ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕತೆ ಇಲ್ಲ: ಖರ್ಗೆ
ಕಲಬುರಗಿ, ಜುಲೈ 12: ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕತೆ ಇಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವ ಮುಖ ಇಟ್ಟುಕೊಂಡು ಕಾಶ್ಮೀರದಲ್ಲಿ ಸರ್ಕಾರ ರಚಿಸುತ್ತದೆ ಎಂದು ಪ್ರಶ್ನೆ ಮಾಡಿದರು.
ಈಗಾಗಲೇ ಪಿಡಿಪಿ ಜೊತೆ ಸರ್ಕಾರ ರಚಿಸಿ ಆಡಳಿತದಲ್ಲಿ ವಿಫಲವಾಗಿ ರಾಜಕೀಯ ಲಾಭಕ್ಕಾಗಿ ಮೈತ್ರಿ ಮುರಿದುಕೊಂಡಿದೆ. ಈಗ ಯಾವ ಪುರುಷಾರ್ಥಕ್ಕಾಗಿ ಮತ್ತೆ ಸರ್ಕಾರ ರಚಿಸಲು ಮುಂದಾಗಿದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರ ರಚಿಸಿದ್ದ ಬಿಜೆಪಿ ಕಾಶ್ಮೀರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ, ನುಸುಳುಕೋರರನ್ನು ತಡೆಯಲು ವಿಫಲವಾಗಿದೆ, ಅಪ್ರಚೋದಿತ ದಾಳಿ ತಡೆಯಲು ವಿಫಲವಾಗಿದೆ, ಅಂತರರಾಷ್ಟ್ರೀಯ ಗಡಿ ನಿಯಮ ಪಾಲಿಸಲು ವಿಫಲವಾಗಿದೆ ಎಂದು ಅವರು ಆರೋಪ ಮಾಡಿದರು.
ನಿನ್ನೆ ಕಾಶ್ಮೀರದ ಬಿಜೆಪಿ ಮುಖಂಡ ಮೋದಿ ಅವರೊಂದಿಗೆ ಗುಪ್ತ ಸಭೆ ನಡೆಸಿದ ಬಳಿಕ ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ ಎಂಬ ಸುದ್ದಿ ಹರಿದಾಡುತ್ತಿದ್ದು. ಪಿಡಿಪಿಯ ಅತೃಪ್ತ ಶಾಸಕರು, ಪಕ್ಷೇತರರು ಹಾಗೂ ಇತರೆ ಪಕ್ಷಗಳ ಶಾಸಕರ ಬಲದಿಂದ ಬಿಜೆಪಿ ಸರ್ಕಾರ ರಚಿಸಲಿದೆ ಎನ್ನಲಾಗಿದೆ.












Click it and Unblock the Notifications