ಕಲಬುರಗಿ; 4819 ಮನೆಗೆ ಹಾನಿ, 48 ಕಾಳಜಿ ಕೇಂದ್ರ ಆರಂಭ
ಕಲಬುರಗಿ, ಅಕ್ಟೋಬರ್ 15 : ಕಲಬುರಗಿ ಜಿಲ್ಲೆಯಲ್ಲಿ ಮಳೆ, ಪ್ರವಾಹದ ಕಾರಣದಿಂದಾಗಿ ಬುಧವಾರ ರಾತ್ರಿಯ ತನಕ 4819 ಮನೆಗಳಿಗೆ ಹಾನಿಯಾಗಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ 48 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಈ ಕುರಿತು ಮಾಹಿತಿ ನೀಡಿದ್ದಾರೆ. "ವಾಯುಭಾರ ಕುಸಿತದಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನಿರಾಶ್ರಿತಗೊಂಡ ಜನರಿಗೆ ಕಾಳಜಿ ಕೇಂದ್ರ ತೆರೆಯಲಾಗಿದೆ" ಎಂದು ಹೇಳಿದ್ದಾರೆ.
ಕಲಬುರಗಿ, ಕಮಲಾಪೂರ ಹಾಗೂ ಅಫಜಲಪುರ ತಾಲೂಕಿನಲ್ಲಿ 3, ಆಳಂದದಲ್ಲಿ 4, ಜೇವರ್ಗಿಯಲ್ಲಿ 1, ಚಿತ್ತಾಪುರ ಮತ್ತು ಸೇಡಂ ತಾಲೂಕಿನಲ್ಲಿ ತಲಾ 5, ಶಹಾಬಾದದಲ್ಲಿ 4, ಕಾಳಗಿಯಲ್ಲಿ 8 ಹಾಗೂ ಚಿಂಚೋಳಿ ತಾಲೂಕಿನಲ್ಲಿ 12 ಕೇಂದ್ರಗಳಲ್ಲಿ 7603 ಜನರಿಗೆ ಆಶ್ರಯ ನೀಡಲಾಗಿದೆ.

ಬುಧವಾರದ ತನಕ ಅಂದಾಜಿನ ಪ್ರಕಾರ ಜಿಲ್ಲೆಯ 4819 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಬಟ್ಟೆ, ಪಾತ್ರೆಗಳು ಹಾನಿಗೊಳಗಾಗಿವೆ. 1058 ಮನೆಗಳಿಗೆ ಭೀಕರವಾಗಿ ಮಳೆ ಹಾನಿ ಮಾಡಿದೆ. ಇದಲ್ಲದೆ 518 ಜಾನುವಾರಗಳು ಪ್ರಾಣ ಕಳೆದುಕೊಂಡಿವೆ.
77 ಜನರ ರಕ್ಷಣೆ : ಪ್ರವಾಹ ಮತ್ತು ನಡುಗಡ್ಡೆ ಗ್ರಾಮಗಳಲ್ಲಿ ಸಿಲುಕಿದ್ದ 77 ಜನರನ್ನು ಎನ್. ಡಿ. ಆರ್. ಎಫ್ ಮತ್ತು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಯ ತಂಡಗಳು ರಕ್ಷಣೆ ಮಾಡಿವೆ.
ಚಿತ್ತಾಪೂರ ತಾಲೂಕಿನ ಮಾಲಗತ್ತಿಯಲ್ಲಿ 3, ಶಹಾಬಾದ ಪಟ್ಟಣದ ಜೆ. ಪಿ. ಕಾಲೋನಿ ಪ್ರದೇಶದ 5 ಮತ್ತು ಹಳೆ ಶಹಾಬಾದ ಪ್ರದೇಶದ 6 ಹಾಗೂ ಭಂಕೂರ ಗ್ರಾಮದಲ್ಲಿ ಓರ್ವರನ್ನು ರಕ್ಷಿಸಲಾಗಿದೆ.
ಅಕ್ಟೋಬರ್ 16ರ ತನಕ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದ್ದು ಜಿಲ್ಲಾಡಳಿತ ಜನರಿಗೆ ಎಚ್ಚರಿಕೆ ನೀಡಿದೆ.












Click it and Unblock the Notifications