ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಗೆಹ್ಲೋಟ್, ಪೈಲಟ್ ಫೈಟ್!
Recommended Video

ಜೈಪುರ, ಡಿಸೆಂಬರ್ 08 : ರಾಜಸ್ಥಾನದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತಾವರಣದ ಜೊತೆ ಮುಖ್ಯಮಂತ್ರಿ ಹುದ್ದೆಗೆ ಯಾರು ಎಂಬ ಪ್ರಶ್ನೆ ಕಾಡಲು ಆರಂಭಿಸಿದೆ.
ಕಾಂಗ್ರೆಸ್ ನಲ್ಲಿ ಚುನಾವಣೆ ಫಲಿತಾಂಶಕ್ಕೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಂಪ್ರದಾಯ ಇಲ್ಲವಾದರೂ, ರಾಜಸ್ಥಾನದಲ್ಲಿ ಇಬ್ಬರು ಬಲಾಢ್ಯ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ಯುವ ನಾಯಕ ಸಚಿನ್ ಪೈಲಟ್ ಅವರನ್ನು ಸಮಾನವಾಗಿ ಬಿಂಬಿಸಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ರಾಜಸ್ಥಾನದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿರುವ 67 ವರ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಈಗಾಗಲೆ 'ಮುಖ್ಯಮಂತ್ರಿ ಗೆಹ್ಲೊಟ್' ಎಂಬ ಘೋಷಣೆಗಳು ರಾಜಸ್ಥಾನದಾದ್ಯಂತ ಮೊಳಗಲು ಆರಂಭಿಸಿವೆ.
ಚುನಾವಣೆಗೂ ಮುನ್ನ ಇಬ್ಬರಲ್ಲಿ ಯಾರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಪ್ರಶ್ನೆ ಎದ್ದಿದ್ದಾಗ, ಕಾಂಗ್ರೆಸ್ ನಿಖರವಾದ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿತ್ತು. ಇಬ್ಬರನ್ನೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ಆದರೆ, ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ, ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಡಿಸೆಂಬರ್ 11ರಂದು ತಿಳಿದುಬರಲಿದೆ.

ಸಚಿನ್ ಬಗ್ಗೆ ಪ್ರಶ್ನೆಗೆ ಅಶೋಕ್ ತಿರುಗೇಟು
41 ವರ್ಷದ ಯುವ ನೇತಾರ ಸಚಿನ್ ಪೈಲಟ್ ಅವರು ಉತ್ತಮ ಮುಖ್ಯಮಂತ್ರಿ ಆಗಬಲ್ಲರೆ ಅಥವಾ ಅವರಿಗೆ ಇನ್ನೂ ಅನುಭವದ ಅಗತ್ಯವಿದೆಯೆ ಎಂದು ಪತ್ರಕರ್ತರು ಅಶೋಕ್ ಗೆಹ್ಲೋಟ್ ಅವರ ಮೇಲೆ ಪ್ರಶ್ನೆಗಳ ಬಾಣ ಎಸೆದಾಗ ಅಶೋಕ್ ಗೆಹ್ಲೋಟ್ ಅವರು, ಇದು ಕಾಲ್ಪನಿಕ ಪ್ರಶ್ನೆ. ಫಲಿತಾಂಶ ಪ್ರಕಟವಾಗುವ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಂಪ್ರದಾಯ ಕಾಂಗ್ರೆಸ್ಸಿನಲ್ಲಿಲ್ಲ. ನಾನು ಯಾರ ಸಾಮರ್ಥ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಇಡಲು ಬಯಸುವುದಿಲ್ಲ. ಇಂಥ ಪ್ರಶ್ನೆಗಳನ್ನು ನೀವು ನನಗೆ ಕೇಳಲೇಬಾರದು ಎಂದು ತಿರುಗೇಟು ನೀಡಿದ್ದಾರೆ.

ಜನಪ್ರಿಯ ಯುವ ನಾಯಕ ಸಚಿನ್ ಪೈಲಟ್
ಆದರೆ, ರಾಹುಲ್ ಗಾಂಧಿ ಅವರ ಯುವ ಪಾಳಯದಲ್ಲಿರುವ ಪ್ರತಿಭಾವಂತ ನಾಯಕನಾಗಿರುವ ಸಚಿನ್ ಪೈಲಟ್ ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವುದರಿಂದ ಮತ್ತು ಇವರಿಬ್ಬರಲ್ಲಿ ಹೆಚ್ಚು ಜನಪ್ರಿಯ ನಾಯಕರೂ ಆಗಿರುವದರಿಂದ ಮತ್ತು ರಾಹುಲ್ ಅವರು ಯುವ ನಾಯಕರಿಗೇ ಹೆಚ್ಚು ಮಣೆ ಹಾಕುತ್ತಿರುವುದರಿಂದ ಸಹಜವಾಗಿ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಹುದ್ದೆಗೆ ಸಮರ್ಥ ಆಯ್ಕೆಯಾಗಿದ್ದಾರೆ. ಈ ದ್ವಂದ್ವವನ್ನು ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಹೈಕಮಾಂಡೇ ಬಗೆಹರಿಸಬೇಕಿದೆ.

ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ
ಕಳೆದ ಇಪ್ಪತ್ತು ಇಪ್ಪತ್ತೈದು ವರ್ಷಗಳ ಇತಿಹಾಸವನ್ನು ಕೆದಕಿದರೆ ಪ್ರತಿ ಚುನಾವಣೆಯ ನಂತರ ರಾಜಸ್ಥಾನದಲ್ಲಿ ಪಕ್ಷ ಬದಲಾಗುತ್ತದೆ. ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಾಗಿ ಹೇಳಿವೆ. ಆದರೆ, ಚುನಾವಣೆ ಎದುರಿಸಿದ ಇತರ ರಾಜ್ಯಗಳಾದ ಮಧ್ಯ ಪ್ರದೇಶ, ಛತ್ತೀಸ್ ಗಢ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ಪರಿಸ್ಥಿತಿ ಹಾಗಿಲ್ಲ. ಈ ನಾಲ್ಕು ರಾಜ್ಯಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಸ್ಪಷ್ಟ ಫಲಿತಾಂಶ ಬಂದಿರುವುದು ರಾಜಸ್ಥಾನದಲ್ಲಿ ಮಾತ್ರ.

ಜನತಾ ಪಕ್ಷಕ್ಕೆ ಇದು ಭಾರೀ ಮುಖಭಂಗ
ಹೀಗಾಗಿ ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಗದ್ದುಗೆಯಿಂದ ಇಳಿಯುವುದು ಹೆಚ್ಚೂಕಡಿಮೆ ಖಚಿತವಾಗಿದೆ. 199 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತ ಗಳಿಸಲು 101 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ಪೋಲ್ ಆಫ್ ಪೋಲ್ಸ್ ಪ್ರಕಾರ ಕಾಂಗ್ರೆಸ್ 108 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆಯಲಿದೆ. ಭಾರತೀಯ ಜನತಾ ಪಕ್ಷ 82 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದಲ್ಲಿ ಕೂಡಲಿದೆ. 2013ರಲ್ಲಿ 163 ಸೀಟು ಗೆದ್ದಿದ್ದ ಭಾರತೀಯ ಜನತಾ ಪಕ್ಷಕ್ಕೆ ಇದು ಭಾರೀ ಮುಖಭಂಗವಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಈ ಸೋಲು ಭಾರೀ ಹಿನ್ನಡೆಯಂತಾಗಲಿದೆ. ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿ ಇದ್ದದ್ದು ಭಾರತೀಯ ಜನತಾ ಪಕ್ಷಕ್ಕೆ ಮುಳುವಾಗಿರುವುದು ಸ್ಪಷ್ಟ.












Click it and Unblock the Notifications