'ಪಾಕ್ ತೊರೆದು ಹೊರಟುಬಿಡಿ..' ನಾಗರಿಕರಿಗೆ ಅಮೆರಿಕ ಸಲಹೆ- ಮಹಾಯುದ್ಧದ ಮುನ್ಸೂಚನೆ?
ಪಾಕಿಸ್ತಾನದ 15 ನಗರಗಳ ಮೇಲೆ ಭಾರತವು ಡ್ರೋನ್ ದಾಳಿ ನಡೆಸಿದೆ. ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕವು ತನ್ನ ನಾಗರಿಕರಿಗೆ ಈ ಸಲಹೆ ನೀಡಿದೆ. ಲಾಹೋರ್ ಸೇರಿದಂತೆ ಹಲವು ನಗರಗಳಲ್ಲಿ ವಾಸಿಸುತ್ತಿರುವ ಯುಎಸ್ ನಾಗರಿಕರು ದೇಶ ತೊರೆಯಬೇಕೆಂದು ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹೇಳಿಕೆ ನೀಡಿದೆ. ಸಂಘರ್ಷ ನಡೆಯುತ್ತಿರುವ ಪ್ರದೇಶಗಳನ್ನು ಕೂಡಲೇ ತೊರೆಯಬೇಕು, ಒಂದು ವೇಳೆ ನಾಗರಿಕರು ಸುರಕ್ಷಿತವಾಗಿ ಹೊರಡಲು ಸಾಧ್ಯವಾಗದಿದ್ದರೆ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯವನ್ನಾದರೂ ಪಡೆಯಬೇಕು ಅಮೆರಿಕ ತಿಳಿಸಿದೆ.
ಡ್ರೋನ್ಗಳು ಹಾಗೂ ಕ್ಷಿಪಣಿಗಳನ್ನು ಬಳಸಿಕೊಂಡು ಉತ್ತರ ಭಾರತದ ಹಲವು ನಗರಗಳ ಮೇಲೆ ಪಾಕಿಸ್ತಾನ ದಾಳಿಗೆ ಯತ್ನ ನಡೆಸಿದೆ ಎಂದು ಭಾರತ ಹೇಳಿದೆ. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಡ್ರೋನ್ ದಾಳಿ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಮೆರಿಕವು ತನ್ನ ನಾಗರಿಕರಿಗೆ ಸಲಹೆಯನ್ನು ನೀಡಿದೆ.

'ಭಯೋತ್ಪಾದನಾ ಕೃತ್ಯ ಮತ್ತು ಸಶಸ್ತ್ರ ಸಂಘರ್ಷಗಳು ಜರುಗುವ ಸಾಧ್ಯತೆಗಳು ದಟ್ಟವಾಗಿದೆ. ಭಾರತ ಹಾಗೂ ಪಾಕಿಸ್ತಾನ ಗಡಿ ಮತ್ತು ನಿಯಂತ್ರಣ ರೇಖೆಯ ಸಮೀಪವಿರುವ ಪ್ರದೇಶಗಳಿಗೆ ಪ್ರಯಾಣಿಸುವುದು ಸೂಕ್ತವಲ್ಲ. ಒಂದು ವೇಳೆ ನೀವು ಸುರಕ್ಷಿತವಲ್ಲದ ಸ್ಥಳಗಳಲ್ಲಿದ್ದರೆ ಅಲ್ಲಿಂದ ಹೊರಟುಬಿಡಿ' ಎಂದು ಅಮೆರಿಕ ಹೇಳಿದೆ.
'ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಸಂಘರ್ಷ ದೊಡ್ಡದಾಗುತ್ತಲೇ ಇದೆ. ನಾವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇಸ್ಲಾಮಾಬಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಕರಾಚಿ, ಲಾಹೋರ್ ಮತ್ತು ಪೇಶಾವರದಲ್ಲಿರುವ ಕಾನ್ಸುಲೇಟ್ಗಳು ನಿಮಗೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ದವಾಗಿವೆ' ಎಂದು ಅಮೆರಿಕ ತಿಳಿಸಿದೆ.
ಆಪರೇಷನ್ ಸಿಂಧೂರ
ಬುಧವಾರ ಬೆಳಗಿನ ಜಾವ ಭಾರತವು ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 70 ರಿಂದ 100 ಉಗ್ರರು ಹತ್ಯೆಯಾಗಿದ್ದಾರೆಂದು ಭಾರತೀಯ ಸೇನೆ ತಿಳಿಸಿದೆ. ಈ ದಾಳಿ ಬಳಿಕ ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿದೆ ಎಂದು ಭಾರತ ಹೇಳಿದೆ. ಇದರಲ್ಲಿ ಮೂವರು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ಸೇನೆ ನೀಡಿದೆ.
ಲಾಹೋರ್, ಕರಾಚಿ, ರಾವಲಪಿಂಡಿ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಗುರುವಾರ ಭಾರತ ಡ್ರೋನ್ ದಾಳಿ ನಡೆಸಿದೆ. ರಾವಲಪಿಂಡಿಯ ಕ್ರಿಕೆಟ್ ಸ್ಟೇಡಿಯಂ ಮೇಲೆ ದಾಳಿ ನಡೆದಿದ್ದು, ಇಂದು ನಡೆಯಲಿರುವ ಪಿಎಸ್ಎಲ್ ಪಂದ್ಯವನ್ನು ರದ್ದು ಮಾಡಲಾಗಿದೆ. ಈ ಮೂಲಕ ಆಪರೇಷನ್ ಸಿಂಧೂರ ಮುಂದುವರಿದಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.












Click it and Unblock the Notifications