ಕೃಷ್ಣಮೃಗ ಬೇಟೆ ಪ್ರಕರಣ : ಸೋನಾಲಿ, ಸೈಫ್, ತಬುಗೆ ನೋಟಿಸ್
ಜೋಧ್ ಪುರ್, ಮಾರ್ಚ್ 11: ಸಲ್ಮಾನ್ ಖಾನ್ ಪ್ರಮುಖ ಆರೋಪಿಯಾಗಿರುವ ಕೃಷ್ಣಮೃಗ ಬೇಟೆ ಪ್ರಕರಣ ರೀ ಓಪನ್ ಆಗಿದೆ. ಸಹ ಆರೋಪಿಗಳಾಗಿ ನಂತರ ಪ್ರಕರಣದಿಂದ ಖುಲಾಸೆಗೊಂಡಿದ್ದ ಬಾಲಿವುಡ್ಡಿನ ಸ್ಟಾರ್ ನಟ, ನಟಿಯರಿಗೆ ಸೋಮವಾರ(ಮಾ 11)ದಂದು ಜೋಧ್ ಪುರ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಪ್ರಕರಣದಿಂದ ಖುಲಾಸೆಗೊಂಡಿರುವ ನಟ, ನಟಿಯರ ವಿರುದ್ಧ ಹೈಕೋರ್ಟಿಗೆ ರಾಜಸ್ಥಾನ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮುಖ್ಯ ಆರೋಪಿಯ ಜತೆ ಘಟನಾ ಸ್ಥಳದಲ್ಲಿದ್ದ ಕಾರಣಕ್ಕೆ ಆರೋಪ ಹೊತ್ತಿದ್ದ ಹಮ್ ಸಾಥ್ ಸಾಥ್ ಹೈ ಚಿತ್ರ ತಂಡದ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಸಿಂಗ್ ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಇವರೆಲ್ಲರ ವಿರುದ್ಧ ಸರಿಯಾದ ಸಾಕ್ಷಿ ಸಿಗದ ಕಾರಣ, ಪ್ರಕರಣದಿಂದ ಖುಲಾಸೆಗೊಳಿಸಿ ಜೋಧ್ ಪುರ್ ನ್ಯಾಯಾಲಯವು ತೀರ್ಪು ನೀಡಿತ್ತು. ಜೋಧಪುರ್ ಕೋರ್ಟಿನ ತೀರ್ಪಿನ ಬಗ್ಗೆ ಬಿಷ್ಣೋಯಿ ಸಮುದಾಯದವರು ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಒತ್ತಡಕ್ಕೆ ಮಣಿದ ಅಂದಿನ ಬಿಜೆಪಿ ಸರ್ಕಾರವು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.

ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಹಾಗೂ ಇತರರ ವಿರುದ್ಧ ದೂರು
1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ರಿಂದ ರಾಜಸ್ಥಾನದ ಕಂಕನಿ ಹಳ್ಳಿಯ ಬಳಿ ಕೃಷ್ಣಮೃಗ ಬೇಟೆಯಾಡಿದ್ದರು. ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಖಾನ್ ಹಾಗೂ ಇತರ ನಟರ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜೈಲಿನಲ್ಲಿ ಎರಡು ದಿನ ಕಳೆದಿದ್ದ ಸಲ್ಮಾನ್
ಏಪ್ರಿಲ್ 05,2018ರಂದು ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಲಾಯಿತು. ಜೋಧಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದ ಸಲ್ಮಾನ್, ಜಾಮೀನು ಪಡೆದು ಹೊರ ಬಂದರು. ಮಿಕ್ಕ ಎಲ್ಲಾ ನಟ, ನಟಿಯರು ಹಾಗೂ ರಾಜಸ್ಥಾನಿ ಗೈಡ್ ದುಷ್ಯಂತ್ ಸಿಂಗ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು. ಬೆನಿಫಿಟ್ ಆಫ್ ಡೌಟ್ ಎಂದು ಪರಿಗಣಿಸಿ, ಘಟನೆ ನಡೆದ ಸ್ಥಳದಲ್ಲಿದ್ದರೂ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಸಿಂಗ್ ಅವರು ಕ್ರೈಂಗೆ ಕುಮ್ಮಕ್ಕು ನೀಡಿದ್ದರ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ

ಸಲ್ಮಾನ್ ಖಾನ್ ಅವರಿಗೆ 5 ವರ್ಷ ಶಿಕ್ಷೆ ಪ್ರಕಟಿಸಲಾಯಿತು
ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ 5 ವರ್ಷ ಶಿಕ್ಷೆ ಪ್ರಕಟಿಸಲಾಯಿತು. ಆದರೆ, ಜೋಧಪುರದ ಜೈಲಿನಲ್ಲಿದ್ದ ಸಲ್ಮಾನ್ ಗೆ ಷರತ್ತುಬದ್ಧ ಜಾಮೀನು ತಕ್ಷಣವೇ ಸಿಕ್ಕಿತು. 25 ಸಾವಿರ ರೂ ಭದ್ರತಾ ಠೇವಣಿ ಹಾಗೂ ವೈಯಕ್ತಿಕ ಬಾಂಡ್ 50 ಸಾವಿರ ರೂ. ಇರಿಸಿ ಜಾಮೀನು ಪಡೆದರು. ವಿದೇಶಕ್ಕೆ ತೆರಳುವಾಗ ಕೋರ್ಟಿನ ಅನುಮತಿ ಅಗತ್ಯ ಎಂಬ ಷರತ್ತು ವಿಧಿಸಲಾಗಿದೆ.
|
ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ದೂರು
ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಖಾನ್ ಹಾಗೂ ಇತರ ನಟರ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವನ್ಯಜೀವಿ ಸಂರಕ್ಷಣೆ ಕಾಯ್ದೆ 51 ಹಾಗೂ ದುಷ್ಟ ಕಾರ್ಯ ಮಾಡಲು ಗುಂಪು ಸೇರಿರುವ ಆರೋಪದ ಮೇಲೆ IPC ಸೆಕ್ಷನ್ 149 ಅಡಿಯಲ್ಲಿ ಅಕ್ಟೋಬರ್ 02, 1998ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ನಂತರ, ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.












Click it and Unblock the Notifications