ರಾಜಸ್ಥಾನ ಚುನಾವಣೆ : ಫಲಿತಾಂಶದ ಬಳಿಕ ಕಾಂಗ್ರೆಸ್ ತಂತ್ರ ಸಿದ್ಧ
ಜೈಪುರ, ಡಿಸೆಂಬರ್ 10 : ರಾಜಸ್ಥಾನ ವಿಧಾನಸಭೆ ಚುನಾವಣೆಯ ಫಲಿತಾಂಶ ಮತಯಂತ್ರದಲ್ಲಿ ಭದ್ರವಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಚುನಾವಣೆ ಗೆದ್ದು ಅಧಿಕಾರ ಪಡೆಯುವ ವಿಶ್ವಾಸದಲ್ಲಿದೆ. ಡಿ.11ರ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ.
ರಾಜಸ್ಥಾನ ಕಾಂಗ್ರೆಸ್ನ ಪ್ರಮುಖ ನಾಯಕರು ಈಗಾಗಲೇ ದೆಹಲಿ ತಲುಪಿದ್ದಾರೆ. ಮುಂದಿನ ನಡೆ ಬಗ್ಗೆ ಅವರು ಚರ್ಚೆ ನಡೆಸಲಿದ್ದು, ಡಿಸೆಂಬರ್ 11ರ ಬೆಳಗ್ಗೆ ಎಲ್ಲರೂ ರಾಜಸ್ಥಾನಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲೆಟ್ ಅವರು ದೆಹಲಿಯಲ್ಲಿದ್ದಾರೆ. ರಾಜ್ಯದ ಪ್ರತಿಪಕ್ಷ ನಾಯಕ ರಾಮೇಶ್ವರ ದುಡಿ ಅವರು ಸಹ ದೆಹಲಿ ತಲುಪಿದ್ದು, ಸಂಭಾವ್ಯ ಗೆಲ್ಲುವ ಅಭ್ಯರ್ಥಿಗಳಿಗೆ ಈಗಾಗಲೇ ಕರೆ ಮಾಡಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಡಿಸೆಂಬರ್ 12ರಂದು ಪಕ್ಷದ ಶಾಸಕರ ಸಭೆ ನಡೆಯಲಿದೆ. ಹೈಕಮಾಂಡ್ ಆದೇಶದಂತೆ ಒಂದು ಸಾಲಿನ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗುತ್ತದೆ. ಜೈಪುರದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.
ಮುಖ್ಯಮಂತ್ರಿ ಆಯ್ಕೆಗೆ 2008ರಲ್ಲಿ ಉಂಟಾದ ಪರಿಸ್ಥಿತಿ ಎದುರಾಗಬಾರದು ಎಂಬುದು ಪಕ್ಷದ ಆಶಯವಾಗಿದೆ. ಆಗ ಅಶೋಕ್ ಗೆಹ್ಲೋಟ್ ಮತ್ತು ಸಿ.ಪಿ.ಜೋಶಿ ಅವರು ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಸಿ.ಪಿ.ಜೋಶಿ ಒಂದು ಮತದ ಅಂತರದಿಂದ ಚುನಾವಣೆಯಲ್ಲಿ ಸೋತಿದ್ದರು.
ಮಂಗಳವಾರ ಜೈಪುರದಲ್ಲಿ ಫಲಿತಾಂಶದ ಬಳಿಕ ಎಲ್ಲಾ ತಂತ್ರಗಳನ್ನು ಶಾಸಕರ ಜೊತೆ ಚರ್ಚೆ ನಡೆಸಲಾಗುತ್ತದೆ. ಗುಲಾಂ ನಬಿ ಆಜಾದ್, ಅವಿನಾಶ್ ಪಾಂಡೆ ಮುಂತಾದ ನಾಯಕರು ಚುನಾವಣಾ ಫಲಿತಾಂಶದ ವಿಶ್ಲೇಷಣೆ ಮಾಡಲಿದ್ದಾರೆ.












Click it and Unblock the Notifications