ಕಲಬುರಗಿಯಲ್ಲಿ ಮಳೆ; ಬೆಣ್ಣೆತೊರಾ ಜಲಾಶಯದಿಂದ 3000 ಕ್ಯೂಸೆಕ್ ನೀರು ಬಿಡುಗಡೆ
ಕಲಬುರಗಿ, ಜುಲೈ 25: ಕರ್ನಾಟಕ ಮತ್ತು ಮಹಾರಾಷ್ಟ್ರ ಭೀಮಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಚಿತ್ತಾಪುರ ತಾಲೂಕಿನ ಬೆಣ್ಣೆತೊರಾ ಅಣೆಕಟ್ಟಿಗೆ ನೀರಿನ ಒಳಹರಿವು ಹೆಚ್ಚಿದೆ. ಹೀಗಾಗಿ ಜುಲೈ 24, ಶುಕ್ರವಾರ ಅಣೆಕಟ್ಟಿನಿಂದ 3000 ಕ್ಯೂಸೆಕ್ಸ್ ನೀರನ್ನು ಕಾಗಿಣಾ ನದಿಗೆ ಹರಿಸಲಾಗಿದೆ.
ಅಣೆಕಟ್ಟಿಗೆ ಸಂಜೆ 7 ಗಂಟೆಗೆ ಒಳಹರಿವಿನ ಪ್ರಮಾಣ 25000 ಕ್ಯೂಸೆಕ್ಸ್ ಇದ್ದು, ಮುಂಜಾಗ್ರತೆಯಾಗಿ 3000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗಿದೆ. ನದಿ ಡಂಡೆಯಲ್ಲಿರುವ ಸಾರ್ವಜನಿಕರು ನದಿಯ ದಡಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರದೇಶದ ರೈತರಲ್ಲಿ ಕೆ.ಎನ್.ಎನ್.ಎಲ್. ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತ ಜಗನ್ನಾಥ ಹಲಿಂಗೆ ಅವರು ಮನವಿ ಮಾಡಿಕೊಂಡಿದ್ದಾರೆ.
ಅಣೆಕಟ್ಟಿನ ಸಾಮರ್ಥ್ಯ 5.29 ಟಿಎಂಸಿ ಇದ್ದು, ಶುಕ್ರವಾರ ಸಂಜೆ 7 ಗಂಟೆ ಹೊತ್ತಿಗೆ 3.72 ಟಿಎಂಸಿ ನೀರು ಸಂಗ್ರಹಣಗೊಂಡಿದೆ. ಮುಂದಿನ ದಿನದಲ್ಲಿ ಭೀಮಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಆಗ ನೀರಿನ ಒಳಹರಿವು ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ 3000 ಕ್ಯೂಸೆಕ್ಸ್ ನೀರು ಹರಿಸಲಾಗಿದೆ ಎಂದು ತಿಳಿಸಿದ್ದಾರೆ.

ಗಂಡೋರಿ ನಾಲಾ ಜಲಾಶಯದಿಂದ 1000 ಕ್ಯೂಸೆಕ್ಸ್ ನೀರು: ಕಮಲಾಪುರ ತಾಲೂಕಿನ ಮಹಾಗಾಂವನ ಗಂಡೋರಿ ನಾಲಾ ಜಲಾಶಯಕ್ಕೂ ನೀರಿನ ಒಳಹರಿವು ಹೆಚ್ಚಿದ ಪರಿಣಾಮ ಶುಕ್ರವಾರ ಜಲಾಶಯದಿಂದ 1000 ಕ್ಯೂಸೆಕ್ಸ್ ನೀರನ್ನು ಗಂಡೋರಿ ನಾಲಾ ನದಿ ಮುಖಾಂತರ ಬೆಣ್ಣೆತೊರಾ ನದಿಗೆ ಹರಿಸಲಾಗಿದೆ.
ಜಲಾಶಯದ ಸಾಮರ್ಥ್ಯ 1.8 ಟಿಎಂಸಿ ಇದ್ದು, ಶುಕ್ರವಾರ ಸಂಜೆ 1.65 ಟಿಎಂಸಿ ನೀರು ಸಂಗ್ರಹಣಗೊಂಡಿದೆ.












Click it and Unblock the Notifications