ಭಾರತದ ರಾಯಭಾರಿ ವಜಾಗೊಳಿಸಿದ ಉಕ್ರೇನ್ ಅಧ್ಯಕ್ಷ
ಕೀವ್, ಜುಲೈ 10; ಭಾರತದಲ್ಲಿರುವ ಉಕ್ರೇನ್ ರಾಯಭಾರಿಯನ್ನು ವಜಾಗೊಳಿಸಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಆದೇಶ ಹೊರಡಿಸಿದ್ದಾರೆ. ಒಟ್ಟು 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಲಾಗಿದೆ.
ವೊಲೊಡಿಮಿರ್ ಜೆಲೆನ್ಸ್ಕಿ ವೆಬ್ಸೈಟ್ನಲ್ಲಿ ಕುರಿತು ಪ್ರಕಟಣೆ ಹೊರಡಿಸಲಾಗಿದೆ. ಭಾರತ, ಜರ್ಮನಿ, ಜೆಕ್ಗಣರಾಜ್ಯ, ನಾರ್ವೆ ಮತ್ತು ಹಂಗೇರಿ ದೇಶದ ಉಕ್ರೇನ್ ರಾಯಭಾರಿಗಳನ್ನು ವಜಾಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಯಾವುದೇ ಸೂಚನೆ ನೀಡಿದೆ 5 ದೇಶಗಳ ರಾಯಭಾರಿಗಳನ್ನು ವೊಲೊಡಿಮಿರ್ ಜೆಲೆನ್ಸ್ಕಿ ವಜಾಗೊಳಿಸಿದ್ದಾರೆ. ಇನ್ನೂ ರಾಯಭಾರಿಗಳ ವಜಾಕ್ಕೆ ನಿಖರವಾದ ಕಾರಣವನ್ನೂ ಸಹ ನೀಡಿಲ್ಲ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರೆದಿದೆ. ಯುದ್ಧ ಆರಂಭವಾದ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹಲವು ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಯುದ್ಧ ಆರಂಭವಾದ ಬಳಿಕ ಭಾರತ ಉಕ್ರೇನ್ನಲ್ಲಿ ಸಿಲುಕಿದ್ದ ತನ್ನ ಪ್ರಜೆಗಳನ್ನು ಏರ್ ಲಿಫ್ಟ್ ಮಾಡಿತ್ತು.
ರಷ್ಯಾ ದಾಳಿ ತೀವ್ರ; ಈ ವರ್ಷದ ಫೆಬ್ರವರಿಯಲ್ಲಿ ಆರಂಭವಾದ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಶನಿವಾರ ರಷ್ಯಾ ಪಡೆಗಳು ಉಕ್ರೇನ್ ಮೇಲಿನ ದಾಳಿ ತೀವ್ರಗೊಳಿಸಿವೆ. ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 12 ಜನರು ಮೃತಪಟ್ಟಿದ್ದಾರೆ.

ಬುಧವಾರದಿಂದ ರಷ್ಯಾ ಉಕ್ರೇನ್ ಮೇಲಿನ ದಾಳಿಯನ್ನು ಹೆಚ್ಚಿಸಿದೆ. ಅವ್ದಿವ್ಕಾ, ಸ್ಲೊವಿಯಾನ್ ಸ್ಕ್, ಕ್ರಸ್ನೊರಿವ್ಕಾ, ಕುರಖೋವ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೆಲ್ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಹೇಳಿದೆ.
ಶುಕ್ರವಾರ ತಡರಾತ್ರಿ ಉಕ್ರೇನ್ನ ಎರಡನೇ ಅತಿದೊಡ್ಡ ನಗರ ಹಾರ್ಕಿವ್ ಮೇಲೆ ರಷ್ಯಾ ಪಡೆಗಳು ಕ್ಷಿಪಣಿ ದಾಳಿ ನಡೆಸಿವೆ. ಇದರಿಂದಾಗಿ ವಿಶ್ವವಿದ್ಯಾಲಯದ ಕಟ್ಟಡ ಧ್ವಂಸಗೊಂಡಿದೆ, ಮೂವರು ಗಾಯಗೊಂಡಿದ್ದಾರೆ ಎಂದು ಹಾರ್ಕಿವ್ ಮೇಯರ್ ಹೇಳಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧ; ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತಟಸ್ಥ ನಿಲುವನ್ನು ತಳೆದಿದೆ. ಈ ಕುರಿತು ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಯುದ್ಧದಲ್ಲಿ ನಿರತ ಉಭಯ ರಾಷ್ಟ್ರಗಳೊಂದಿಗೆ ಭಾರತ ಹಲವು ಆಯಾಮಗಳಲ್ಲಿ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಇದೇ ಕಾರಣಕ್ಕೆ ಯುದ್ಧದ ಕುರಿತು ಯಾರ ಪರ, ವಿರೋಧವೂ ನಾವು ನಿಲುವು ತೆಗೆದುಕೊಂಡಿಲ್ಲ" ಎಂದು ತಿಳಿಸಿದ್ದರು.
ಭಾರತದ ಸಂಸತ್ ಅಧಿವೇಶನದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಹಾಗೂ ಭಾರತ ಸರ್ಕಾರ ಪ್ರಜೆಗಳ ರಕ್ಷಣೆಗೆ ಕೈಗೊಂಡ 'ಆಪರೇಷನ್ ಗಂಗಾ' ಕುರಿತು ಚರ್ಚೆ ನಡೆದಿತ್ತು.
ಸಂಸತ್ತಿನಲ್ಲಿ ನಡೆದ ಆರೋಗ್ಯಕರ ಚರ್ಚೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ತಮ್ಮ ಮುಕ್ತ ಅಭಿಪ್ರಾಯ ಮತ್ತು ಅಭಿವ್ಯಕ್ತಿಯಿಂದ ಸದನದ ಚರ್ಚೆಯನ್ನು ಶ್ರೀಮಂತಗೊಳಿಸಿದ ಎಲ್ಲಾ ಸಂಸದರಿಗೆ ಅವರು ಕೃತಜ್ಞತೆಗಳನ್ನು ತಿಳಿಸಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಮೋದಿ, "ಕಳೆದ ಕೆಲವು ದಿನಗಳಿಂದ ಸಂಸತ್ತಿನ ಉಭಯ ಸದನಗಳು ಉಕ್ರೇನ್ ಯುದ್ಧ ಪರಿಸ್ಥಿತಿ ಮತ್ತು ಆಪರೇಷನ್ ಗಂಗಾ ಮೂಲಕ ನಮ್ಮ ನಾಗರಿಕರನ್ನು ಮರಳಿ ಕರೆತರುವ ಭಾರತದ ನಿರಂತರ ಪ್ರಯತ್ನಗಳ ಕುರಿತು ಆರೋಗ್ಯಕರ ಚರ್ಚೆಗೆ ಸಾಕ್ಷಿಯಾಗಿವೆ. ಈ ಚರ್ಚೆಯನ್ನು ತಮ್ಮ ಅಭಿಪ್ರಾಯಗಳೊಂದಿಗೆ ಪುಷ್ಟೀಕರಿಸಿದ ಎಲ್ಲಾ ಸಂಸದ ಸಹೋದ್ಯೋಗಿಗಳಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದರು.
"ವಿದೇಶಾಂಗ ನೀತಿಯ ವಿಷಯಗಳಿಗೆ ಬಂದಾಗ ಉಭಯಪಕ್ಷೀಯತೆ ಹೇಗೆ ಇದೆ ಎಂಬುದನ್ನು ಶ್ರೀಮಂತ ಮಟ್ಟದ ಚರ್ಚೆಗಳು ಮತ್ತು ರಚನಾತ್ಮಕ ಸಮಾಲೋಚನೆಗಳೇ ವಿವರಿಸಿವೆ. ಅಂತಹ ದ್ವಿಪಕ್ಷೀಯತೆಯು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಉತ್ತಮ ಬೆಳವಣಿಗೆಯಾಗಿದೆ" ಎಂದು ವಿವರಿಸಿದ್ದರು.
"ನಮ್ಮ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಅಪಾರ ಕಾಳಜಿ ವಹಿಸುವುದು ನಮ್ಮ ಸಾಮೂಹಿಕ ಕರ್ತವ್ಯವಾಗಿದೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ನಮ್ಮ ಜನರು ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲ ಎಂಬುದನ್ನು ಖಚಿತಪಡಿಸಲು ಭಾರತ ಸರ್ಕಾರವು ಎಂದಿಗೂ ಬಿಡುವುದಿಲ್ಲ ಎಂಬುದನ್ನು ಆಪರೇಷನ್ ಗಂಗಾ ಮತ್ತೆ ಸಾಬೀತು ಮಾಡಿದೆ" ಎಂದು ಕಾರ್ಯಾಚರಣೆ ಬಗ್ಗೆ ಮಾತನಾಡಿದ್ದರು.












Click it and Unblock the Notifications