ಕೇಂಬ್ರಿಜ್ ಅನಾಲಿಟಿಕಾ ಎಂಬ ಹೊಸ ಅಸ್ತ್ರದ ಸುತ್ತಮುತ್ತ
ಚುನಾವಣೆಯಲ್ಲಿ ರೈತರ ಆತ್ಮಹತ್ಯೆಯಿಂದ ಹಿಡಿದುಕೊಂಡು, ಉದ್ಯಮಿ ನೀರವ್ ಮೋದಿ ಭಾರತಕ್ಕೆ 11 ಸಾವಿರ ಕೋಟಿ ರುಪಾಯಿ ಟೋಪಿ ಹಾಕಿ ಪರಾರಿಯಾದ ವಿಷಯದವರೆಗೆ ರಾಜಕೀಯ ಪಕ್ಷಗಳ ಬತ್ತಳಿಕೆಯಲ್ಲಿ ಬೇಕಾದಷ್ಟು ವಿಷಯಗಳಿವೆ. ವಿರೋಧಿಗಳನ್ನು ತಿವಿಯಲು ಇವುಗಳು ಸಾಲದೆಂಬಂತೆ 'ಕೇಂಬ್ರಿಜ್ ಅನಾಲಿಟಿಕಾ' ಎಂಬ ಅಸ್ತ್ರ ಹೊಸದಾಗಿ ಸೇರಿಕೊಂಡಿದೆ.
ಭಾರತದಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬ್ಯಾಲಟ್ ಪೇಪರಿಗಿಂತ, ಇವಿಎಂಗಿಂತ, ಚುನಾವಣಾ ಪ್ರಚಾರಗಳಲ್ಲಿ ರಾಜಕಾರಣಿಗಳು ಮಾಡುವ ಹರಿತವಾದ ಮಾತುಗಳಿಗಿಂತ ಸೋಷಿಯಲ್ ಮೀಡಿಯಾದಲ್ಲಿ ಚುನಾವಣೆಯ ಯುದ್ಧ ನಡೆಯುತ್ತಿದೆ, ಸೋಷಿಯಲ್ ಮೀಡಿಯಾದಲ್ಲಿಯೇ ಚುನಾವಣೆಯನ್ನು ಗೆಲ್ಲಲಾಗುತ್ತಿದೆ.
ಫೇಸ್ ಬುಕ್ ಮಾಹಿತಿ ಸೋರಿಕೆ; ರವಿಶಂಕರ್ ಪ್ರಸಾದ್ ವರ್ಸಸ್ ರಮ್ಯಾ
ಬಿಜೆಪಿ ಮತ್ತು ಕಾಂಗ್ರೆಸ್ ಅಷ್ಟೇ ಏಕೆ ಎಲ್ಲಾ ಪಕ್ಷಗಳು ಸಾದ್ಯಂತವಾಗಿ ಮತದಾರರನ್ನು ಸೆಳೆಯಲು, ವಿರೋಧಿಗಳನ್ನು ಸೈದ್ಧಾಂತಿಕವಾಗಿ ಹಣಿದುಹಾಕಲು ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುತ್ತಿವೆ. ಇದೆಲ್ಲಕ್ಕಿಂತ ಹೊರತಾದ, ಇವೆಲ್ಲಕ್ಕಿಂತ ಆಘಾತಕಾರಿಯಾದ ಯುದ್ಧಕ್ಕಾಗಿ ಕೇಂಬ್ರಿಜ್ ಅನಾಲಿಟಿಕಾ ಬಳಕೆಯಾಗುತ್ತಿದೆಯೆ?
ಆ ಪಕ್ಷ ದತ್ತಾಂಶ ಕಳ್ಳತನ ಮಾಡುತ್ತಿದೆಯೆಂದು ಈ ಪಕ್ಷ, ಈ ಪಕ್ಷ ಕೇಂಬ್ರಿಜ್ ಅನಾಲಿಟಿಕಾದಂಥ ಕಾನೂನು ಬಾಹಿರ ಕಂಪನಿಯೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು, ಜನರನ್ನು ಬೇಸ್ತು ಬೀಳಿಸುತ್ತಿದೆ ಎಂದು ಆ ಪಕ್ಷಗಳು ಕಿತ್ತಾಡಿಕೊಳ್ಳುತ್ತಿವೆ. ಸತ್ಯ ಯಾವುದು, ಮಿಥ್ಯ ಯಾವುದು ಎಂಬುದು ವಿಚಾರಣೆಯಿಂದ ತಿಳಿದುಬರಬೇಕಿದೆ. ಅಲ್ಲಿಯವರೆಗೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ತಟಸ್ಥರಾಗಿ ಉಳಿದಿರುವವರಿಗೆ ಸಖತ್ ಮಜಾ.
ಏನಿದು ಕೇಂಬ್ರಿಜ್ ಅನಾಲಿಟಿಕಾ ಕಂಪನಿ?
ಕೇಂಬ್ರಿಜ್ ಅನಾಲಿಟಿಕಾ ಎಂಬುದು ರಾಜಕೀಯ ಪಕ್ಷಗಳಿಗಾಗಲಿ, ಮತ್ತಾವುದೇ ಸಂಸ್ಥೆಗಳಿಗಾಗಲಿ, ಫೇಸ್ ಬುಕ್ ನಂಥ ಸಂಸ್ಥೆಗಳಿಂದ ಭಾರೀ ಪ್ರಮಾಣದಲ್ಲಿ ಜನರ/ಮತದಾರರ ದತ್ತಾಂಶ ಸಂಗ್ರಹಿಸಿ, ಅವರ ವರ್ತನೆಯನ್ನು ಅಧ್ಯಯನ ಮಾಡಿ, ಮತದಾರರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುವ ಸೇವೆ ಒದಗಿಸುವ ಸಂಸ್ಥೆ. ಇದು ತನ್ನದೇ ವೆಬ್ ಸೈಟಿನಲ್ಲಿ ಹೇಳಿಕೊಂಡಿರುವ ಪ್ರಕಾರ, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ಜೆಡಿಯು ಮುಂತಾದ ಪಕ್ಷಗಳಿಗೆ ತನ್ನ ಸೇವೆಯನ್ನು ಒದಗಿಸಿದೆ.
ಲಂಡನ್ ನಲ್ಲಿ ಈ ಸಂಸ್ಥೆಯ ಮುಖ್ಯ ಕಚೇರಿ ಇದ್ದು, ಅಲೆಕ್ಸಾಂಡರ್ ನಿಕ್ಸ್ ಎಂಬುವವರು ಇದರ ಸಂಸ್ಥಾಪಕ. ಇದರ ಮೇಲಿರುವ ಆರೋಪನೇವೆಂದರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಫೇಸ್ ಬುಕ್ ನಿಂದ ಕೋಟ್ಯಂತರ ಅಮೆರಿಕನ್ನರ ದತ್ತಾಂಶಗಳನ್ನು ಸಂಗ್ರಹಿಸಿ, ಅವರನ್ನು ಅಭ್ಯಸಿಸಿ, ಮತದಾರ ಭಾವನೆಗಳೊಂದಿಗೆ ಆಟವಾಡಿ ಅವರನ್ನು ಮರಳು ಮಾಡಿ, ಟ್ರಂಪ್ ಅವರಿಗೆ ಮತ ಹಾಕುವಂತೆ ಪುಸಲಾಯಿಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿತ್ತು.
ಯಾರ್ಯಾರೊಂದಿಗೆ ಡೀಲ್ ಮಾಡಿಕೊಂಡಿದೆ
ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ, ಯುಕೆಯ ಅಲೆಕ್ಸಾಂಡರ್ ಕೋಗನ್ ಎಂಬುವವನ ಜೊತೆ ಡೀಲ್ ಮಾಡಿಕೊಂಡು, ಆಪ್ ಸೃಷ್ಟಿಸಿ ಅಮೆರಿಕದ ಮತದಾರರ ಬಗ್ಗೆ ಸಾಕಷ್ಟು ವಿವರಗಳನ್ನು ಕಲೆಹಾಕಿತ್ತು. ಹಲವಾರು ಅಮೆರಿಕನ್ನರಿಗೆ ಹಣವನ್ನೂ ನೀಡಲಾಗಿತ್ತು. ಜೊತೆಗೆ ಅವರ ಫೇಸ್ ಬುಕ್ ಸ್ನೇಹಿತರಿಗೆ ಸಂಬಂಧಿಸಿದ ಬಹುಮುಖ್ಯವಾದ ದತ್ತಾಂಶಗಳನ್ನು ಅವರ ಅನುಮತಿ ಕೂಡ ಕೂಡ ಪಡೆಯಲಾಗಿತ್ತು.
ಈ ಎಲ್ಲ ದತ್ತಾಂಶಗಳನ್ನು ಬಳಸಿಕೊಂಡು, ಮತ ಹಾಕುವಾಗ ಜನರ ಅಭಿಪ್ರಾಯಗಳನ್ನು ಹೇಗೆ ಬದಲಿಸಬೇಕು, ಅವರನ್ನು ಹೇಗೆ ಮರಳು ಮಾಡಬಹುದು ಎಂಬುದರ ವಿವರ ನೀಡುವಂಥ ಸಾಫ್ಟ್ ವೇರ್ ಒಂದನ್ನು ಅಭಿವೃದ್ಧಿಪಡಿಸಲಾಗಿತ್ತು. ಈ ಎಲ್ಲ ಬಂಡವಾಳವನ್ನು ಬಯಲು ಮಾಡಿದ್ದು ಯುಕೆಯ ಮತ್ತೊಬ್ಬ ವಿಸಲ್ ಬ್ಲೋವರ್ ಕ್ರಿಸ್ಟೋಫರ್ ವೇಲೀ ಎಂಬುವವರು. ಆದರೆ, ಈ ಎಲ್ಲ ಆರೋಪಗಳನ್ನು ನಿಕ್ಸ್ ಅವರು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ.
ಬಿಜೆಪಿಯಿಂದಲೇ 'ಕೇಂಬ್ರಿಡ್ಜ್ ಅನಾಲಿಟಿಕಾ' ಬಳಕೆ:ಕಾಂಗ್ರೆಸ್ ತಿರುಗೇಟು
ಫೇಸ್ ಬುಕ್ ನಿಂದ ಕೇಂಬ್ರಿಜ್ ನಿಷೇಧ
ಕೋಟ್ಯಂತರ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಅವರ ಅನುಮತಿಯಿಲ್ಲದೆ ಹೆಕ್ಕಲಾಗಿದೆ ಮತ್ತು ದುರ್ಬಳಕೆ ಮಾಡಲಾಗಿದೆ ಎಂಬ ಸಂಗತಿ ಬಯಲಾಗುತ್ತಿದ್ದಂತೆ, ಕೇಂಬ್ರಿಜ್ ಅನಾಲಿಟಿಯಾ ಸಂಸ್ಥೆಯನ್ನು ಫೇಸ್ ಬುಕ್ ನಿಷೇಧಿಸಿತು. ಈ ಕುರಿತು ಸಮಜಾಯಿಷಿ ನೀಡಿದ ಫೇಸ್ ಬುಕ್, ಫೇಸ್ ಬುಕ್ ಮಾಹಿತಿಯನ್ನು ಬಳಸಿಕೊಳ್ಳಲು ಕೋಗನ್ ಅವರಿಗೆ ಅನುಮತಿ ನೀಲಾಗಿತ್ತು ಎಂದು ಹೇಳಿದೆ. ಆದರೆ, ಆ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು ಒಪ್ಪಂದವನ್ನು ಕೋಗನ್ ಮುರಿದಿದ್ದಾರೆ ಎಂದು ಆರೋಪಿಸಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಐಟಿ ಮಂತ್ರಿ ರವಿ ಶಂಕರ್ ಪ್ರಸಾದ್ ಅವರು ಹೇಳಿಕೆ ನೀಡಿದ್ದು, ರಾಜಕೀಯ ದುರುದ್ದೇಶಕ್ಕಾಗಿ ಕೋಟ್ಯಂತರ ಭಾರತೀಯ ಬಳಕೆದಾರರ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಂಡಿದ್ದೇ ಆದಲ್ಲಿ, ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝೂಕರ್ಬರ್ಗ್ ಅವರನ್ನು ಕರೆಸಿ ವಿಚಾರಿಸಲು ಕೂಡ ಹಿಂಜರಿಯುವುದಿಲ್ಲ ಎಂದಿದ್ದಾರೆ. ಸದ್ಯಕ್ಕೆ ಈ ವಿಚಾರ ರಾಜಕೀಯ ಅಂಗಳದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ರಮ್ಯಾ ಅವರು ರವಿ ಶಂಕರ್ ಪ್ರಸಾದ್ ಅವರು ಬಿಜೆಪಿ ಮೇಲೆಯೇ ಪ್ರತ್ಯಾರೋಪ ಮಾಡಿ ಮಾತಿನ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಕೇಂಬ್ರಿಜ್ ನತ್ತ ಕಾಂಗ್ರೆಸ್ ಕೈಚಾಚಿದೆಯಾ?
ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯ ಸೇವೆಯನ್ನು ಪಡೆದುಕೊಂಡು, ಭಾರತೀಯ ಜನತಾ ಪಕ್ಷ 2014ರ ಲೋಕಸಭೆ ಚುನಾವಣೆಯಲ್ಲಿ ಅನೈತಿಕವಾಗಿ ಜನರನ್ನು ಸೋಷಿಯಲ್ ಮೀಡಿಯಾ ಮೂಲಕ ಮರಳು ಮಾಡಿ ಬಹುಮತ ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ಆರೋಪವನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿ ಹಾಕಿದ್ದು, 2019ರ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವೇ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯ ಜೊತೆ ಕೈಜೋಡಿಸಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಕಾಂಗ್ರೆಸ್ ಪಕ್ಷ 900 ಮಿಲಿಯನ್ ಭಾರತೀಯರ ದತ್ತಾಂಶವನ್ನು ಪಡೆದುಕೊಳ್ಳಲು ಮತ್ತು ರಾಹುಲ್ ಗಾಂಧಿಯವರನ್ನು ಮುಂದಿನ ಪ್ರಧಾನಿಯಾಗಿ ಬಿಂಬಿಸಲು ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಗೆ 500ರಿಂದ 600 ಕೋಟಿ ರುಪಾಯಿಯನ್ನು ಈಗಾಗಲೆ ನೀಡಿದೆ ಎಂದು ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ. ಇದರಲ್ಲಿ ಎಷ್ಟು ಸತ್ಯಾಂಶವಿದೆಯೋ ವಿಚಾರಣೆಯಿಂದಲೇ ತಿಳಿದುಬರಬೇಕಿದೆ.