ಎಂಥಾ ನಿರ್ಲಕ್ಷ್ಯ: ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗಿಲ್ಲ ಕೋವಿಡ್-19 ಪರೀಕ್ಷೆ.!
ಕಲಬುರಗಿ, ಮೇ 28: ಕರ್ನಾಟಕದಲ್ಲೀಗ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2493 ಕ್ಕೆ ಏರಿಕೆಯಾಗಿದೆ. ಕೋವಿಡ್-19 ನಿಂದ ಈವರೆಗೂ 809 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 47 ಮಂದಿ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ವಲಸೆ ಕಾರ್ಮಿಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ.
ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು, ಸದ್ಯ ಕ್ವಾರಂಟೈನ್ ನಲ್ಲಿ ಇರುವವರನ್ನು ಕೋವಿಡ್-19 ಟೆಸ್ಟ್ ಗೆ ಒಳಪಡಿಸಲು ರಾಜ್ಯ ಸರ್ಕಾರ ನಿಧಾನಗತಿ ಅನುಸರಿಸುತ್ತಿದೆ. ಟೆಸ್ಟಿಂಗ್ ಕಿಟ್ ಗಳ ಕೊರತೆಯಿಂದಾಗಿ 17 ದಿನಗಳು ಕಳೆದರೂ, ವಲಸೆ ಕಾರ್ಮಿಕರನ್ನು ಕೋವಿಡ್-19 ಪರೀಕ್ಷೆಗೆ ರಾಜ್ಯ ಸರ್ಕಾರ ಒಳಪಡಿಸಿಲ್ಲ.!
ಅತ್ತ ಕ್ವಾರಂಟೈನ್ ಕೇಂದ್ರದಲ್ಲಿ ಮೂಲಸೌಕರ್ಯದ ಕೊರತೆ ಇರುವುದರಿಂದ ವಲಸೆ ಕಾರ್ಮಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಕ್ವಾರಂಟೈನ್ ನಲ್ಲಿರುವವರ ಗೋಳನ್ನ ಕೇಳುವವರೇ ಇಲ್ಲದಾಗಿದೆ.

ಕಲಬುರಗಿಯಲ್ಲಿ ಕ್ವಾರಂಟೈನ್ ಕೇಂದ್ರ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯ ಸದ್ಯ ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಾಡಾಗಿದ್ದು, ಹೈದರಾಬಾದ್, ತೆಲಂಗಾಣ ಮತ್ತು ಮುಂಬೈನಿಂದ ಬಂದ ವಲಸೆ ಕಾರ್ಮಿಕರನ್ನು ಇಲ್ಲಿ ಇರಿಸಲಾಗಿದೆ.

ಇನ್ನೂ ಟೆಸ್ಟ್ ಮಾಡಿಲ್ಲ.!
14 ರಿಂದ 17 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದವರಿಗೆ ಜಿಲ್ಲಾಡಳಿತ ಈವರೆಗೂ ಕೋವಿಡ್-19 ಟೆಸ್ಟ್ ಮಾಡಿಲ್ಲ. ''ನಮಗೆ ಬೇಗ ಟೆಸ್ಟ್ ಮಾಡಿ, ಇಲ್ಲಿಂದ ಹೊರಹೋಗಲು ಅನುಕೂಲ ಮಾಡಿಕೊಡಿ'' ಎಂದು ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರು ಸರ್ಕಾರಕ್ಕೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ.

ಆಕ್ರೋಶ ಹೊರಹಾಕಿದ ವಲಸೆ ಕಾರ್ಮಿಕರು
''ಕ್ವಾರಂಟೈನ್ ಅವಧಿ ಮುಗಿದರೂ ನಮಗೆ ಟೆಸ್ಟ್ ಮಾಡಿಲ್ಲ. ಜಿಲ್ಲಾಡಳಿತದ ಸಿಬ್ಬಂದಿಯನ್ನು ಕೇಳಿದರೆ ಕಿಟ್ ಇಲ್ಲ.. ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತಾರೆ. ಟೆಸ್ಟ್ ಮಾಡಿದ ಮೇಲೆ ಕ್ವಾರಂಟೈನ್ ಸೆಂಟರ್ ನಿಂದ ಹೊರ ಬಿಡುತ್ತೇವೆ ಅಂತಾರೆ. ಕ್ವಾರಂಟೈನ್ ಸೆಂಟರ್ ನಲ್ಲಿ ಸರಿಯಾದ ನೀರಿನ-ಊಟದ ವ್ಯವಸ್ಥೆ ಇಲ್ಲ. ಏನಾದರೂ ಕೇಳಿದರೆ, ''ಎಲ್ಲಿಂದ ಬಂದ್ರೋ, ಅಲ್ಲಿಗೆ ವಾಪಸ್ ಹೋಗಿ'' ಎನ್ನುತ್ತಾರೆ'' ಅಂತ ಜಿಲ್ಲಾಡಳಿತದ ವಿರುದ್ಧ ಕ್ವಾರಂಟೈನ್ ನಲ್ಲಿರುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಲ್ಲಿ ಹುಳ.!
''ನೀರಿಗಾಗಿ ಅಂತ ಟ್ಯಾಂಕರ್ ತಂದು ನಿಲ್ಲಿಸಿದ್ದಾರೆ. ಅದರಲ್ಲಿ ಹುಳ ಇದೆ. ಹೀಗಿರುವಾಗ ನಾವು ನೀರು ಕುಡಿಯುವುದಾದರೂ ಹೇಗೆ.? ಟೆಸ್ಟಿಂಗ್ ಕಿಟ್ ಯಾವಾಗ ಬರುತ್ತೆ.? ನಮಗೆ ಇಲ್ಲಿಂದ ಬಿಡುಗಡೆ ಯಾವಾಗ.?'' ಎಂಬುದು ಕ್ವಾರಂಟೈನ್ ನಲ್ಲಿರುವವರ ಪ್ರಶ್ನೆಯಾಗಿದೆ.

ಅಧಿಕಾರಿಗಳ ಅಸಹಾಯಕತೆ
''ಟೆಸ್ಟಿಂಗ್ ಕಿಟ್ ಗಳ ವ್ಯವಸ್ಥೆ ಇಲ್ಲ. ನಾವಾದರೂ ಏನು ಮಾಡುವುದು.? ಟೆಸ್ಟಿಂಗ್ ಕಿಟ್ ಗಳಿಲ್ಲದೆ ಕ್ವಾರಂಟೈನ್ ನಲ್ಲಿರುವ ನಿಮ್ಮನ್ನ ಪರೀಕ್ಷೆ ಮಾಡುವುದು ಹೇಗೆ?'' ಎಂದು ಟೆಸ್ಟಿಂಗ್ ಕಿಟ್ ಗಳ ಕೊರತೆಯ ಬಗ್ಗೆ ಅಲ್ಲಿರುವ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇಷ್ಟೊಂದು ನಿರ್ಲಕ್ಷ್ಯವೇಕೆ.?
ಕೊರೊನಾ ವೈರಸ್ ಅಬ್ಬರಿಸುತ್ತಿರುವ ಸಮಯದಲ್ಲಿ ಟೆಸ್ಟಿಂಗ್ ಕಿಟ್ ಗಳ ಕೊರತೆಯಾಗಿದೆ ಅಂದ್ರೆ ಹೇಗೆ.? ರಾಜ್ಯ ಸರ್ಕಾರಕ್ಕೆ ಇಷ್ಟೊಂದು ನಿರ್ಲಕ್ಷ್ಯವೇಕೆ.? ಈ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಗಮನ ಹರಿಸಿಲ್ಲ ಏಕೆ.? ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಟೆಸ್ಟಿಂಗ್ ಕಿಟ್ ಗಳ ಪೂರೈಕೆ ಮಾಡುತ್ತಾ.? ಈ ಪ್ರಶ್ನೆಗಳಿಗೆ ಆರೋಗ್ಯ ಸಚಿವರೇ ಉತ್ತರ ಕೊಡಬೇಕು.












Click it and Unblock the Notifications