ಆಗಸ್ಟಾ ಮಧ್ಯವರ್ತಿ ಎಲ್ಲ 'ರಹಸ್ಯ' ಬಯಲು ಮಾಡಲಿದ್ದಾನೆ : ನರೇಂದ್ರ ಮೋದಿ
ಸುಮೇರಪುರ (ರಾಜಸ್ಥಾನ), ಡಿಸೆಂಬರ್ 05 : "ವಿವಿಐಪಿಗಳನ್ನು ಕರೆದೊಯ್ಯಲೆಂದು ಇಟಲಿ ಮೂಲದ ಕಂಪನಿ ಆಗಸ್ಟಾ ವೆಸ್ಟ್ ಲ್ಯಾಂಡ್ ನಿಂದ ಹೆಲಿಕಾಪ್ಟರುಗಳನ್ನು ಖರೀದಿಸಲಾಗಿದ್ದು ಯುಪಿಎ ಸರಕಾರವಿದ್ದಾಗ. ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ನನ್ನು ಭಾರತಕ್ಕೆ ಕರತರಲಾಗಿದೆ. ಆತನ ಬಾಯಿಯಿಂದ ಇನ್ನೂ ಏನೇನು ರಹಸ್ಯಗಳು ಹೊರಬರುತ್ತವೋ? ಅಲ್ಲಿಯವರೆಗೆ ಸ್ವಲ್ಪ ಕಾಯಿರಿ."
ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಂದಿನ ಶೈಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಣಕಿದ್ದಾರೆ. ಅವರು ಬಹಿರಂಗ ಪ್ರಚಾರದ ಕಡೆಯ ದಿನವಾದ ಇಂದು ರಾಜಸ್ಥಾನದ ಸುಮೇರುನಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಇಯ ನ್ಯಾಯಾಲಯ ಆದೇಶ ಹೊರಡಿಸಿದಾಗನಿಂದ ಆತ ನಾಪತ್ತೆಯಾಗಿದ್ದ.
ತಲೆಮರೆಸಿಕೊಂಡಿದ್ದ ಆಗಸ್ಟಾವೆಸ್ಟ್ಲ್ಯಾಂಡ್ ಹಗರಣದ ಆರೋಪಿ ಭಾರತಕ್ಕೆ
ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಮೇಲೆ ಆಕ್ರಮಣ ಮಾಡಲು ಈ ಸಂದರ್ಭವನ್ನು ನರೇಂದ್ರ ಮೋದಿಯವರು ಬಳಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾರತದ ರಾಜಕಾರಣಿಗಳಿಗೆ 225 ಕೋಟಿ ರುಪಾಯಿ ಲಂಚವನ್ನು ಮಧ್ಯವರ್ತಿಯಾಗಿರುವ ಕ್ರಿಶ್ಚಿಯನ್ ಮೈಕಲ್ ನೀಡಿದ್ದಾನೆ ಎಂಬ ಆರೋಪ ಹೊತ್ತಿದ್ದಾನೆ. ಲಂಚ ಪಡೆದವರ ಪಟ್ಟಿಯಲ್ಲಿ 'ಕುಟುಂಬ'ದ ಕೆಲ ಸದಸ್ಯರ ಹೆಸರುಗಳು ಕೂಡ ಇವೆ. ಅಂದ ಹಾಗೆ, ಮೈಕೆಲ್ ತಂದೆ ಕಾಂಗ್ರೆಸ್ ನಾಯಕರಿಗೆ ಹತ್ತಿರವಾಗಿದ್ದ.
ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಗೆ ಡೀಲ್
2010ರಲ್ಲಿ ಯುಪಿಎ ಸರಕಾರವಿದ್ದಾಗ ಆಗಸ್ಟಾವೆಸ್ಟ್ಲ್ಯಾಂಡ್ ಮತ್ತು ಭಾರತೀಯ ವಾಯು ಸೇನೆಯ ನಡುವೆ 12 ಆಗಸ್ಟಾವೆಸ್ಟ್ಲ್ಯಾಂಡ್ ಎಡಬ್ಲ್ಯೂ101 ಹೆಲಿಕಾಪ್ಟರ್ ಗಳನ್ನು ಕೊಳ್ಳುವ ಒಪ್ಪಂದವಾಗಿತ್ತು. ಇವುಗಳನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗಳಿಗಾಗಿ ಬಳಸು ಯೋಜಿಸಲಾಗಿತ್ತು. ಇದಕ್ಕಾಗಿ ಬ್ರಿಟನ್ ಮೂಲದ ಮಧ್ಯವರ್ತಿ ಕ್ರಿಸ್ಚಿಯನ್ ಮೈಕೆಲ್ ಗೆ ಡೀಲ್ ನೀಡಲಾಗಿತ್ತು. ಈ ಡೀಲ್ ಕುದುರಿಸಲು ಭಾರತೀಯ ರಾಜಕಾರಣಿಗಳಿಗೆ ಲಂಚ ನೀಡಲೆಂದು 225 ಕೋಟಿ ರುಪಾಯಿ ನೀಡಲಾಗಿತ್ತು.
ಲಂಚ ಪಡೆದ 'ಕುಟುಂಬ'ದ ಸದಸ್ಯರು ಯಾರು?
ಈಗ ಮಧ್ಯವರ್ತಿ ಮತ್ತು ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ಸಿಕ್ಕಿರುವುದರಿಂದ, ಈ ಹಗರಣದಲ್ಲಿ ಭಾಗಿಯಾದವರ ಹೆಸರುಗಳ ಹೊರಬರುವ ಸಾಧ್ಯತೆಯಿದೆ. ಕ್ರಿಶ್ಚಿಯನ್ ನಿಂದ ಲಂಚ ಪಡೆದಿರುವ 'ಕುಟುಂಬ'ದ ಸದಸ್ಯರು ಯಾರು? ಯಾವುದು ಆ ಕುಟುಂಬ? ಸದ್ಯಕ್ಕೆ ಇದು ಚಿದಂಬರ ರಹಸ್ಯ. ತನಿಖೆಯ ಮೂಲಕವೇ ಎಲ್ಲ ರಹಸ್ಯಗಳನ್ನು ಬಾಯಿಬಿಡಿಸಬೇಕಿದೆ. ಈ ಕಾರಣಕ್ಕಾಗಿಯೇ ಕ್ರಿಶ್ಚಿಯನ್ ಮೈಕೆಲ್ ಬಾಯಿಯಿಂದ ಏನೇನು ರಹಸ್ಯಗಳು ಹೊರಬರಲಿವೆಯೋ ಎಂದು ನರೇಂದ್ರ ಮೋದಿಯವರು ಮಾರ್ಮಿಕವಾಗಿ ನುಡಿದಿದ್ದು.
ಆಗಸ್ಟಾವೆಸ್ಟ್ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್
ಬಿಜೆಪಿಗೆ ಸಿಕ್ಕ ಪ್ರಬಲ ಅಸ್ತ್ರ
ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್ ವಿರುದ್ಧ ದನಿಯೆತ್ತಲು ಭಾರತೀಯ ಜನತಾ ಪಕ್ಷಕ್ಕೆ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಿಂದಾಗಿ ಭರ್ಜರಿ ಅಸ್ತ್ರ ಸಿಕ್ಕಂತಾಗಿದೆ. ತನಿಖೆ ನಡೆಸುತ್ತಿರುವ ಭಾರತ ಮತ್ತು ಯುಎಇ ಅಧಿಕಾರಿಗಳು ಕ್ರಿಶ್ಚಿಯನ್ ಮೈಕೆಲ್ ಮೇಲೆ, ಈ ಹಗರಣದಲ್ಲಿ ಪಾತ್ರವಹಿಸಿರುವ ಇಟಲಿ ಮೂಲದ ರಾಜಕಾರಣಿಯ ಹೆಸರನ್ನು ಹೇಳಲು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಮೈಕೆಲ್ ಭಾರತಕ್ಕೆ ಬಂದಿರುವುದರಿಂದ ಸಿಬಿಐ ಮುಂದಿನ ತನಿಖೆ ನಡೆಸಲಿದೆ.
ಆಗಸ್ಟಾವೆಸ್ಟ್ಲ್ಯಾಂಡ್ ಹಗರಣ: ಮಧ್ಯವರ್ತಿ ಕ್ರಿಸ್ಟಿಯಾನ್ ಮೈಕೆಲ್ ಸಿಬಿಐ ವಶಕ್ಕೆ
ಮಾಜಿ ವಾಯು ಸೇನಾಪತಿ ವಿರುದ್ಧ ಆರೋಪ
ಈ ಪ್ರಕರಣದಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಚಾರ್ಚ್ ಶೀಟ್ ಹಾಕಿವೆ. ದುಬೈನಲ್ಲಿರುವ ತನ್ನದೇ ಕಂಪನಿಯಾದ ಗ್ಲೋಬಲ್ ಸರ್ವೀಸಸ್ ಎಫ್ಜಡ್ಇ ಮೂಲಕ ಕ್ರಿಶ್ಚಿಯನ್ ಮೈಕೆಲ್ ಹಣ ನೀಡಿದ್ದ. ಈ ಪ್ರಕರಣದಲ್ಲಿ ಮಾಜಿ ವಾಯು ಸೇನಾಪತಿ ಎಸ್ ಪಿ ತ್ಯಾಗಿ ಮತ್ತು ಆತನ ಸಂಬಂಧಿ ಸೇರಿದಂತೆ ಹಲವರ ವಿರುದ್ಧ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊರಿಸಲಾಗಿದೆ. ಮೈಕೆಲ್ ವಿರುದ್ಧ ಬಲವಾದ ಸಾಕ್ಷ್ಯಗಳು ಇರುವುದರಿಂದ ಭಾರತಕ್ಕೆ ಆತನನ್ನು ಹಸ್ತಾಂತರಿಸಲಾಗಿದೆ.