Nepal Gen Z Protest: ನೇಪಾಳದಲ್ಲಿ ಬೀದಿಗಿಳಿದ ಯುವ ಜನ: ಭಾರತಕ್ಕೆ ಯಾಕೆ ತಲೆಬಿಸಿ ?
Nepal Gen Z Protest: ಭಾರತದ ನೆರೆಯ ರಾಜ್ಯಗಳಲ್ಲಿ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲ್ಲೇ ಇದೆ. ನೆರೆಯ ಬಾಂಗ್ಲಾದೇಶ - ಶ್ರೀಲಂಕಾ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟದಲ್ಲಿದೆ. ಈಗಷ್ಟೇ ಈ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮರುಕಳುಹಿಸುತ್ತಿದೆ. ಇದರ ನಡುವೆ ಪಾಕಿಸ್ತಾನದಲ್ಲೂ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಂತೆ ಇಲ್ಲ. ಅಲ್ಲದೇ ಇದೀಗ ನೇಪಾಳದಲ್ಲಿ ಭಾರೀ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದು ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ಕೊಡಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ. ಇಷ್ಟಕ್ಕೂ ಈ ದೇಶದಲ್ಲಿ ಆಗುತ್ತಿರುವುದಾದರೂ ಏನು ಅದರಿಂದ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಭಾರತ ಮತ್ತು ನೇಪಾಳದ ನಡುವೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಂಬಂಧವಿದೆ. ಆದರೆ ಇದೀಗ ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಆದೇಶ ವಿರೋಧಿಸಿ ನಡೆದ ತೀವ್ರ ಸ್ವರೂಪದ ಪ್ರತಿಭಟನೆಯಲ್ಲಿ 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಲ್ಲದೇ 250ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರತಿಭಟನೆಯು ನೇಪಾಳದಲ್ಲಿ ಅಶಾಂತಿ ಹಾಗೂ ಅಭದ್ರ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಇದರ ನಡುವೆ ನೇಪಾಳದ ಪ್ರಧಾನಿ ದೇಶ ತೊರೆಯುವ ಮಾತನಾಡುತ್ತಿದ್ದು, ಇದರಿಂದ ನೇಪಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಭಾರತದ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕ ಶುರುವಾಗಿದೆ.

ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡುವುದಾಗಿ ಅಲ್ಲಿನ ಸರ್ಕಾರ ಆದೇಶ ಮಾಡಿತ್ತು. ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಆಗುವ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿನ ಯುವ ಜನಾಂಗ ಬೀದಿಗೆ ಇಳಿದು ಪ್ರತಿಭಟನೆ ಮಾಡುವುದಕ್ಕೆ ಪ್ರಾರಂಭಿಸಿದರು. ಈ ಪ್ರತಿಭಟನೆಯು ಉಗ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಇನ್ನೂ ಪ್ರತಿಭಟನೆ ಮುಂದುವರಿದಿದೆ. ಹೀಗಾಗಿ, ನೇಪಾಳ - ಭಾರತದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ನೇಪಾಳದಲ್ಲಿರುವ ಭಾರತೀಯರಿಗೂ ಎಚ್ಚರಿಕೆ ಕೊಡಲಾಗಿದೆ.
ಏನಿದು ವಿವಾದ: ಹಿಂದೆ ಮುಂದೆ ನೋಡದೆ ನೇಪಾಳ ಸರ್ಕಾರವು ತೆಗೆದುಕೊಂಡು ಆ ಒಂದು ನಿರ್ಧಾರ ನೇಪಾಳದಲ್ಲಿ ಭಾರೀ ಅಲ್ಲೋಲ - ಕಲ್ಲೋಲ ಸೃಷ್ಟಿ ಮಾಡಿದೆ. ನೇಪಾಳದಲ್ಲಿ ಅಲ್ಲಿನ ಸರ್ಕಾರವು ಸೋಷಿಯಲ್ ಮೀಡಿಯಾ ಖಾತೆಗಳಾದ ಯೂಟ್ಯೂಬ್, ಎಕ್ಸ್, ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧ ಮಾಡಿ, ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರ ಸರ್ಕಾರದ ಆದೇಶ ಮಾಡಿತ್ತು. ಈ ಏಕಾಏಕಿ ನಿರ್ಧಾರ ಅಲ್ಲಿನ ಯುವ ಜನರನ್ನು ಕೆರಳಿಸಿದೆ. ಜನ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಭಾರತಕ್ಕೆ ಯಾಕೆ ತಲೆ ಬಿಸಿ ?
ಇನ್ನು ಭಾರತಕ್ಕೆ ಇದು ಹೊಸ ತಲೆಬಿಸಿಯಾಗುವ ಸಾಧ್ಯತೆ ಇದೆ. ಯಾಕೆಂದರೆ ಭಾರತದ ಸುತ್ತಮುತ್ತಲಿನ ದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಸುಗಮವಾಗಿದ್ದರೆ. ಆ ದೇಶದೊಂದಿಗೆ ವ್ಯವಹಾರ - ಭದ್ರತೆ ಹಾಗೂ ಆಮದು - ರಫ್ತು ವಿನಿಮಯ, ಮಾಹಿತಿ ಹಂಚಿಕೆ ಹಾಗೂ ಮುಖ್ಯವಾಗಿ ಗಡಿ ಭದ್ರತೆಗೆ ನೆರವಾಗಲಿದೆ. ಆದರೆ, ಅಭದ್ರ ಪರಿಸ್ಥಿತಿ ನಿರ್ಮಾಣವಾದರೆ ಭಾರತ ಭದ್ರತೆಯ ವಿಚಾರದಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಈ ಕಾರಣಕ್ಕೆ ನೇಪಾಳದಲ್ಲಿನ ಬೆಳವಣಿಗೆಗಳನ್ನು ಭಾರತವು ಎಚ್ಚರಿಕೆಯಿಂದ ಗಮನಿಸುತ್ತಿದೆ.












Click it and Unblock the Notifications