ಭಾರತದ ಬೆನ್ನಿಗೆ ನಿಂತ ಜಗತ್ತು, ಪುಟಿನ್ ಕೊಟ್ಟರು ಅಭಯ... Pahalgam Terror Attack
ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿ ಇದೀಗ ಜಾಗತಿಕ ಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿ, ಉಗ್ರರ ವಿರುದ್ಧ ತೀವ್ರ ಆಕ್ರೋಶ ಮೊಳಗುವಂತೆ ಮಾಡಿದೆ. ಭಾರತದ ಕಿರೀಟ ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚಿರುವ ಕಾರಣಕ್ಕೆ, ಭಾರತೀಯರ ರಕ್ತ ಹರಿದಿದೆ. ಈ ವಿಚಾರವಾಗಿ ಪ್ರಪಂಚದ ಮೂಲೆ ಮೂಲೆಯಲ್ಲೂ ಆಕ್ರೋಶದ ಕಹಳೆ ಮೊಳಗಿದೆ. ಮತ್ತೊಂದು ಕಡೆ ಈ ಕೃತ್ಯ ಎಸಗಿದ ಉಗ್ರರ ರುಂಡ ಚಂಡಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿರುವ ಸಮಯದಲ್ಲೇ, ಜಗತ್ತಿನ ದೊಡ್ಡ ದೊಡ್ಡ ನಾಯಕರು ಭಾರತಕ್ಕೆ ಧೈರ್ಯ ಹೇಳಿದ್ದಾರೆ.
26 ಅಮಾಯಕರ ಸಾವು ಸಂಚಲನ ಸೃಷ್ಟಿಸಿದೆ, ಪಾಪಿ ಉಗ್ರರ ಈ ಕೃತ್ಯಕ್ಕೆ ಕಣಿವೆ ನಲುಗಿದೆ. ಹೌದು, ಜಮ್ಮು & ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದು ಅಮಾಯಕರ ಮೇಲೆ ದಾಳಿ ಮಾಡಿದ್ದಾರೆ. ಈ ಮೂಲಕ ಮತ್ತೆ ಕಣಿವೆ ರಾಜ್ಯದಲ್ಲಿ ರಕ್ತಪಾತ ಆಗಿದ್ದು, ಈ ಘಟನೆ ಭಾರತೀಯರನ್ನು ಬಡಿದೆಬ್ಬಿಸಿದೆ. ಒಂದು ಕಡೆ ಕೇಂದ್ರ ಸರ್ಕಾರ ಕೂಡ ಖಡಕ್ ಕ್ರಮವನ್ನ ಕೈಗೊಳ್ಳಲು ಮುಂದಾಗಿದೆ. ಹಾಗೇ ಇನ್ನೊಂದು ಕಡೆ ಗಡಿಯಲ್ಲಿ ಹೈಅಲರ್ಟ್ ಘೋಷಿಸಿದ್ದು, ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಇಂತಹ ಸಮಯದಲ್ಲೇ, ರಷ್ಯಾ ಅಧ್ಯಕ್ಷ ಪುಟಿನ್ ಸೇರಿ ಅಮೆರಿಕ ಅಧ್ಯಕ್ಷ ಟ್ರಂಪ್ ತನಕ ಯಾರೆಲ್ಲಾ ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ?

ಭಾರತದ ಬೆನ್ನಿಗೆ ನಿಂತ ಜಗತ್ತು
ಅಂದಹಾಗೆ ಉಗ್ರರ ದಾಳಿಯಿಂದ ಭಾರತದಲ್ಲಿ ಇದೀಗ ಭಾರಿ ದೊಡ್ಡ ಕಲಹ ಏರ್ಪಟ್ಟಿದ್ದು, ಸಾಕಷ್ಟು ಆತಂಕದ ವಾತಾವರಣ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಜಾಗತಿಕವಾಗಿ ಈಗ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ. ಪರಿಸ್ಥಿತಿಯು ಸೂಕ್ಷ್ಮವಾಗಿರುವ ಸಮಯದಲ್ಲೇ ಜಾಗತಿಕ ನಾಯಕರು ಒಂದಾಗಿದ್ದು, ಭಾರತಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಅದರಲ್ಲೂ ಜಗತ್ತಿನ ಶಕ್ತಿಶಾಲಿ ದೇಶ ರಷ್ಯಾ & ಅಮೆರಿಕ ಕೂಡ ಉಗ್ರರ ಕೃತ್ಯದ ವಿರುದ್ಧ ಗುಡುಗಿದೆ.
ವ್ಲಾದಿಮಿರ್ ಪುಟಿನ್ ಹೇಳಿದ್ದು ಏನು?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಈ ವಿಚಾರದಲ್ಲಿ ಧೈರ್ಯ ತುಂಬಿದ್ದು, ಉಗ್ರರ ದಾಳಿ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಹಾಗೇ ಉಗ್ರರ ವಿರುದ್ಧದ ಹೋರಾಟಕ್ಕೆ ಭಾರತ & ರಷ್ಯಾ ಕೈಜೋಡಿಸಲಿವೆ ಎಂಬುದನ್ನ ಕೂಡ ಹೇಳಿದ್ದಾರೆ. ಈ ಮೂಲಕ ಉಗ್ರರ ಹಿಂಸಾಚಾರದ ವಿರುದ್ಧ ರಷ್ಯಾ ಈಗ ಗುಡುಗಿದೆ.
ಹಾಗೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಯೋತ್ಪಾದಕರ ಹೀನಾಯ ಕೃತ್ಯದ ವಿರುದ್ಧ ಗುಡುಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಸಂತಾಪ ಸೂಚಿಸಿದ್ದಾರೆ. ಇಟಲಿ ಪ್ರಧಾನಿ & ಇರಾನ್ ಸೇರಿದಂತೆ ಇಸ್ರೇಲ್ ಕೂಡ ಜಮ್ಮು & ಕಾಶ್ಮೀರ ದಾಳಿಯ ಬಗ್ಗೆ ಸಂತಾಪ ಸೂಚಿಸಿದ್ದು, ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ಜಗತ್ತಿನಾದ್ಯಂತ ಜನರು ಆಗ್ರಹಿಸುತ್ತಿದ್ದಾರೆ.












Click it and Unblock the Notifications