ಜ್ಞಾನವಾಪಿ ಪ್ರಕರಣ: ಸಾಮಾಜಿಕ ಜಾಲತಾಣ ಪೋಸ್ಟ್- ರಾಜಸ್ಥಾನ ಮಹಿಳೆಗೆ ಶಿರಚ್ಛೇದ ಬೆದರಿಕೆ
ವಾರಣಾಸಿ ನ್ಯಾಯಾಲಯದ ಜ್ಞಾನವಾಪಿ ಮಸೀದಿ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ, ರಾಜಸ್ಥಾನದ ಮಹಿಳೆಯೊಬ್ಬರಿಗೆ ಶಿರಚ್ಛೇದನ ಬೆದರಿಕೆ ಪತ್ರ ಬಂದಿದೆ. ರಾಜಸ್ಥಾನ ಪೊಲೀಸರ ಪ್ರಕಾರ, ಮಹಿಳೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸಂಬಂಧ ಹೊಂದಿದ್ದಾರೆ ಮತ್ತು ಅಲ್ವಾರ್ಗೆ ಸೇರಿದವರಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸದರ್ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್ಎಚ್ಒ) ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸದರ್ ಪೊಲೀಸ್ ಠಾಣೆಯ ಠಾಣಾಧಿಕಾರಿ, "ಅಲ್ವಾರ್ನಲ್ಲಿ ಮಹಿಳೆಯೊಬ್ಬರು ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದಾಗಿ ಅವರು ಬೆದರಿಕೆ ಪತ್ರವನ್ನು ಸ್ವೀಕರಿಸಿದ್ದಾರೆ. ಬೆದರಿಕೆ ಪತ್ರ ಎಲ್ಲಿಂದ ಬಂದಿದೆ? ಯಾರು ಕಳಿಸಿದ್ದಾರೆ? ಎಂದು ತನಿಖೆ ಮಾಡಲಾಗುತ್ತಿದೆ. ಬೆದರಿಕೆ ಪತ್ರ ಸ್ವೀಕರಿಸಿದ ಮಹಿಳೆ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಆಕೆಗೆ ತಲೆ ಕಡಿದು ಹಾಕುವುದಾಗಿ ಬರೆದಿರುವ ಪತ್ರ ಬಂದಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ. ಪತ್ರದ ಬಗ್ಗೆ ಪರಿಶೀಲಿಸಲಾಗುತ್ತಿದೆ'' ಎಂದು ಹೇಳಿದರು.

ಬಿಜೆಪಿಗೆ ಸೇರಿದ ರಾಜಸ್ಥಾನ ಮಹಿಳೆಗೆ ಶಿರಚ್ಛೇದ ಬೆದರಿಕೆ
ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪೂಜೆ ಮಾಡುವ ಹಕ್ಕು ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯ ಮನವಿಯನ್ನು ವಾರಣಾಸಿ ನ್ಯಾಯಾಲಯ ವಜಾಗೊಳಿಸಿದ ನಂತರ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಶಿ ವಿಶ್ವನಾಥ ದೇಗುಲದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿಯ ಹೊರ ಗೋಡೆಯ ಮೇಲೆ ಪ್ರತಿನಿತ್ಯ ಹಿಂದೂ ದೇವತೆಗಳ ವಿಗ್ರಹಗಳನ್ನು ಪೂಜಿಸಲು ಅನುಮತಿ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ವಾರಣಾಸಿ ನ್ಯಾಯಾಲಯ ಮಸೀದಿ ಸಂಕೀರ್ಣದ ಸರ್ವೇಗೆ ಆದೇಶ ನೀಡಿತ್ತು.

ಕನ್ಹಯ್ಯಾ ಲಾಲ್ ಹತ್ಯೆ
ಇದೇ ವರ್ಷ ಜೂನ್ 28 ರಂದು, ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡಿದ ಬಿಜೆಪಿಯ ಮಾಜಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಕನ್ಹಯ್ಯಾ ಲಾಲ್ ತೇಲಿ ಎಂಬ ವ್ಯಕ್ತಿಯನ್ನು ಉದಯಪುರದ ಅವರ ಅಂಗಡಿಯಲ್ಲಿ ಕೊಲ್ಲಲಾಯಿತು.
ಉದಯಪುರದ ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ಜೂನ್ 29 ರಂದು ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜೂನ್ 29 ರಂದು ಪ್ರಕರಣವನ್ನು ಮರು ದಾಖಲಿಸಿಕೊಂಡಿದ್ದು, ತನಿಖೆಯನ್ನು ವಹಿಸಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಒಂಬತ್ತು ಮಂದಿ ಆರೋಪಿಗಳನ್ನು ಎನ್ಐಎ ಬಂಧಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಹಂತಕರಾದ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಅವರನ್ನು ಜೂನ್ 29 ರಂದು ರಾಜಸ್ಥಾನ ಪೊಲೀಸರು ಮತ್ತು ನಂತರ ಪ್ರಕರಣದ ತನಿಖೆಯ ಸಮಯದಲ್ಲಿ ಎನ್ಐಎ ವಶಕ್ಕೆ ತೆಗೆದುಕೊಂಡರು.

ನೂಪುರ್ ಶರ್ಮಾಗೆ ಜೀವ ಬೆದರಿಕೆ
ಬಿಜೆಪಿ ಮಾಜಿ ವಕ್ತಾರೆ ಶ್ರೀಮತಿ ಶರ್ಮಾ ಅವರು ಈ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇವರ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಬಿಜೆಪಿಯಿಂದ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. ಇದರ ನಡುವೆ ಶರ್ಮಾ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ದೂರು ನೀಡಿದ್ದರು. "ಎಫ್ಐಆರ್ ಆಧರಿಸಿ, ನಾವು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಜೀವ ಬೆದರಿಕೆ ಹಾಕಿದವರ ಪತ್ತೆಯಾಗಿಲ್ಲ.

ನೂಪುರ್ ದೇಶವ್ಯಾಪಿ ಪ್ರತಿಭಟನೆ
ಗಲ್ಫ್ ಪ್ರದೇಶದ ಸೌದಿ ಅರೇಬಿಯಾ, ಕತಾರ್, ಬಹ್ರೇನ್ ಮತ್ತು ಇರಾನ್ ದೇಶಗಳು ಶರ್ಮಾ ಹೇಳಿಕೆ ಟೀಕೆಗಳನ್ನು ಬಲವಾಗಿ ಖಂಡಿಸಿವೆ. ಕತಾರ್ ಮತ್ತು ಬಹ್ರೇನ್ ಕೂಡ ಭಾರತೀಯ ರಾಯಭಾರಿಯನ್ನು ಕರೆಸಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದವು.
ಶರ್ಮಾ ಹೇಳಿಕೆಗೆ ಉತ್ತರ ಪ್ರದೇಶದ ಕಾನ್ಪುರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ನೂಪುರ್ ಶರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಲವೆಡೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 1,500 ಕ್ಕೂ ಹೆಚ್ಚು ಜನರ ಮೇಲೆ ಆರೋಪ ಹೊರಿಸಲಾಗಿದೆ. ವಿವಾದಾತ್ಮಾಕ ಹೇಳಿಕೆ ಬಳಿಕೆಗೆ ನೂಪುರ್ ಶರ್ಮಾ ಮತ್ತು ಹಿರಿಯ ನಾಯಕ ನವೀನ್ ಕುಮಾರ್ ಜಿಂದಾಲ್ ಅವರು ಈಗ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿದ್ದಾರೆ.












Click it and Unblock the Notifications