ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಗೆ ರಾಜಸ್ಥಾನದ ಹೊಣೆ
ಜೈಪುರ, ನವೆಂಬರ್ 30: ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪನೆಗಾಗಿ ಎಲ್ಲಾ ರೀತಿಯಿಂದಲೂ ಯತ್ನಿಸುತ್ತಿರುವ ಕಾಂಗ್ರೆಸ್ ಮಹತ್ವದ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ರನ್ನು ರಾಜಸ್ಥಾನದ ಚುನಾವಣೆಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
ಯುನೈಟೆಡ್ ಪ್ರೊಗ್ರೆಸ್ ಅಲೈಯನ್ಸ್ (ಯುಪಿಎ)ನ ಚೇರ್ಮನ್ ಸೋನಿಯಾ ಗಾಂಧಿ ಅವರು ಈ ನಿರ್ಧಾರ ಕೈಗೊಂಡಿದ್ದು, ಕಾಂಗ್ರೆಸ್ ವಾರ್ ರೂಮಿಗೆ ಅಹ್ಮದ್ ಪಟೇಲ್ ಎಂಟ್ರಿ ಕೊಟ್ಟಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ಸಿನಲ್ಲಿರುವ ಸಣ್ಣ ಪುಟ್ಟ ಭಿನ್ನಮತ, ಒಳ ಜಗಳಗಳನ್ನು ಬದಿಗೊತ್ತಿ, ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಶ್ರಮಿಸುವಂತೆ ಕಾರ್ಯಕರ್ತರಿಗೆ ಅಹ್ಮದ್ ಪಟೇಲ್ ಸೂಚನೆ ನೀಡಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಅಹ್ಮದ್ ಪಟೇಲ್ ಅವರು ಬ್ರಿಜ್ ಕಿಶೋರ್ ಶರ್ಮ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದ್ದಾರೆ. ಹವಾಮಹಲ್ ಅಸೆಂಬ್ಲಿ ಸೀಟಿನ ಆಕಾಂಕ್ಷಿಯಾಗಿದ್ದ ಬ್ರಿಜ್ ಕಿಶೋರ್ ಅವರಿಗೆ ತಕ್ಷಣದಿಂದಲೇ ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುವಂತೆ ಅಹ್ಮದ್ ಪಟೇಲ್ ಸೂಚಿಸಿದ್ದಾರೆ.
ಸಂಸದ ಮಹೇಶ್ ಶರ್ಮ ಅವರು ಇದೇ ಕ್ಷೇತ್ರದಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಗುಜರಾತಿನ ರಾಜ್ಯಪಾಲ ಪಂಡಿತ್ ನವಲ್ ಕಿಶೋರ್ ಶರ್ಮ ಅವರ ಮಗ ಬ್ರಿಜ್ ಕಿಶೋರ್ ಅವರು ಟಿಕೆಟ್ ಕೈ ತಪ್ಪಿದ್ದಕ್ಕೆ ಭಾರಿ ಸಿಟ್ಟಾಗಿದ್ದರು. ಆದರೆ, ಬ್ರಿಜ್ ಕಿಶೋರ್ ಅವರ ಕೋಪ ಶಮನಗೊಳಿಸಿರುವ ಅಹ್ಮದ್ ಪಟೇಲ್, ಪಕ್ಷದ ಸಂಘಟನೆಯನ್ನು ಬಲಗೊಳಿಸತೊಡಗಿದ್ದಾರೆ.
200ಕ್ಕೂ ಅಧಿಕ ಅಭ್ಯರ್ಥಿಗಳ ಜತೆ ಸಂಪರ್ಕದಲ್ಲಿರುವ ಅಹ್ಮದ್ ಪಟೇಲ್ ಅವರಿಗೆ ಬೆನ್ನೆಲುಬಾಗಿ 12ಕ್ಕೂ ಅಧಿಕ ಮಂದಿ ಯುವ ಕಾರ್ಯಕರ್ತರು ಕಾಂಗ್ರೆಸ್ ಯುದ್ಧ ಕೊಠಡಿಯಲ್ಲಿದ್ದಾರೆ.












Click it and Unblock the Notifications