾರೆ" ಎಂದು ಹಿರಿಯ ಸಾಹಿತಿ, ಚಿಂತಕಿ ಡಾ.ಬಿ.ಟಿ. ಲಲಿತಾ ನಾಯಕ್ ಅವರು ಪ್ರತಿಪಾದಿಸಿದರು.
ಕಲಬುರಗಿಯ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದಂದು ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ 'ಸ್ತ್ರೀ ಲೋಕ: ತಲ್ಲಣಗಳು' ಗೋಷ್ಠಿಯ ಅಧ್ಯಕ್ಷತೆ ವಹಿಸಿ 'ಬದಲಾಗುತ್ತಿರುವ ಮಹಿಳಾ ಸಂವೇದನೆಗಳು' ಕುರಿತ ವಿಚಾರ ಮಂಡಿಸಿದರು.
"ನಾವು ಶೋಷಿತ ಕಾಲಘಟ್ಟದಿಂದ ಹೊರಬಂದಿದ್ದೇವೆ. ಮೀಸಲಾತಿ ಕೊಡಿ ಎಂದು ಕೇಳುವ ಬದಲು, ಎಲ್ಲದಕ್ಕೂ ನಾವು ಶಕ್ತರಾಗಿದ್ದೇವೆ ಎಂಬುದನ್ನು ಸಾರಿ ಹೇಳಬೇಕಿದೆ. ಊಟ, ಬಟ್ಟೆ, ಧಾರ್ಮಿಕ ಆಚರಣೆ ನಮ್ಮಆಯ್ಕೆ. ಇದನ್ನು ನಮ್ಮ ಸಂವಿಧಾನವೇ ನಮಗೆ ಕೊಟ್ಟಿದೆ. ಆದರೆ ಅದು ಬೇಡ, ಇದು ಬೇಡ ಎಂದು ನಮ್ಮ ಮೇಲೆ ಹೇರುವುದನ್ನು ನಾವು ಪ್ರತಿಭಟಿಸಬೇಕಿದೆ. ವಚನಕಾರ್ತಿ ಅಕ್ಕಮಹಾದೇವಿಯವರ ತರ್ಕವನ್ನು ಇದೀಗ ಮರುಚಿಂತನೆ ಮಾಡುವ ಅಗತ್ಯ ಬಂದಿದೆ" ಎಂದರು.

"2ನೇ ಶತಮಾನದಲ್ಲಿ ಶರಣರು ಪುರೋಹಿತ ಶಾಹಿ, ವೈದಿಕ ಶಾಹಿಯನ್ನು ಧಿಕ್ಕರಿಸಿ ತಮ್ಮತನವನ್ನು ಮೆರೆದರು. ಈ ಕಾಲದಲ್ಲಿಯೇ ಮಹಿಳೆಯರು ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ತಮ್ಮ ಪ್ರಾತಿನಿಧ್ಯ ಸಾಬೀತುಪಡಿಸಿದ್ದಾರೆ. ಇದೀಗ ನಮ್ಮನ್ನು ಆಳುವ ಸರ್ಕಾರಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಚಿಂತಿಸುವ ಅಗತ್ಯವಿದೆ. ಈ ಚಿಂತನೆಯಲ್ಲಿ ಮಹಿಳೆಯರೂ ಚಿಂತನೆಯ ಭಾಗವಾಗಬೇಕಿದೆ. ಮಹಿಳೆಯರನ್ನು ವ್ಯಾವಹಾರಿಕವಾಗಿ ಬಿಂಬಿಸುತ್ತಿರುವುದು ಸರಿಯಲ್ಲ. ನಮ್ಮನ್ನು ನಾವು ಘನತೆಯಿಂದ ಬದುಕುವ ರೀತಿ ಬಗ್ಗೆ ಚಿಂತನೆ ಮಾಡಬೇಕು. ಆದರೆ ಅಂತಹ ಶಿಕ್ಷಣವನ್ನು ನಾವು ಕಲಿಯುತ್ತಲೇ ಇಲ್ಲ .ರಾಜ್ಯದಲ್ಲಿ ಮೌಢ್ಯ ವಿರೋಧಿ ಕಾನೂನು ರಚಿಸಿ ಸರ್ಕಾರ ಉತ್ತಮ ಕಾರ್ಯ ಮಾಡಿದೆ. ಆದರೆ ಈ ಕಾಯ್ದೆ ವ್ಯಾಪ್ತಿಗೆ ಜ್ಯೋತಿಷ್ಯ ಹಾಗೂ ವಾಸ್ತುವನ್ನೂ ಸೇರಿಸಲಿ" ಎಂದು ಡಾ.ಬಿ.ಟಿ. ಲಲಿತಾ ನಾಯಕ್ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪ್ರೊ. ತಾರಿಣಿ ಶುಭದಾಯಿನಿ ಅವರು ಮಹಿಳೆ ಮತ್ತು ಸೃಜನಶೀಲತೆ ಕುರಿತು ಹಾಗೂ ಡಾ. ಆರ್.ಪೂರ್ಣಿಮಾ ಅವರು ಮಹಿಳೆ ಮತ್ತು ಪ್ರಭುತ್ವದ ಕುರಿತು ವಿಚಾರ ಮಂಡಿಸಿದರು.












Click it and Unblock the Notifications