3ನೇ ಮಹಾಯುದ್ಧ ತಡೆಯಲು ವಿಶ್ವಸಂಸ್ಥೆ ಎಂಟ್ರಿ, ಇಸ್ರೇಲ್ ನಿರ್ಧಾರವೇನು?
ಕೆಲವೇ ಕೆಲವು ದಿನಗಳ ಹಿಂದಷ್ಟೇ ಆ ನಗರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ರಾರಾಜಿಸುತ್ತಿದ್ದವು. ಜನ ತಮ್ಮ ದೈನಂದಿನ ಜೀವನದಲ್ಲಿ ಬ್ಯೂಸಿ ಆಗಿದ್ದರು. ಆದರೆ ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತಿರುವಾಗ, ಕೋಳಿ ಜಗಳವೊಂದು ಆರಂಭವಾಗಿತ್ತು.
Recommended Video
ಸಣ್ಣ ಗಲಾಟೆ ವಿಕೋಪಕ್ಕೆ ಹೋಗಿ ಕೇವಲ 1 ವಾರದ ಅಂತರದಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಘರ್ಷಣೆಗೆ ಬಲಿಯಾದರು. ಹೌದು, ನಾವು ಹೇಳುತ್ತಿರುವುದು ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ನಡುವಿನ ಹಿಂಸಾಚಾರದ ಬಗ್ಗೆ.
ಸುಮಾರು 1 ವಾರಗಳಿಂದ ಎರಡೂ ರಾಷ್ಟ್ರಗಳು ಹಲ್ಲುಕಚ್ಚಿ ಅಖಾಡಕ್ಕೆ ಇಳಿದಿವೆ. ಒಂದು ಕಡೆ ಇಸ್ರೇಲ್ ಸೇನೆ ದಾಳಿ ನಡೆಸುತ್ತಿದ್ದರೆ, ಮತ್ತೊಂದು ಕಡೆ ಪ್ಯಾಲೆಸ್ತೇನ್ ಕಡೆ ಹಮಾಸ್ ಉಗ್ರರ ಗ್ಯಾಂಗ್ ಯುದ್ಧದ ಸಾರಥ್ಯ ವಹಿಸಿದೆ. ಎಲ್ಲದರ ಪರಿಣಾಮ ಗಾಜಾ ಪಟ್ಟಿ ಅಕ್ಷರಶಃ ನರಕ ನರಕವಾಗಿದೆ.
ನೂರಾರು ಜನರ ಹೆಣಗಳು ಬೀದಿ ಬೀದಿಯಲ್ಲೇ ಬಿದ್ದಿವೆ. ಇಷ್ಟಾದರೂ ಯುದ್ಧವನ್ನು ನಿಲ್ಲಿಸುವ ಮಾತು ಕೇಳಿಬರುತ್ತಿಲ್ಲ. ಇದೀಗ ಮಧ್ಯಪ್ರವೇಶ ಮಾಡಿರುವ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್, ಗಾಜಾ ನಗರದ ಹಿಂಸಾಚಾರ ಖಂಡಿಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮಾಧ್ಯಮ ಕಚೇರಿಗಳು ಧ್ವಂಸ
ಪ್ಯಾಲೆಸ್ತೇನ್ ಭಾಗದಲ್ಲಿ ಕುಳಿತು ಉಗ್ರರ ಗ್ಯಾಂಗ್ ಮಾಡಿರುವ ತಪ್ಪಿಗೆ ಇಸ್ರೇಲ್ ರಾಕೆಟ್ ಮಳೆಗರೆಯುತ್ತಿದೆ. ಅದರಲ್ಲೂ ಗಾಜಾ ಪಟ್ಟಿಯ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಕಚೇರಿಗಳಿದ್ದ 13 ಮಹಡಿಯ ಬೃಹತ್ ಬಿಲ್ಡಿಂಗ್ ದ್ವಂಸ ಮಾಡಿದೆ. ಈ ಬಗ್ಗೆ ಗುಟೆರಸ್ ಗುಟುರು ಹಾಕಿದ್ದು, ಗಾಜಾದಲ್ಲಿ ಮಾಧ್ಯಮ ಸಂಸ್ಥೆ ಕಚೇರಿಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿದ್ದಾರೆ. ಜನವಸತಿ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿ ಬೇಸರ ತರಿಸಿದೆ ಎಂದಿದ್ದಾರೆ. ಅಲ್ಲದೇ ಹೀಗೆ ನಾಗರಿಕರು ಹಾಗೂ ಮಾಧ್ಯಮಗಳ ಕಚೇರಿ ಗುರಿಯಾಗಿಸಿ ದಾಳಿ ನಡೆಸುವುದು ಅಂತಾರಾಷ್ಟ್ರೀಯ ಕಾಯ್ದೆ ಉಲ್ಲಂಘನೆ ಎಂದು ಗುಟೆರಸ್ ವಾರ್ನಿಂಗ್ ಕೊಟ್ಟಿದ್ದಾರೆ.

3ನೇ ಮಹಾಯುದ್ಧಕ್ಕೆ ನಾಂದಿ..?
ಜಗತ್ತು ಕೊರೊನಾ ಕಿಚ್ಚಿನಲ್ಲಿ ಬೇಯುತ್ತಿದ್ದರೆ ಮಧ್ಯಪ್ರಾಚ್ಯ ಕೋಮು ಘರ್ಷಣೆಯಲ್ಲಿ ತೊಡಗಿದೆ. ಮತ್ತೊಂದೆಡೆ ಇಸ್ರೇಲ್-ಪ್ಯಾಲೆಸ್ತೇನ್ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿರುವುದನ್ನು ನೋಡಿದರೆ 3ನೇ ಮಹಾಯುದ್ಧದ ಭೀತಿ ಆವರಿಸುತ್ತಿದೆ. ಏಕೆಂದರೆ ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಸ್ರೇಲ್-ಪ್ಯಾಲೆಸ್ತೇನ್ ಕಿತ್ತಾಟ 3ನೇ ಮಹಾಯುದ್ಧದ ಆತಂಕವನ್ನು ತಂದೊಡ್ಡಿದೆ. ಪರಸ್ಪರ ರಾಕೆಟ್ ದಾಳಿಗೆ ಎರಡೂ ದೇಶಗಳು ಮುಂದಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಗಲಾಟೆ ಶುರುವಾಗಿದ್ದು ಹೇಗೆ..?
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಘರ್ಷಣೆ ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರೆ, 24 ಮಂದಿ ಜೀವ ಕಳೆದುಕೊಂಡಿದ್ದಾರೆ.

ಶಾಂತಿ ನೆಲೆಸುವುದೇ ಇಲ್ವಾ..?
ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಇವರಿಬ್ಬರ ಕಿತ್ತಾಟದಿಂದ ಸಾಮಾನ್ಯ ಜನರು ಬೀದಿಪಾಲಾಗಿದ್ದಾರೆ. ಗಾಜಾಪಟ್ಟಿಯಲ್ಲಿ ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಾಗೇ ಲೆಕ್ಕವಿಲ್ಲದಷ್ಟು ಯುವಕರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಹೋರಾಡುವಾಗ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಿದೆ. ವಿಶ್ವಸಂಸ್ಥೆ ಕೂಡ ಹಲವು ದಶಕಗಳಿಂದ ಇಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಪಟ್ಟರೂ ವರ್ಕೌಟ್ ಆಗುತ್ತಿಲ್ಲ.












Click it and Unblock the Notifications