ಜೈಸಲ್ಮೇರ್ನಲ್ಲಿ ಜುರಾಸಿಕ್ ಕಾಲದ ಶಾರ್ಕ್ ಪ್ರಬೇಧಗಳ ಅವಿಷ್ಕಾರ
ಜೈಪುರ, ಸೆಪ್ಟೆಂಬರ್ 15: ರಾಜಸ್ಥಾನದ ಪಶ್ಚಿಮ ವಲಯದ ಭಾರತೀಯ ಸರ್ವೇಕ್ಷಣಾ ಇಲಾಖೆಯ ಜೈಪುರ ಕಚೇರಿಯ ಕೃಷ್ಣಕುಮಾರ್, ಪ್ರಜ್ಞಾಪಾಂಡೆ, ತ್ರಿವರ್ಣಘೋಷ್ ಒಳಗೊಂಡ ಅಧಿಕಾರಿಗಳ ತಂಡ ಮೊದಲ ಬಾರಿಗೆ ಜೈಸಲ್ಮೇರ್ ನಿಂದ ಹೊಸ ಜಾತಿಯ ಹೈಬೊಡಾಂಟ್ ಶಾರ್ಕ್ ನ ಅಪರೂಪದ ಹಲ್ಲುಗಳನ್ನು ಅನ್ವೇಷಣೆ ಮಾಡಿದೆ.
ಈ ಸಂಶೋಧನೆಯ ಮಾಹಿತಿ ಜೀವಶಾಸ್ತ್ರ ಇತಿಹಾಸ ಕುರಿತ ಜರ್ನಲ್ ಆಫ್ ಇಂಟರ್ ನ್ಯಾಷನಲ್ ರೆಪ್ಯುಟ್ ಪತ್ರಿಕೆಯ 2021 ರ ಆಗಸ್ಟ್ 4 ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ರೂರ್ಕೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಭೂ ವಿಜ್ಞಾನ ಇಲಾಖೆಯ ಮುಖ್ಯಸ್ಥ ಡಾ. ಸುನಿಲ್ ಬಜ್ಪೈ ಅವರು ಈ ಲೇಖನ ಬರೆದಿದ್ದು, ಈ ಅನ್ವೇಷಣೆ ಮೂಲಕ ಇದನ್ನು ಗುರುತಿಸಿ ಮತ್ತು ದಾಖಲಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಪಶ್ಚಿಮ ವಲಯದ ಪ್ಯಾಲಿಯಂಟಾಲಜಿ ವಿಭಾಗದ ಹಿರಿಯ ಭೂ ವಿಜ್ಞಾನಿ ಶ್ರೀ ಕೃಷ್ಣಕುಮಾರ್ ಅವರ ಪ್ರಕಾರ, ರಾಜಸ್ಥಾನದ ಜೈಸಲ್ಮೇರ್ ನ ಜುರಾಸಿಕ್ ಬಂಡೆಗಳಿಂದ [ಸರಿ ಸುಮಾರು 160 ರಿಂದ 180 ದಶಲಕ್ಷ ವರ್ಷಗಳಷ್ಟು ಹಳೆಯದು] ಮೊದಲ ಬಾರಿಗೆ ಹೈಬೊಡಾಂಟ್ ಶಾರ್ಕ್ ಗಳ ಕುರಿತು ವರದಿ ಮಾಡಲಾಗಿದೆ. ಹೈಬೊಡಾಂಟ್ಸ್ ಗಳು ಅಳಿವಿನಂಚಿನಲ್ಲಿರುವ ಶಾರ್ಕ್ ಗಳ ಗುಂಪು. ಟ್ರಯಾಸಿಕ್ ಮತ್ತು ಆರಂಭಿಕ ಜುರಾಸಿಕ್ ಸಾಗರ ವಲಯದಲ್ಲಿ ಸಮುದ್ರ ಮತ್ತು ಪ್ಲೂವಿಯಲ್ ಪರಿಸರದಲ್ಲಿ ಈ ದೊಡ್ಡ ಮೀನುಗಳ ಪ್ರಬಲ ಗುಂಪು ಇತ್ತು. ಆದಾಗ್ಯೂ ಹೈಬೊಡಾಂಟ್ ಶಾರ್ಕ್ ಗಳು ಮಧ್ಯಜುರಾಸಿಕ್ ನ ಸಮಯದಲ್ಲಿ ಮುಕ್ತ ಸಮುದ್ರ ಪರಿಸರದಲ್ಲಿ ಕ್ರಮೇಣ ಕ್ಷೀಣಿಸಲು ಪ್ರಾರಂಭಿಸಿದವು. 65 ದಶಲಕ್ಷ ವರ್ಷಗಳ ಹಿಂದೆ ಕ್ರಿಟೇಷಿಯಸ್ ಸಮಯದ ಕೊನೆಯಲ್ಲಿ ಹೈಬೊಡಾಂಟ್ಸ್ ಅಂತಿಮವಾಗಿ ಅಳಿಯಿತು.

ಜೈಸಲ್ಮೇರ್ ನಿಂದ ಗಮನಾರ್ಹವಾಗಿ ಪತ್ತೆಯಾದ ಹಲ್ಲುಗಳನ್ನು ಈ ಸಂಶೋಧನಾ ತಂಡ ಸ್ಟ್ರೋಪೋಡುಜೈಸಲ್ಮೇರೆನಿಸ್ ಎಂದು ಹೆಸರಿಸಿದೆ. ಭಾರತದ ಉಪಖಂಡದಲ್ಲಿ ಇದೇ ಮೊದಲ ಬಾರಿಗೆ ಸ್ಟ್ರೋಪೋಡಸ್ ಗಳನ್ನು ಪತ್ತೆ ಮಾಡಲಾಗಿದೆ ಮತ್ತು ಇದು ಮೂರನೇಯ ಶೋಧವಾಗಿದ್ದು, ಇದಕ್ಕೂ ಮುನ್ನ ಜಪಾನ್ ಮತ್ತು ಥೈಲ್ಯಾಂಡ್ನಲ್ಲಿ ಇದು ಪತ್ತೆಯಾಗಿತ್ತು. ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ [ಐ.ಯು.ಸಿ.ಎನ್], ಸ್ಪೀಶಿಸ್ ಸರ್ವೈವಲ್ ಕಮೀಷನ್ [ಎಸ್..ಎಸ್.ಸಿ] ಮತ್ತು ಜರ್ಮನಿಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಾಗತಿಕ ವೇದಿಕೆ ಶಾರ್ಕ್ ರೆಫರೆನ್ಸ್ ಡಾಟ್ ಕಾಂನಲ್ಲಿ ಹೊಸ ತಳಿಗಳನ್ನು ಇತ್ತೀಚೆಗೆ ಸೇರಿಸಲಾಗಿದೆ.
ಈ ಅವಿಷ್ಕಾರ ರಾಜಸ್ಥಾನದ ಜೈಸಲ್ಮೇರ್ ಪ್ರದೇಶದಲ್ಲಿ ಜುರಾಸಿಕ್ನ ಕಶೇರುಕ ಪಳೆಯುಳಿಕೆಗಳ ಅಧ್ಯಯನದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಮತ್ತು ಇದು ಕಶೇರುಕ ಪಳೆಯುಳಿಕೆಗಳ ವಲಯದಲ್ಲಿ ಹೆಚ್ಚಿನ ಸಂಶೋಧನೆಗಾಗಿ ಹೊಸ ವಿಭಾಗವನ್ನು ತೆರೆಯುತ್ತದೆ.
ರೈಲ್ವೆಯಲ್ಲಿ ಕಲ್ಲಿದ್ದಲು ಸಂಗ್ರಹವನ್ನು ಪತ್ತೆಮಾಡಲು 1851 ರಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆ [ಜಿ.ಎಸ್.ಐ] ಯನ್ನು ಸ್ಥಾಪಿಸಲಾಗಿತ್ತು. ಜಿ.ಎಸ್.ಐ ದೇಶದ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ಭೂ ವಿಜ್ಞಾನ ಮಾಹಿತಿಯ ಭಂಡಾರವಾಗಿ ಬೆಳೆದಿದೆ. ಜತೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಭೌಗೋಳಿಕ - ವೈಜ್ಞಾನಿಕ ಸಂಸ್ಥೆಯ ಸ್ಥಾನಮಾನವನ್ನೂ ಸಹ ಗಳಿಸಿದೆ. ರಾಷ್ಟ್ರೀಯ ಭೂ ವಿಜ್ಞಾನ, ಖನಿಜ ಸಂಪನ್ಮೂಲ ಅಂದಾಜು ಮಾಡುವ, ಮಾಹಿತಿ ಸಂಗ್ರಹಿಸುವ ಮತ್ತು ಪರಿಷ್ಕರಣೆಗೊಳಿಸುವುದು ಈ ಸಂಸ್ಥೆಯ ಪ್ರಮುಖ ಕೆಲಸವಾಗಿದೆ. ಈ ಸಮೀಕ್ಷೆಗಳನ್ನು ನೆಲ, ವಾಯು ಮಾರ್ಗ, ಸಾಗರ ಸಮೀಕ್ಷೆಗಳು, ಖನಿಜ ನಿರೀಕ್ಷೆ, ಬಹು ಶಿಸ್ತೀನ ಭೌಗೋಳಿಕ ಅಪಾಯಗಳ ಅಧ್ಯಯನಗಳು, ಹಿಮನದಿ, ಭೂಕಂಪ ಟೆಕ್ಟೋನಿಕ್ ಅಧ್ಯಯನ ಮತ್ತು ಮೂಲಭೂತ ಸಂಶೋಧನೆ ಮೂಲಕ ಸಂಸ್ಥೆ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಿದೆ.
ಪ್ರಾದೇಶಿಕ ದತ್ತಾಂಶಗಳು [ದೂರಸಂವೇದಿ ಮೂಲಕ ಸಂಗ್ರಹಿಸಿರುವುದು ಒಳಗೊಂಡಂತೆ] ಸಂಗ್ರಹಣೆ, ನಿರ್ವಹಣೆ, ಸಮನ್ವಯ ಮತ್ತು ಬಳಕೆಯ ಮೂಲಕ ಜಿ.ಎಸ್.ಐ.ನ ಪ್ರಮುಖ ಸಾಮರ್ಥ್ಯದ ಸಮೀಕ್ಷೆಯ ನಕ್ಷೆ ರೂಪಿಸುವ ಪ್ರಕ್ರಿಯೆ ಹೆಚ್ಚಿಸಲಾಗುತ್ತಿದೆ. ಭೂ ವಿಜ್ಞಾನ ಮಾಹಿತಿ ಮತ್ತು ಪ್ರಾದೇಶಿಕ ದತ್ತಾಂಶ ಸಹಕಾರ ಮತ್ತು ಭೌಗೋಳಿಕ ಮಾಹಿತಿ ವಲಯದ ಇತರೆ ಪಾಲುದಾರ ಸಹಯೋಗದೊಂದಿಗೆ ಜಿ.ಎಸ್.ಐ ಇತ್ತೀಚಿನ ಕಂಪ್ಯೂಟರ್ ಆಧಾರಿತ ತಂತ್ರಜ್ಞಾನ ಬಳಸುತ್ತಿದೆ.
ಕೊಲ್ಕತ್ತಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಿ.ಎಸ್.ಐ ಗಣಿ ಸಚಿವಾಲಯಕ್ಕೆ ಹೊಂದಿಕೊಂಡಿರುವಂತೆ ಲಕ್ನೋ, ಜೈಪುರ, ನಾಗ್ಪುರ, ಹೈದರಾಬಾದ್ ಮತ್ತು ಶಿಲ್ಲಾಂಗ್ನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಜಿ.ಎಸ್.ಐಯು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಶಾಖಾ ಕಚೇರಿಗಳನ್ನು ಹೊಂದಿದೆ.












Click it and Unblock the Notifications