85ನೇ ಕನ್ನಡ ಸಾಹಿತ್ಯ ಸಮ್ಮೇಳನ; ಆಮಂತ್ರಣ ಪತ್ರ ಬಿಡುಗಡೆ
ಕಲಬುರಗಿ, ಜನವರಿ 28 : 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರಗಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನಾಡೋಜ ಡಾ. ಗೀತಾ ನಾಗಭೂಷಣ್ ಬಿಡುಗಡೆ ಮಾಡಿದರು.
Recommended Video
ಕಲಬುರಗಿಯ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಅನಾವರಣಗೊಂಡಿತು.
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನಾಡೋಜ ಡಾ. ಗೀತಾ ನಾಗಭೂಷಣ್ ಅವರು ಆಹ್ವಾನ ಪತ್ರಿಕೆ ಲೋಕಾರ್ಪಣೆಗೊಳಿಸಿದರು. ಫೆಬ್ರವರಿ 5, 6 ಮತ್ತು 7ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಕಲಬುರಗಿ ಸಮ್ಮೇಳನವನ್ನು ಒಂದು ಮಾದರಿ ಮತ್ತು ಐತಿಹಾಸಿಕ ಸಮ್ಮೇಳವನ್ನಾಗಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹಿರಿಯ ಸಾಹಿತಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ.

ಪೂರ್ವಸಿದ್ಧತೆ ಪೂರ್ಣಗೊಳಿಸಿ
"ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಪೂರ್ವಸಿದ್ಧತೆ ಕಾರ್ಯಗಳನ್ನು ಫೆಬ್ರವರಿ 3 ರೊಳಗೆ ಮುಗಿಸಿಕೊಂಡು ಕಾರ್ಯಾನುಷ್ಟಾನಕ್ಕೆ ಲಭ್ಯವಿರುವ ಬಗ್ಗೆ ಖುದ್ದಾಗಿ ಖಚಿತಪಡಿಸಿಕೊಳ್ಳಬೇಕು" ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಸಂಚಾಲಕರಾಗಿರುವ ಜಿಲ್ಲಾಧಿಕಾರಿ ಶರತ್ ಬಿ. ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.

ಒಂದು ವಾರ ಬಾಕಿ ಇದೆ
"ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು ಒಂದು ವಾರ ಬಾಕಿಯಿದ್ದು, ಎಲ್ಲಾ ಸಮಿತಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸಮ್ಮೇಳನದ ಹಿಂದಿನ ದಿನದ ವರೆಗೆ ಕಾಯದೇ 2 ದಿನಗಳ ಮುಂಚೆಯೆ ಎಲ್ಲಾ ಕೆಲಸಗಳನ್ನು ಮುಗಿಸಬೇಕು" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕನ್ನಡ ಧ್ವಜ ರಾರಾಜಿಸಬೇಕು
"ಕಲಬುರಗಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಳ್ಳಬೇಕು. ರಸ್ತೆ ಬದಿಯ ಗೋಡೆಗಳ ಮತ್ತು ಚಿತ್ರ, ಬರಹಗಳ ಕಾರ್ಯ ಬೇಗ ಮುಗಿಸುವುದಲ್ಲದೆ ಸ್ವಾಗತ ಕಮಾನು ನಿರ್ಮಿಸಿ ಎಲ್ಲೆಡೆ ಕನ್ನಡ ಧ್ವಜಗಳು ರಾರಾಜಿಸಬೇಕು. ಧೂಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು" ಎಂದು ಅಲಂಕಾರ ಸಮಿತಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಹಾಯವಾಣಿ ತೆರೆಯಲು ಸೂಚನೆ
ಮೂರು ದಿನಗಳ ಸಮ್ಮೇಳನಕ್ಕೆ ಲಕ್ಷಾಂತರ ಜನ ಆಗಮಿಸುವುದರಿಂದ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಕುಡಿಯುವ ನೀರು ಕೊರತೆಯಾಗದಂತೆ ಗಮನ ಹರಿಸಲು ಸೂಚಿಸಲಾಯಿತು. ವಿವಿ ಅವರಣದಲ್ಲಿ ಬಳಕೆಗೆ ಬೋರವೆಲ್ ಕೊರೆಯಿಸಬೇಕು. ಎಲ್ಲಿಯೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆಯಾಗದಂತೆ ಎಚ್ಚರವಹಿಸಬೇಕು. ಜನರಿಗೆ ಮಾಹಿತಿ ನೀಡಲು ಸಹಾಯವಾಣಿ ತೆರೆಯುವಂತೆ ಸೂಚಿಸಲಾಗಿದೆ.












Click it and Unblock the Notifications