10 ಸಾವಿರ ಸರಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಕಲಬುರ್ಗಿ, ಸೆ 28: ಅದಮ್ಯ ಚೇತನ ಸಂಸ್ಥೆಯ ಜೊತೆಗೂಡಿ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಕಲಬುರ್ಗಿ ಜಿಲ್ಲೆಯ ಸರಕಾರಿ ಶಾಲೆಯ 10 ಸಾವಿರ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ "ಅನ್ನಪೂರ್ಣ ಬೆಳಗಿನ ಉಪಹಾರ" ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಯೋಜನೆಯ ಜೊತೆಗೂಡವ ಬಗ್ಗೆ ಚಿಂತೆ ನಡೆಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕಲಬುರ್ಗಿ ಜಿಲ್ಲೆಯ ಸರಕಾರಿ ಶಾಲೆಯ 10 ಸಾವಿರ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಅನ್ನಪೂರ್ಣ ಬೆಳಗಿನ ಉಪಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾನು ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಎರಡು ತಿಂಗಳು.
ಪೌಷ್ಟಿಕಾಂಶಯುಕ್ತ ಹಾಲು ವಿತರಣೆ ರಾಜ್ಯದೆಲ್ಲೆಡೆ ವಿಸ್ತರಣೆ: ಸುರೇಶ್ ಕುಮಾರ್
ಎರಡನೇ ತಿಂಗಳ ಮೊದಲನೇ ದಿನ ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಅವಕಾಶ ಒದಗಿರುವುದು ಬಹಳ ಸಂತಸದ ಸಂಗತಿ. ಮಕ್ಕಳಿಗೆ ಬೆಳಗಿನ ಪೌಷ್ಠಿಕ ಆಹಾರವನ್ನು ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾರಂಭವಾಗಿರುವ ಶ್ರೀ ಸತ್ಯ ಸಾಯಿ ಟ್ರಸ್ಟಿನ ಈ ಕಾರ್ಯಕ್ರಮ ಬಹಳ ಅಗತ್ಯವಾದದ್ದು. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಅವರ ಕರೆಯೋಲೆಯ ಮೇಲೆ ಇಂತಹ ಒಳ್ಳೆಯ ಕಾರ್ಯಕ್ರದಲ್ಲಿ ಭಾಗಿಯಾಗಿದ್ಧೇನೆ.
10 ಸಾವಿರ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ರಮ
10 ಸಾವಿರ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ರಮಕ್ಕೆ ತೇಜಸ್ವಿನಿ ಅನಂತಕುಮಾರ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಅವರು ಕಾರ್ಯಕ್ರಮಕ್ಕೆ ಬರುವುದು ತಡವಾದರೂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಂದು ಹೇಳುವ ಮೂಲಕ ಈ ಕಾರ್ಯಕ್ರಮದ ಬಗ್ಗೆ ಅವರಿಗೆ ಇರುವ ಅಂತಃಕರಣ ಹಾಗೂ ಅವರ ಸೌಜನ್ಯಕ್ಕೆ ಮೆಚ್ಚುವಂತಹದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಬುರ್ಗಿ ಸಂಸದರಾದ ಉಮೇಶ್ ಜಾಧವ್, ಮಧುಸೂಧನ್ ಸಾಯಿ ಸ್ವಾಮೀಜಿ, ಶಾಸಕರಾದ ಬಸವರಾಜ್ ಮತ್ತಿಮೂಡ್, ಸುಭಾಷ್ ಬಿರಾದರ್, ವಿಧಾನಪರಿಷತ್ ಸದಸ್ಯರಾದ ಬಿ ಜಿ ಪಾಟೀಲ್, ಗುಲ್ಬರ್ಗ ಅದಮ್ಯ ಚೇತನದ ಟ್ರಸ್ಟಿಗಳಾದ ದೇವ್ ಸುಧಾಕರ್ ಪಾಟೀಲ್, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟಿನ ಕುಲಪತಿಗಳಾದ ಬಿ ಎಂ ನರಸಿಂಹಮೂರ್ತಿ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಖಾಲಿ ಹೊಟ್ಟೆಯಲ್ಲಿ ಹೇಗೆ ಪಾಠ ಕಲಿಯುವುದಕ್ಕೆ ಸಾಧ್ಯ
ಬೆಳಗಿನ ಉಪಹಾರ ಬಹಳ ಪ್ರಮುಖವಾದ ಆಹಾರ. ಆದರೆ ಬಹಳ ಜನರಿಗೆ ಅದು ಸಿಗುವುದಿಲ್ಲಾ. ಮಕ್ಕಳು ರಾತ್ರಿ ಸರಿಯಾಗಿ ತಿಂದಿರುತ್ತಾರೋ ಇಲ್ಲವೋ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೇಗೆ ಪಾಠ ಕಲಿಯುವುದಕ್ಕೆ ಸಾಧ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎನ್ನುವ ಮಹತ್ ಉದ್ದೇಶ ಹೊಂದಿರುವ ಕಾರ್ಯಕ್ರಮವನ್ನು ನಾವು ಇಂದಿಲ್ಲಿ ಪ್ರಾರಂಭಿಸುತ್ತಿದ್ದೇವೆ.
ಕೆಂಗೇರಿಯಲ್ಲಿ ಬೆರಳೆಣಿಕೆಷ್ಟು ಜನರಿಂದ ಪ್ರಾರಂಭವಾಗಿರುವ ಈ ಕಾರ್ಯಕ್ರಮ ಇಂದು 15 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 2 ಲಕ್ಷ ಮಕ್ಕಳನ್ನು ತಲುಪಿದೆ. ಸಮಾಜಕ್ಕೆ ಏನನ್ನಾದರೂ ನೀಡಬೇಕು ಎನ್ನುವ ಮಹತ್ ಉದ್ದೇಶ ಹೊಂದಿರುವ ಸಮಾನ ಮನಸ್ಕರು ಸೇರಿಕೊಂಡು ಮಾಡುತ್ತಿರುವ ಮಹತ್ ಕಾರ್ಯ ಇದಾಗಿದೆ.
ಇಂತಹ ಒಳ್ಳೆಯ ಉದ್ದೇಶವನ್ನು ಹೊಂದಿರುವ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟಿನ ಬೆಳಗಿನ ಉಪಹಾರ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಸರಕಾರ ಮಾಡಬೇಕಾ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ ಎಂದು ಶ್ಲಾಘಿಸಿದ ಅವರು, ಇದು ಕಲಬುರ್ಗಿ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು ಮುಂದಿನ ದಿನಗಳಲಿ ಎಲ್ಲಾ ಪ್ರದೇಶಗಳಿಗೂ ವಿಸ್ತರಿಸಲಿದೆ ಎಂದು ಅನಂತಕುಮಾರ್ ಆಶಯ ವ್ಯಕ್ತಪಡಿಸಿದರು.
ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು
ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳೂ ಈ ಯೋಜನೆಯ ಜೊತೆ ಹೇಗೆ ಜೊತೆಗೂಡಿವೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಈ ಕಾರ್ಯಕ್ರಮದ ಜೊತೆಗೆ ನಮ್ಮ ರಾಜ್ಯ ಸರಕಾರ ಯಾವ ರೀತಿಯಲ್ಲಿ ಪಾಲುದಾರರಾಗಬಹುದು ಎನ್ನುವುದರ ಬಗ್ಗೆ ಚಿಂತನೆ ನಡೆಸಲಾಗುವುದು ಹಾಗೂ ಈ ಕಾರ್ಯಕ್ರಮಕ್ಕೆ ರಾಜ್ಯ ಸರಕಾರದ ವತಿಯಿಂದ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಅನಂತಕುಮಾರ್ ಹೇಳಿದರು.
ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್
ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ತಮ್ಮ ಸಂದೇಶದಲ್ಲಿ ಈ ಕಾರ್ಯಕ್ರಮದ ಜೊತೆಗೂಡಿ ಅದಮ್ಯ ಚೇತನ ಸಂಸ್ಥೇಗೆ ಬಹಳ ಸಂತಸವಾಗಿದೆ. ಕಳೆದ 15 ವರ್ಷಗಳಿಂದ ನಾವು ಸರಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಾ ಬಂದಿದ್ದೇವೆ.
2007 ರಲ್ಲಿ ಕಲಬುರ್ಗಿ ಜಿಲ್ಲೆಯ 10 ಸಾವಿರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೆವು. ಇಂದು ಈ ಜಿಲ್ಲೆಯಲ್ಲಿ ಮತ್ತೆ 10 ಸಾವಿರ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಹೊಸ ರೀತಿಯ ಕಾರ್ಯಕ್ರಮದ ಜೊತೆ ಕೈಜೋಡಿಸಿದ್ದೇವೆ. ಬೆಳೆಯುತ್ತಿರುವ ಮಗುವಿಗೆ ಉತ್ತಮ ಪೌಷ್ಠಿಕ ಆಹಾರ ಬಹಳ ಅಗತ್ಯವಾದದೂ ಎಂಬುದನ್ನು ಮನಗೊಂಡಿದ್ದೇವೆ. ಇಂದು ಅದಮ್ಯ ಚೇತನ ದಿವಂಗತ ಅನಂತಕುಮಾರ್ ಹಾಗೂ ಅದಮ್ಯ ಚೇತನದ ಎಲ್ಲರ ಸಹಯೋಗದಿಂದಾಗಿ ಪ್ರತಿನಿತ್ಯ 1.5 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸುತ್ತಿದ್ದೇವೆ ಎಂದರು.
ರಾಜ್ಯದ ಇತರ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ
ಮುಂದಿನ ದಿನಗಳಲ್ಲಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಈ ಬೆಳಗಿನ ಉಪಹಾರವನ್ನು ರಾಜ್ಯದ ಇತರ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ ಹೊಂದಿದೆ. ಇದಕ್ಕೆ ಅದಮ್ಯ ಚೇತನ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಇದೇ ಸಂಧರ್ಭದಲ್ಲಿ ತಿಳಿಸಿದರು. ದಿವಂಗತ ಅನಂತಕುಮಾರ್ ಅವರ 60 ನೇ ಜನ್ಮ ದಿನಾಚರಣೆಯಂದು ಪ್ರಾರಂಭಿಸುವ ಮನವಿಗೆ ಮಧುಸೂಧನ್ ಸಾಯಿ ಸ್ವಾಮೀಜಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅನಂತಕುಮಾರ್ ಅವರ ಮಕ್ಕಳಿಗೆ ಅನ್ನ ಅಕ್ಷರ ಆರೋಗ್ಯ ಎನ್ನುವ ಧ್ಯೇಯವಾಕ್ಯದ ಅಡಿಯಲ್ಲಿನ ಸೇವೆ ಇದಾಗಿದೆ ಎಂದು ಹೇಳಿದರು.