ಹಿಂದೂಗಳ ಬಗ್ಗೆ ಪ್ರಚೋದನಾಕಾರಿ ಹೇಳಿಕೆ: ಪಾಕ್ ಸಚಿವನಿಗೆ ಮುಖಭಂಗ
Recommended Video

ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 5: ಹಿಂದೂಗಳ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ ಪಂಜಾಬ್ ನ ಮಾಹಿತಿ ಹಾಗೂ ಸಂಸ್ಕೃತಿ ಸಚಿವ ಫಯ್ಯಝುಲ್ ಹಸನ್ ಚೊಹನ್ ವಿರುದ್ಧ ಅವರದೇ ಪಕ್ಷದ ಹಿರಿಯ ಸದಸ್ಯರು ಟೀಕೆ ಮಾಡಿದ್ದಾರೆ. ಪಾಕಿಸ್ತಾನದ ಆಡಳಿತಾರೂಢ ಪಕ್ಷ ತೆಹ್ರೀಕ್-ಇ-ಇನ್ಸಾಫ್ ಗೆ ಸೇರಿದ ಸಚಿವರು ಭಾರೀ ವಿರೋಧ ಎದುರಿಸುತ್ತಿದ್ದಾರೆ.
ಕಳೆದ ತಿಂಗಳು ಸುದ್ದಿ ಮಾಧ್ಯಮದ ಜತೆಗೆ ಮಾತನಾಡುತ್ತಾ, ಹಿಂದೂಗಳು ಗೋ ಮೂತ್ರ ಸೇವಿಸುವ ಜನ ಎಂದಿದ್ದರು. ನಾವು ಮುಸ್ಲಿಮರು ಮತ್ತು ನಮಗೆ ಧ್ವಜವಿದೆ. ಮೌಲಾ ಅಲಿಯಾರ ಶೌರ್ಯದ ಧ್ವಜ ಮತ್ತು ಹಜ್ರತ್ ಉಮರಾರ ಧೈರ್ಯದ ಧ್ವಜ. ನಿಮಗೆ ಆ ಧ್ವಜಗಳಿಲ್ಲ; ಅದು ನಿಮ್ಮ ಕೈಗಳಲ್ಲಿ ಇಲ್ಲ ಎಂದಿದ್ದರು ಎಂಬುದಾಗಿ ವರದಿ ಆಗಿತ್ತು.
ನೀವು ನಮಗಿಂತ ಏಳು ಪಟ್ಟು ಹೆಚ್ಚಾಗಿದ್ದೇವೆ ಎಂಬ ಭ್ರಮೆಯಲ್ಲಿ ಇರಬೇಡಿ. ನಮ್ಮ ಬಳಿ ಇರುವುದು ನಿಮ್ಮ ಬಳಿ ಇರುವುದು ಸಾಧ್ಯವಿಲ್ಲ ಮೂರ್ತಿ ಪೂಜಕರೇ ಎಂದು ಅವರು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.

ಪಾಕಿಸ್ತಾನದ ಮಾನವ ಹಕ್ಕುಗಳ ಖಾತೆ ಸಚಿವರು ಹೇಳಿಕೆಯನ್ನು ಖಂಡಿಸಿದ್ದು, ಯಾರಿಗೂ ಯಾರದೇ ಧರ್ಮದ ಮೇಲೆ ದಾಳಿ ನಡೆಸುವ ಹಕ್ಕಿಲ್ಲ. ನಮ್ಮ ಹಿಂದೂ ನಾಗರಿಕರು ಕೂಡ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ನಮ್ಮ ಪ್ರಧಾನಿ ಸಹಿಷ್ಣುತೆ ಹಾಗೂ ಗೌರವದ ಬಗ್ಗೆ ಸಂದೇಶ ನೀಡುತ್ತಾರೆ ಮತ್ತು ನಾವು ಯಾವ ಕಾರಣಕ್ಕೆ ಧರ್ಮಗಳ ಮಧ್ಯೆ ದ್ವೇಷ ಬಿತ್ತುವ ಕೆಲಸ ಮಾಡಬಾರದು ಎಂದಿದ್ದಾರೆ.
ಇನ್ನು ಹಣಕಾಸು ಸಚಿವ ಅಸಾದ್ ಉಮರ್ ಮಾತನಾಡಿ, ಪಾಕಿಸ್ತಾನದ ಬಾವುಟ ಅಂದರೆ ಹಸಿರು ಮಾತ್ರ ಅಲ್ಲ. ಬಿಳಿ ಇಲ್ಲದೆ ಅದು ಪೂರ್ಣ ಆಗಲ್ಲ. ಆ ಬಣ್ಣ ಅಲ್ಪಸಂಖ್ಯಾತರ ಪ್ರತೀಕ ಎಂದಿದ್ದಾರೆ. ಹಿಂದೂಗಳು ಪಾಕಿಸ್ತಾನದ ಭಾಗವೇ. ತಾರತಮ್ಯ ರಹಿತ ದೇಶದ ಕನಸನ್ನು ಕಂಡಿದ್ದ ಮಹಮ್ಮದ್ ಅಲಿ ಜಿನ್ನಾ ಅವರನ್ನು ನೆನಪಿಸಿಕೊಳ್ಳಿ ಎಂದಿದ್ದಾರೆ.
ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇಕಡಾ 1.6ರಷ್ಟಿರುವ ಹಿಂದೂಗಳು ದೇಶದ ಎರಡನೇ ಅತಿ ದೊಡ್ಡ ಸಮುದಾಯ. ಎರಡನೇ ಅತಿ ಹೆಚ್ಚು ಪಾಲನೆ ಆಗುವ ಧರ್ಮ ಹಿಂದೂ ಧರ್ಮ. ಪಿಟಿಐ ಸರಕಾರದ ನ್ಯಾಷನಲ್ ಅಸೆಂಬ್ಲಿಯಲ್ಲಿ ಏಳು ಹಿಂದೂ ಸದಸ್ಯರಿದ್ದಾರೆ ಹಾಗೂ ಪಂಜಾಬ್ ಅಸೆಂಬ್ಲಿಯಲ್ಲಿ ನಾಲ್ವರು ಅಲ್ಪಸಂಖ್ಯಾತ ಸದಸ್ಯರಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಫಯ್ಯಝುಲ್ ಹಸನ್ ಚೊಹನ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications