ದೇವ್ರೇ.. ನಮ್ಮತ್ತೆ ಬೇಗ ಸಾಯಬೇಕು, ₹50 ನೋಟಲ್ಲಿ ಬರೆದು ಹರಕೆ ಕಟ್ಟಿಕೊಂಡ ಸೊಸೆ- ಭಾರೀ ವೈರಲ್
ಕಲಬುರಗಿ, ಮಾರ್ಚ್, 07: ಸಾಮಾನ್ಯವಾಗಿ ಪ್ರಸಿದ್ಧ ದೇಗುಲಗಳಲ್ಲಿ ಆಗಾಗ ಹುಂಡಿ ಎಣಿಕೆ ಕಾರ್ಯ ನಡೆಯುತ್ತಲೇ ಇರುತ್ತದೆ. ಇನ್ನು ಹುಂಡಿ ಎಣಿಕೆ ವೇಳೆ ಹಣದ ಜೊತೆಗೆ ವಿಚಿತ್ರ ಹರಕೆಯ ಪತ್ರಗಳನ್ನು ಭಕ್ತರು ಹಾಕಿರುವುದು ಕಂಡುಬರುತ್ತದೆ. ಇನ್ನು ಇಂತಹ ಪತ್ರಗಳು ಸಾಮಾಜಿಕ ಜಾಲತಣಗಳಲ್ಲಿ ಭಾರೀ ಸದ್ದು ಮಾಡುತ್ತವೆ. ಹಾಗೆಯೇ ಇಂತಹದ್ದೆ ಘಟನೆಯೊಂದು ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರ ದೇವಲಗಾಣಗಾಪುರದಲ್ಲಿ ನಡೆದಿದೆ.
ಪ್ರಸಿದ್ಧ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ನಡೆಯುವಾಗ ಅನೇಕ ರೀತಿಯ ಚೀಟಿಗಳು ಸಿಗುತ್ತವೆ. ಪ್ರೀತಿ-ಪ್ರೇಮ, ಮದುವೆ, ಪತಿ-ಪತ್ನಿ, ಅತ್ತೆ-ಸೊಸೆ ನಡುವಿನ ಜಗಳಗಳು, ಪಕ್ಕದ ಮನೆಯವರ ವಿಚಾರ ಬಗ್ಗೆ ಹೀಗೆ ದೇವರಿಗೆ ಹರಕೆ ಕಟ್ಟಿ ಚೀಟಿ ಬರೆದು ಹಾಕುವುದನ್ನು ನೋಡಿರುತ್ತೇವೆ. ಇದೀಗ ಕಲಬುರಗಿಯಲ್ಲಿಯೂ ಇಂತಹದ್ದೊಂದು ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರ ದೇವಲಗಾಣಗಾಪುರ ದತ್ತನಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಇನ್ನು ಬೇಡಿದರೆ ವರ ಕೊಡುವ ಶ್ರೀಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ವಿಶೇಷ ಬರಹವುಳ್ಳ 50 ರೂಪಾಯಿ ಮುಖಬೆಲೆಯ ನೋಟ್ ಒಂದು ಸಿಕ್ಕಿದೆ. ಈ ನೋಟಿನ ಬರಹ ಕಂಡ ಹುಂಡಿ ಎಣಿಕಾರ್ಯ ಮಾಡುತ್ತಿರುವ ಸಿಬ್ಬಂದಿಯೇ ಆಶ್ಚರ್ಯಗೊಂಡಿದ್ದಾರೆ.
ಸೊಸೆಯೊಬ್ಬಳು ತನ್ನ ಅತ್ತೆಯ ಮೇಲಿನ ಸಿಟ್ಟನ್ನು ಈ ನೋಟಿನಲ್ಲಿ ಬರೆಯುವ ಮುಖಾಂತರ ತೀರಿಸಿಕೊಂಡಿರುವ ಘಟನೆ ನಡೆದಿದೆ. "ಅತ್ತೆ ಬೇಗ ಸಾಯಬೇಕು" ಎಂದು 50 ರೂಪಾಯಿ ಮುಖ ಬೆಲೆಯ ನೋಟಿನ ಮೇಲೆ ಬರೆಯುವ ಮೂಲಕ ದೇವಸ್ಥಾನದ ಹುಂಡಿಗೆ ಹಾಕಿ ವಿಚಿತ್ರ ಹರಕೆ ಹೊತ್ತಿದ್ದಾಳೆ. ಇನ್ನು ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications