Intercaste Relationship: ತಮ್ಮ ಮನೆಯ ಹೆಣ್ಣುಮಗಳನ್ನು ಪ್ರೀತಿಸಿದ್ದಕ್ಕೆ 20 ವರ್ಷದ ಯುವಕನನ್ನು ಹೊಡೆದು ಕೊಂದ ಕ್ರೂರಿಗಳು!
ಕಲಬುರಗಿ, ಮಾರ್ಚ್ 06: ಕಲಬುರಗಿ ನಗರ ಪ್ರದೇಶದಲ್ಲಿ 16 ವರ್ಷದ ಬಾಲಕಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ 20 ವರ್ಷದ ಯುವಕನನ್ನು ಜಾತಿ ಕಾರಣಕ್ಕಾಗಿ ಅಮಾನುಷವಾಗಿ ಹೊಡೆದು ಕೊಲ್ಲಲಾಗಿದೆ. ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಬಾಲಕಿಯ ಸಂಬಂಧಿಕರು ವ್ಯಕ್ತಿಯನ್ನು ತನ್ನ ಮನೆಗೆ ಕರೆಸಿಕೊಂಡು ದೊಣ್ಣೆ ಮತ್ತು ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ ಮತ್ತು ಅಪ್ರಾಪ್ತೆ ಬೇರೆ ಬೇರೆ ಜಾತಿಗೆ ಸೇರಿದವರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲೆಯಾದ ಯುವಕನನ್ನು ಕಲಬುರಗಿ ಮೂಲದ ಅಭಿಷೇಕ್ ಎಂದು ಪೊಲೀಸರು ಗುರುತಿಸಿದ್ದಾರೆ. ಅಭಿಷೇಕ್ ಪಟ್ಟಣದ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಲಬುರಗಿ ವಿಶ್ವವಿದ್ಯಾನಿಲಯದ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎನ್ಎನ್ ಸತೀಶ್ ಘಟನೆಯನ್ನು ಖಚಿತಪಡಿಸಿದ್ದಾರೆ.
ಕೊಲೆ ನಡೆದಿದ್ದು ಏಕೆ?
"ಮರಾಠ ಕ್ಷತ್ರಿಯ ಸಮುದಾಯಕ್ಕೆ ಸೇರಿದ ಅಭಿಷೇಕ್ ಲಂಬಾಣಿ ಸಮುದಾಯಕ್ಕೆ (ಪರಿಶಿಷ್ಟ ಜಾತಿ) ಸೇರಿದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು. ಈ ವಿಷಯ ಹುಡುಗಿಯ ಮನೆಯವರ ಗಮನಕ್ಕೆ ಬಂದಾಗ, ಅವರು ಅದನ್ನು ವಿರೋಧಿಸಿದರು. ಇಬ್ಬರು ಭೇಟಿಯಾಗದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಇಬ್ಬರೂ ಮೊಬೈಲ್ ಫೋನ್ನಲ್ಲಿ ಪರಸ್ಪರ ಸಂಪರ್ಕದಲ್ಲಿದ್ದರು" ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಹುಡುಗಿಯ ಸಂಬಂಧಿಕರು "ಅಭಿಷೇಕ್ಗೆ ಪಾಠ ಕಲಿಸಲು" ಪ್ಲ್ಯಾನ್ ಮಾಡಿದ್ದರು. ಅಭಿಷೇಕ್ಗೆ ಕರೆ ಮಾಡುವಂತೆ ಬಾಲಕಿಯ ಚಿಕ್ಕಪ್ಪ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. "ಅಭಿಷೇಕ್ ಹುಡುಗಿಯ ಮನೆಗೆ ಬಂದಾಗ, ಅವನ ಚಿಕ್ಕಪ್ಪ ಮತ್ತು ಇತರ ಕುಟುಂಬ ಸದಸ್ಯರು ಕಟ್ಟಿಗೆ ಮತ್ತು ಕಬ್ಬಿಣದ ರಾಡುಳನ್ನು ಬಳಸಿ ಅವನ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಯುವಕನನ್ನು ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಗೆ ರವಾನಿಸಿದ್ದಾರೆ. ತಲೆಗೆ ತೀವ್ರವಾದ ಗಾಯಗಳಾಗಿದ್ದ ಕಾರಣ ಯುವಕ ಮೃತಪಟ್ಟಿದ್ದಾರೆ. ಮೃತರ ಮೇಲೆ ಕಬ್ಬಿಣದ ರಾಡ್ನಿಂದ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಇದರಿಂದ ತೀವ್ರ ರಕ್ತ ನಷ್ಟವಾಗಿದ್ದು, ಸಾವಿಗೆ ಕಾರಣವಾಯಿತು" ಎಂದು ಇನ್ಸ್ಪೆಕ್ಟರ್ ಸತೀಶ್ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 307 (ಕೊಲೆಯ ಯತ್ನ), 302 (ಕೊಲೆ) 302 (ಕೊಲೆ) 143 (ಕಾನೂನುಬಾಹಿರ ಸಭೆ), ಮತ್ತು 146 (ಕಾನೂನುಬಾಹಿರ ಸಭೆಯ ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಕಲಬುರಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಲ್ಲೆ ನಡೆದ ಕೂಡಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿ ಪಕ್ಕದ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದರು. ಕೊಲೆಯಲ್ಲಿ ಭಾಗಿಯಾದ ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳವಾರ ಜಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಆರೋಪಿಗಳನ್ನು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.












Click it and Unblock the Notifications