ಯಾವುದೇ ದೇಶದ ಆಂತರಿಕ ವಿಚಾರದಲ್ಲಿ ಬಾಹ್ಯ ಪ್ರಭಾವ ನಾವು ಸಹಿಸಲ್ಲ: ಮೋದಿ, ಪುಟಿನ್
ಯಾವುದೇ ದೇಶದ ಆಂತರಿಕ ವಿಷಯದಲ್ಲಿ 'ಬಾಹ್ಯ ಪ್ರಭಾವ'ವನ್ನು ಭಾರತ ಹಾಗೂ ರಷ್ಯಾ ವಿರೋಧಿಸಿವೆ. ಬುಧವಾರದಂದು ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಈ ಬಗ್ಗೆ ಮಾತನಾಡಿದ್ದಾರೆ. ವ್ಯಾಪಾರ, ಹೂಡಿಕೆ, ತೈಲ ಹಾಗೂ ಅನಿಲ, ಅಣು ಶಕ್ತಿ, ರಕ್ಷಣೆ, ಬಾಹ್ಯಾಕಾಶ ಹಾಗೂ ಸಾಗರ ಸಂಪರ್ಕ ಕ್ಷೇತ್ರಗಳ ಸಹಕಾರದ ಬಗ್ಗೆ ಚರ್ಚೆ ನಡೆಸಿದರು.
ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ರಷ್ಯಾದಲ್ಲಿ ಇದ್ದಾರೆ. ಅವರು ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ (ಇಇಎಫ್) ಭಾಗವಹಿಸಲಿದ್ದಾರೆ. "ಯಾವುದೇ ದೇಶದ ಆಂತರಿಕ ವಿಚಾರದಲ್ಲಿ ಬಾಹ್ಯ ಪ್ರಭಾವವನ್ನು ನಾವು ವಿರೋಧಿಸುತ್ತೇವೆ" ಎಂದು ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಪುಟಿನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಭಾರತ ಸರಕಾರದ ತೀರ್ಮಾನಕ್ಕೆ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರ ಹೇಳಿಕೆ ಪ್ರಾಮುಖ್ಯ ಪಡೆದುಕೊಂಡಿದೆ. ಈ ವಿಚಾರದಲ್ಲಿ ಭಾರತವನ್ನು ರಷ್ಯಾ ಬೆಂಬಲಿಸಿದ್ದು, ಭಾರತೀಯ ಸಂವಿಧಾನದ ವ್ಯಾಪ್ತಿಯೊಳಗೆ ಇದೆ ಎಂದಿದೆ.

ಇಬ್ಬರೂ ನಾಯಕರು ನಿಯೋಗ ಮಟ್ಟದ ಮಾತುಕತೆಯನ್ನು ಭಾರತ- ರಷ್ಯಾ ಇಪ್ಪತ್ತನೇ ವಾರ್ಷಿಕ ಸಮಾವೇಶದಲ್ಲಿ ನಡೆಸಿದರು. ಇದಕ್ಕೆ ಮುನ್ನ ಹಡಗೊಂದರಲ್ಲಿ ಎರಡು ಗಂಟೆಗಳ ಕಾಲ ಮಾತನಾಡಿದರು. ಭಾರತ- ರಷ್ಯಾ ಮಧ್ಯದ ಸಂಬಂಧ ಬಲವರ್ಧನೆಗೆ ಈ ಭೇಟಿ ಮಹತ್ವದ್ದೆನಿಸಿದೆ.
ಎರಡೂ ಕಡೆಯಿಂದ ಹದಿನೈದು ಒಪ್ಪಂದಗಳಿಗೆ ಸಹಿ ಹಾಕಲಾಯಿತು. "ಈ ಸಹಕಾರದ ಮೂಲಕ ಎರಡೂ ದೇಶಗಳ ಮಧ್ಯದ ಸಂಬಂಧ ಮತ್ತೊಂದು ಎತ್ತರಕ್ಕೆ ಒಯ್ದಿದ್ದೇವೆ. ಇದು ಸಂಖ್ಯಾ ದೃಷ್ಟಿಯಿಂದ ಮಾತ್ರ ಅಲ್ಲ, ಗುಣಮಟ್ಟದ ದೃಷ್ಟಿಯಿಂದಲೂ ಉತ್ತಮ ಫಲಿತಾಂಶ" ಎಂದಿದ್ದಾರೆ ಮೋದಿ.
ರಷ್ಯಾದಿಂದ ಅತ್ಯುನ್ನತ ನಾಗರಿಕ ಗೌರವಕ್ಕೆ ತನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನರೇಂದ್ರ ಮೋದಿ ಅವರು ಅಧ್ಯಕ್ಷ ಪುಟಿನ್ ಹಾಗೂ ರಷ್ಯಾದ ಜನತೆಗೆ ಧನ್ಯವಾದ ಹೇಳಿದರು. ಇದು ನೂರಾಮೂವತ್ತು ಕೋಟಿ ಭಾರತೀಯರಿಗೆ ಸಿಕ್ಕ ಗೌರವ ಎಂದರು.
ಕಳೆದ ಏಪ್ರಿಲ್ ನಲ್ಲಿ ರಷ್ಯಾ ಸರಕಾರವು ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಗೌರವವನ್ನು ಘೋಷಣೆ ಮಾಡಿತ್ತು.












Click it and Unblock the Notifications